ಜೋರಾಗಿ ಮಳೆ ಬಂದು ನಿಂತ ಮೇಲೆ ಗಿಡಗಳಿಗೆ ನೀರು ಹಾಕಿದ ಸಿಬ್ಬಂದಿ ! – ಬಿಬಿಎಂಪಿ ಮೂರ್ಖತನಕ್ಕೆ ಬೆಂಡೆತ್ತಿದ ನೆಟ್ಟಿಗರು..!!
- ಕರ್ನಾಟಕ
- June 21, 2023
- No Comment
- 69
ನ್ಯೂಸ್ ಆ್ಯರೋ : ಜೋರಾಗಿ ಮಳೆ ಬಂದು ದಿನ ಕಳೆದಿಲ್ಲ, ಅಷ್ಟರಲ್ಲೇ ಯಾರಾದರೂ ಗಿಡಗಳಿಗೆ ನೀರು ಹಾಕಿದರೆ ಏನಂತ ಕರಿತಾರೆ? ಕರೆಯೋದೇನು ಶತಮೂರ್ಖರು ಅಂತ ಬೆಂಡೆತ್ತಿ ಬಿಡ್ತಾರೆ. ಸದ್ಯ, ಬಿಬಿಎಂಪಿ ಕೂಡ ಇಂತಹದ್ದೊಂದು ಮೂರ್ಖತನದ ಕೆಲಸ ಮಾಡಿ ನೆಟ್ಟಿಗರಿಂದ ಟೀಕೆಗೆ ಒಳಗಾಗಿದೆ.
ಏನಿದು ಘಟನೆ?
ಜೋರಾಗಿ ಮಳೆ ಬಂದು ನಿಂತ ಕೆಲವೇ ಗಂಟೆಗಳಲ್ಲಿ ಬಿಬಿಎಂಪಿ ಸಿಬ್ಬಂದಿ ರಸ್ತೆ ಬದಿಯ ಗಿಡಗಳಿಗೆ ನೀರು ಹಾಕಿದ್ದು, ಇದೀಗ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ.
ರಾಜ್ಯಕ್ಕೆ ಮುಂಗಾರು ಪ್ರವೇಶವಾಗಿರುವ ಕಾರಣ ಎಲ್ಲೆಡೆ ಮಳೆಯಾಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲೂ ಕೂಡ ಇಂದು ಮುಂಜಾನೆಯಿಂದಲೇ ಭರ್ಜರಿ ಮಳೆಯಾಗಿದ್ದು, ಮಳೆಯ ಆರ್ಭಟಕ್ಕೆ ಬೆಂಗಳೂರಿಗರು ಪರದಾಡುವಂತಾಗಿದೆ. ಮಳೆ ನಿಂತ ಮೇಲೂ ಮೋಡ ಕವಿದ ವಾತಾವರಣ ನಗರದ ತುಂಬ ಆವರಿಸಿತ್ತು. ಬಿಸಿಲಿನ ಒಂದೇ ಒಂದು ಕಿರಣವು ಕೂಡ ಬೆಂಗಳೂರು ಪ್ರವೇಶಿಸಿರಲಿಲ್ಲ. ಇಂತಹ ವಾತಾವರಣವಿರುವಾಗ ಬಿಬಿಎಂಪಿ ದೊಡ್ಡ ಎಡವಟ್ಟು ಮಾಡಿಕೊಂಡಿದೆ. ಮಳೆ ನಿಂತ ಮೇಲೆ ಬಿಬಿಎಂಪಿ ಸಿಬ್ಬಂದಿಗಳು ಟ್ಯಾಂಕರ್ ಮೂಲಕ ನಗರದ ಪ್ರಮುಖ ರಸ್ತೆಗಳ ಬದಿಯಲ್ಲಿರುವ ಗಿಡಗಳಿಗೆ ನೀರು ಹಾಯಿಸಿದ್ದಾರೆ.
ಮಳೆ ನಿಂತ ಕೆಲವು ಗಂಟೆಗಳಲ್ಲೇ ಮೂರ್ಖರಂತೆ ಗಿಡಗಳಿಗೆ ಟ್ಯಾಂಕರ್ ಮೂಲಕ ನೀರು ಹಾಕುವ ದೃಶ್ಯವನ್ನು ಕೆಲವರು ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಕೆಂಡಾಮಂಡಲವಾದ ನೆಟ್ಟಿಗರು ‘ಇಷ್ಟೊಂದು ಮಳೆ ಬಂದು ನಿಂತ ಮೇಲೆ ಗಿಡಗಳಿಗೆ ನೀರು ಹಾಕಬೇಕಾ? ಮಳೆ ಬಂದ ಮೇಲೂ ಟ್ಯಾಂಕರ್ ಮೂಲಕ ನೀರು ತಂದು ಹಾಕಬೇಕಾ? ಎಂದೆಲ್ಲ ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ. ಆದರೆ ಇದ್ಯಾವುದಕ್ಕೂ ಬಿಬಿಎಂಪಿ ಸ್ಪಷ್ಟನೆ ನೀಡಿಲ್ಲ.