
ಚೈತ್ರಾ ಕುಂದಾಪುರ ಬೃಹನ್ನಾಟಕ ಪ್ರಕರಣ – ಸ್ವಾಮೀಜಿ ಬಂಧನವಾದ್ರೆ ದೊಡ್ಡವ್ರು ಸಿಕ್ಕಿಹಾಕಿಕೊಳ್ತಾರೆ : ಸಿಸಿಬಿ ಬಂಧನದಲ್ಲಿ ಚೈತ್ರಾ ಟಾಕ್
- ಕರ್ನಾಟಕ
- September 14, 2023
- No Comment
- 47
ನ್ಯೂಸ್ ಆ್ಯರೋ : ಬೆಂಗಳೂರಿನ ಉದ್ಯಮಿ ಗೋವಿಂದಬಾಬು ಪೂಜಾರಿ ಅವರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಐದು ಕೋಟಿ ರೂಪಾಯಿ ಪಡೆದು, ವಂಚನೆ ಮಾಡಿರುವ ಆರೋಪದ ಮೇರೆಗೆ ಬಂಧಿತರಾಗಿರುವ ಚೈತ್ರಾ ಕುಂದಾಪುರಳನ್ನು ಇಂದು ಬೆಳಗ್ಗೆ ಮಹಿಳಾ ಸಾಂತ್ವನ ಕೇಂದ್ರದಿಂದ ಸಿಸಿಬಿ ಕಚೇರಿಗೆ ಕರೆತರಲಾಗಿದ್ದು, ಈ ವೇಳೆ ಆಕೆ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾಳೆ.
ಸಿಸಿಬಿ ಕಚೇರಿ ಮುಂದೆ ಪೊಲೀಸ್ ವಾಹನದಿಂದ ಕೆಳಗಡೆ ಇಳಿಯುತ್ತಿದ್ದಂತೆ ಮಾಧ್ಯಮಗಳ ಕ್ಯಾಮೆರಾ ಮುಂದೆ ಮಾತನಾಡಿದ ಚೈತ್ರಾ, ಸ್ವಾಮೀಜಿ ಬಂಧನವಾಗಲಿ ಆಗ ಎಲ್ಲ ಸತ್ಯ ಹೊರಗಡೆ ಬರುತ್ತದೆ. ಇದರಲ್ಲಿ ದೊಡ್ಡ ದೊಡ್ಡವರ ಹೆಸರು ಕೂಡ ಬಹಿರಂಗವಾಗುತ್ತದೆ. ಇಂದಿರಾ ಕ್ಯಾಂಟೀನ್ ಬಿಲ್ಗಾಗಿ ಈ ರೀತಿ ಷಡ್ಯಂತ್ರ ಮಾಡಿದ್ದಾರೆ ಎಂದು ಹೇಳಿದ್ದಾಳೆ.
ಚೈತ್ರಾಳ ಈ ಹೇಳಿಕೆ ಇದೀಗ ಪ್ರಕರಣಕ್ಕೆ ಹೊಸ ತಿರುವು ನೀಡಿದ್ದು, ಅಭಿನವ ಹಾಲಶ್ರೀ ವಿಚಾರ ಪ್ತಸ್ತಾಪಿಸಿದ್ದೇಕೆ ಚೈತ್ರಾ ಕುಂದಾಪುರ? ಅವರು ಅರೆಸ್ಟ್ ಆಗಲಿ ಸತ್ಯ ಹೊರ ಬರುತ್ತೆ ಅಂದಿದ್ದೇಕೆ? ಸ್ವಾಮೀಜಿ ನೇತೃತ್ವದಲ್ಲಿ ನಡೆದಿರುವುದಾದರೂ ಏನು? ಮೂವರ ನಡುವೆ ನಡೆದ ಮಾತುಕತೆ ಆದರೂ ಏನು? ಈ ಪ್ರಕರಣದಲ್ಲಿ ದೊಡ್ಡವರು ಸಹ ಶಾಮೀಲು ಆಗಿದ್ದಾರಾ? ಸ್ವಾಮೀಜಿ ಬಂಧನದ ಬಳಿಕ ಎಲ್ಲವೂ ಗೊತ್ತಾಗಲಿದೆಯಾ? ಎಂಬ ಪ್ರಶ್ನೆ ಉದ್ಭವಿಸಿವೆ.
ಹೊಸಪೇಟೆ ಜಿಲ್ಲೆಯ ಹಿರೇ ಹಡಗಲಿಯ ಹಾಲುಸ್ವಾಮಿ ಮಠದ ಅಭಿನವ ಶ್ರೀ ಹಾಲಶ್ರೀ ಸ್ವಾಮೀಜಿ ಕೂಡ ಈ ಪ್ರಕರಣದಲ್ಲಿ ಇದ್ದು, ಎ3 ಆರೋಪಿಯಾಗಿದ್ದಾರೆ. ಆದ್ರೆ, ಚೈತ್ರಾ ಕುಂದಾಪುರ ಅರೆಸ್ಟ್ ಆಗುತ್ತಿದ್ದಂತೆಯೇ ಸ್ವಾಮೀಜಿ ನಾಪತ್ತೆಯಾಗಿದ್ದಾರೆ. ಮಠಕ್ಕೆ ಬರದೇ ಫೋನ್ ಸಂಪರ್ಕಕ್ಕೆ ಸಿಗದೇ ಪರಾರಿ ಆಗಿದ್ದಾರೆ. ಹೀಗಾಗಿ ಸಿಸಿಬಿ ಪೊಲೀಸರು ಸಹ ಸ್ವಾಮೀಜಿ ಬಂಧನಕ್ಕೆ ಬಲೆ ಬೀಸಿದ್ದು, ಅವರು ಸಿಕ್ಕ ಬಳಿಕ ಈ ಪ್ರಕರಣ ಮತ್ತಷ್ಟು ಸ್ಫೋಟಕ ಅಂಶಗಳು ಬಯಲಾಗುವ ನಿರೀಕ್ಷೆ ಇದೆ.