ಅನ್ನಭಾಗ್ಯ ಯೋಜನೆಗೆ ಮುಹೂರ್ತ ನಿಗದಿ – ಯಾವಾಗ ಜಾರಿಗೆ ಬರಲಿದೆ ಈ ಬಹು ನಿರೀಕ್ಷಿತ ಗ್ಯಾರಂಟಿ?
- ರಾಜಕೀಯ
- June 12, 2023
- No Comment
- 128
ನ್ಯೂಸ್ ಆ್ಯರೋ : ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಘೋಷಿಸಿದಂತೆ ಒಂದೊಂದೇ ಯೋಜನೆ ಜಾರಿಗೆ ಮುಂದಾಗಿದೆ. ಇದರ ಮೊದಲ ಹಂತವಾಗಿ ರವಿವಾರ ಶಕ್ತಿ ಯೋಜನೆ ಜಾರಿಗೆ ಬಂದಿದ್ದರೆ ಇದೀಗ ಅನ್ನಭಾಗ್ಯ ಯೋಜನೆ ಜಾರಿಗೆ ಮುಹೂರ್ತ ನಿಗದಿಯಾಗಿದೆ.
ಅನ್ನ ಭಾಗ್ಯ ಯೋಜನೆ ಯಾವಾಗ ಜಾರಿ?
ರಾಜ್ಯದ ಜನತೆಯ ಮತ್ತೊಂದು ಬಹು ನಿರೀಕ್ಷಿತ ಯೋಜನೆ ಅನ್ನಭಾಗ್ಯ. ಫಲಾನುಭವಿಗಳಿಗೆ ಪ್ರತಿ ತಿಂಗಳು 10 ಕೆ.ಜಿ. ಅಕ್ಕಿ ವಿತರಿಸುವ ಈ ಯೋಜನೆಗೆ ಜು. 1ರಂದು ಚಾಲನೆ ನೀಡಲಾಗುವುದು. ”ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ 2ನೇ ಗ್ಯಾರಂಟಿಯನ್ನು ಉದ್ಘಾಟಿಸಲಾಗುವುದು” ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.
”ಕಾರ್ಯಕ್ರಮಕ್ಕೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಸ್ವತಃ ನಾನೇ ನೋಡಿಕೊಳ್ಳುವುದಾಗಿ ಮುನಿಯಪ್ಪ ಹೇಳಿದ್ದಾರೆ. ಈಗಾಗಲೇ ಒಂದು ಗ್ಯಾರಂಟಿ ಆರಂಭಿಸಿದ್ದು, ಹಂತ ಹಂತವಾಗಿ ಉಳಿದ ಯೋಜನೆ ಜಾರಿಗೊಳಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಭೋಗ ನಂದೀಶ್ವರ ದೇವಸ್ಥಾನಕ್ಕೆ ಕುಟುಂಬ ಸಮೇತ ಆಗಮಿಸಿದ್ದ ಮುನಿಯಪ್ಪ ದೇವರ ದರ್ಶನ ಪಡೆದರು. ”ಕಾಂಗ್ರೆಸ್ ಸರಕಾರ ನುಡಿದಂತೆ ನಡೆಯಲಿದೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.