ಮುಂದುವರಿದ ಆದಿಪುರುಷ್ ಚಿತ್ರದ ಕ್ರೇಜ್ -ರಾಮ ಮಂದಿರಗಳಿಗೆ ಉಚಿತ ಟಿಕೆಟ್ ಘೋಷಣೆ..!!
- ಮನರಂಜನೆ
- June 12, 2023
- No Comment
- 152
ನ್ಯೂಸ್ ಆ್ಯರೋ : ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳ ಪೈಕಿ ‘ಆದಿಪುರುಷ್’ ಮುಂಚೂಣಿಯಲ್ಲಿ ನಿಲ್ಲುತ್ತದೆ. 500 ಕೊಟಿ ರೂ. ಬಜೆಟ್ ನಲ್ಲಿ ತಯಾರಾದ ಈ ತ್ರಿಡಿ ಚಿತ್ರ ಜೂ. 16ರಂದು ಪ್ಯಾನ್ ಇಂಡಿಯಾದಲ್ಲಿ ತೆರೆ ಕಾಣಲಿದೆ. ರಾಮಾಯಣ ಆಧರಿಸಿದ ಈ ಚಿತ್ರದ ಟ್ರೇಲರ್, ಹಾಡುಗಳು ಜನ ಮನ ಸೆಳೆದಿವೆ.
ಪ್ರಭಾಸ್-ಕೃತಿ ಸನೂನ್ ಅಭಿನಯದ ಈ ಸಿನಿಮಾದ ಮುಂಗಡ ಟಿಕೆಟ್ ಬಿಸಿ ಬಿಸಿ ದೋಸೆಯಂತೆ ಬಿಕರಿಯಾಗುತ್ತಿದೆ. ಇದೀಗ ಈ ಚಿತ್ರವನ್ನು ಪ್ರತೀ ಹಳ್ಳಿಗೂ ತಲುಪಿಸಬೇಕೆಂಬ ಉದ್ದೇಶದಿಂದ ಶ್ರೀರಾಮನ ಭಕ್ತ ಗಂಡ್ರ ಶ್ರೀನಿವಾಸ್ ರಾವ್ ಉಚಿತ ಟಿಕೆಟ್ ವಿತರಣೆಗೆ ಮುಂದಾಗಿದ್ದಾರೆ.
ದಕ್ಷಿಣ ಭಾರತದ ಸಿನಿಮಾಗಳ ಖ್ಯಾತ ಇವೆಂಟ್ ಕಂಪೆನಿ ಶ್ರೇಯಸ್ ಮೀಡಿಯಾ ವತಿಯಿಂದ ಆಂಧ್ರ ಪ್ರದೇಶದ ಖಮ್ಮಂ ಜಿಲ್ಲೆಯಲ್ಲಿನ ಪ್ರತಿ ರಾಮ ಮಂದಿರಕ್ಕೆ ನೂರು ಪ್ಲಸ್ ಒಂದು ಉಚಿತ ಟಿಕೆಟ್ ನೀಡುವುದಾಗಿ ಶ್ರೀನಿವಾಸ್ ರಾವ್ ಹೇಳಿದ್ದಾರೆ. ಟಿಕೆಟ್ ಗಾಗಿ ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕಿಸುವಂತೆಯೂ ಕೋರಿದ್ದಾರೆ.
”ಶ್ರೀರಾಮ ಮತ್ತು ಸೀತಾಮಾತೆಯ ಕಥೆ ಎಲ್ಲರಿಗೂ ಮಾದರಿ. ಆ ದಿವ್ಯ ಇತಿಹಾಸವೇ ಆದಿಪುರುಷ್ ಚಿತ್ರ. ಆ ಇತಿಹಾಸವನ್ನು ಎಲ್ಲರಿಗೂ ತಲುಪಿಸಲು ಉಚಿತ ಟಿಕೆಟ್ ಘೋಷಣೆ ಮಾಡಿದ್ದೇವೆ” ಎಂದು ಶ್ರೀನಿವಾಸ್ ರಾವ್ ಟ್ವೀಟ್ ಮಾಡಿದ್ದಾರೆ.
ಈ ಹಿಂದೆ ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ಟಾಲಿವುಡ್ ನಟ ರಾಮ್ ಚರಣ್ ಆದಿಪುರುಷ್ ಚಿತ್ರದ ತಲಾ 10 ಸಾವಿರ ಟಿಕೆಟ್ ಖರೀದಿಸಿದ್ದು ಸುದ್ದಿಯಾಗಿತ್ತು.