ರಾಜ್ಯ ಬಿಜೆಪಿಗೆ ನಡುಕ ಹುಟ್ಟಿಸಿದ ‘ಪುತ್ತಿಲ ಪರಿವಾರ’ – ಪುತ್ತಿಲ ಜೊತೆ ಪೇಜಾವರ ಶ್ರೀ, ಕೇಂದ್ರ ಸಚಿವರ ಮಾತುಕತೆ
- ಕರ್ನಾಟಕ
- June 12, 2023
- No Comment
- 243
ನ್ಯೂಸ್ ಆ್ಯರೋ : ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆ ಅನೇಕ ಅಚ್ಚರಿಯ ಫಲಿತಾಂಶಗಳಿಗೆ ಕಾರಣವಾಗಿತ್ತು. ಈ ಪೈಕಿ ರಾಜ್ಯದ ಗಮನ ಸೆಳೆದಿದ್ದು ಪುತ್ತೂರು ಕ್ಷೇತ್ರ. ಯಾಕೆಂದರೆ ಬಿಜೆಪಿಯ ಭದ್ರ ಕೋಟೆ ಎಂದೇ ಹೆಸರಾಗಿದ್ದ ಇಲ್ಲಿ ಎಲ್ಲರ ನಿರೀಕ್ಷೆಯನ್ನು ಹುಸಿಗೊಳಿಸಿ ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ದೂಡಿ ಹಿಂದು ಸಂಘಟನೆಯ ನಾಯಕ ಅರುಣ್ ಕುಮಾರ್ ಪುತ್ತಿಲ ಕಮಲ ಪಡೆಯ ರಾಷ್ಟ್ರೀಯ ನಾಯಕರನ್ನು ದಂಗು ಬಡಿಸಿದ್ದರು. ಇದೀಗ ಅವರೊಂದಿಗೆ ಸಂಧಾನ ನಡೆಸಲಾಗುತ್ತಿದೆ ಎನ್ನುವ ಸುದ್ದಿ ಕೇಳಿ ಬಂದಿದೆ.
ಕೇಂದ್ರ ಸಚಿವರೊಬ್ಬರ ಜೊತೆ ದಿಲ್ಲಿಯಲ್ಲಿ ಪುತ್ತಿಲ ಮಾತುಕತೆ ನಡೆಸಿದ್ದಾರೆ. ಅಲ್ಲದೆ ಪೇಜಾವರ ಶ್ರೀ ಸೇರಿದಂತೆ ಇತರ ಸ್ವಾಮೀಜಿಗಳೊಂದಿಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಲೋಕಸಭೆ ಚುನಾವಣೆಗೆ ಪುತ್ತಿಲ ಸ್ವತಂತ್ರವಾಗಿ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಹರಡಿದ್ದು, ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಈ ಹಿನ್ನಲೆಯಲ್ಲಿ ಪುತ್ತಿಲ ಜೊತೆ ಸಂಧಾನ ನಡೆಸುವುದು ಬಿಜೆಪಿಗೆ ಬಹಳ ಮುಖ್ಯ ಎಂದು ವಿಶ್ಲೇಷಿಸಲಾಗುತ್ತಿದೆ.
ಬಿಜೆಪಿಗೆ ತಲೆನೋವಾದ ‘ಪುತ್ತಿಲ ಪರಿವಾರ’
ಅರುಣ್ ಕುಮಾರ್ ಪುತ್ತಿಲ ಲೋಕಸಭೆಗೆ ಸ್ಪರ್ಧಿಸಬೇಕು ಎನ್ನುವುದು ಅವರ ಬೆಂಬಲಿಗರ ಆಗ್ರಹ. ಇದೇ ಬೇಡಿಕೆಯನ್ನಿಟ್ಟುಕೊಂಡು ಪುತ್ತಿಲ ಪರಿವಾರ ಎನ್ನುವ ಸಂಘಟನೆ ಅಸ್ತಿತ್ವಕ್ಕೆ ಬಂದಿದೆ. ಪುತ್ತೂರಿನಲ್ಲಿ ಆರಂಭವಾದ ಇದು ಈಗ ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಎಲ್ಲ ಕಡೆ ಹಬ್ಬುತ್ತಿದೆ. ಬಿಜೆಪಿ ಮತ್ತು ಸಂಘ ಪರಿವಾರದ ಅತೃಪ್ತ ನಾಯಕರು ಇತ್ತ ಮುಖ ಮಾಡಿದ್ದಾರೆ. ಇದು ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ ಎಂದು ಹೇಳಲಾಗುತ್ತಿದೆ.
ಸಂಧಾನದಲ್ಲೇನಾಯಿತು?
ಪ್ರಧಾನಿ ಮೋದಿ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ರಾಜ್ಯದ ಕೇಂದ್ರ ಸಚಿವರೊಬ್ಬರು ಪುತ್ತಿಲ ಜೊತೆಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಹಿಂದುತ್ವ ಮತ್ತು ಪಕ್ಷಕ್ಕೆ ಅನುಕೂಲವಾಗುವ ರೀತಿಯ ಬೇಡಿಕೆಯನ್ನು ಪುತ್ತಿಲ ಮುಂದಿಟ್ಟಿದ್ದು, ಅದನ್ನು ಕೇಂದ್ರಕ್ಕೆ ಮನವರಿಕೆ ಮಾಡಿ ಸಮಸ್ಯೆ ಪರಿಹರಿಸುವ ಭರವಸೆ ಸಿಕ್ಕಿದೆ ಎನ್ನಲಾಗಿದೆ.
ಪೇಜಾವರ ಶ್ರೀ ಜೊತೆ ಮಾತುಕತೆ
ಇತ್ತ ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರೊಂದಿಗೂ ಪುತ್ತಿಲ ಚರ್ಚೆ ನಡೆಸಿದ್ದಾರೆ. ಶೀಘ್ರ ಬಿಕ್ಕಟ್ಟು ಶಮನವಾಗುವ ವಿಶ್ವಾಸವನ್ನು ಸ್ವಾಮೀಜಿ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.