“ದೈವ ಕೋಲ” ಪ್ರದರ್ಶನದ ವಸ್ತುವಲ್ಲ, ಅದು ನಂಬಿಕೆ – ಪ್ರತಿಭಾ ಕಾರಂಜಿಯಲ್ಲಿ ಅವಕಾಶ ನೀಡಿದ್ದಕ್ಕೆ ಶಾಸಕ ಸುನೀಲ್ ಕುಮಾರ್ ವಿರೋಧ
- ರಾಜಕೀಯ
- July 6, 2023
- No Comment
- 193
ನ್ಯೂಸ್ ಆ್ಯರೋ : ತುಳುನಾಡಿನಲ್ಲಿ ಸಾವಿರಾರು ವರ್ಷಗಳಿಂದ ದೈವಗಳನ್ನು ನಂಬಿಕೊಂಡು ಬರಲಾಗುತ್ತಿದೆ. ಕೋಲ, ತಂಬಿಲ ಇವುಗಳೆಲ್ಲ ತುಳುನಾಡಿನ ಜನರ ನಂಬಿಕೆಯಾಗಿದೆ. ಇದೊಂದು ಪ್ರದರ್ಶನದ ವಸ್ತುವಲ್ಲ, ಬದಲಾಗಿ ಜನರ ನಂಬಿಕೆ ಆದ್ದರಿಂದ ಶಾಲಾ ಪ್ರತಿಭಾ ಕಾರಂಜಿಯಲ್ಲಿ ದೈವ ಕೋಲಕ್ಕೆ ಅವಕಾಶ ನೀಡಬಾರದು ಎಂದು ಮಾಜಿ ಸಚಿವ ಸುನೀಲ್ ಕುಮಾರ್ ವಿಧಾನಸಭೆಯಲ್ಲಿ ಆಗ್ರಹಿಸಿದ್ದಾರೆ.
ಇತ್ತೀಚೆಗಷ್ಟೇ ಶಿಕ್ಷಣ ಇಲಾಖೆಯು ಶಾಲಾ ಪ್ರತಿಭಾ ಜಾರಂಜಿಗಳಲ್ಲಿ ದೈವ ಕೋಲಕ್ಕೆ ಅವಕಾಶ ನೀಡಿ ಆದೇಶ ಹೊರಡಿಸಿತ್ತು. ಇದರಿಂದಾಗಿ ಸಾಮಾಜಿಕ ಜಾಲತಾಣ ಸೇರಿದಂತೆ ಹಲವೆಡೆ ತೀವ್ರ ವಿರೋಧವೂ ವ್ಯಕ್ತವಾಗಿತ್ತು.
ಇದೀಗ ಮಾಜಿ ಸಚಿವ ಹಾಗೂ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಶಾಸಕರಾದ ವಿ.ಸುನೀಲ್ ಕುಮಾರ್ ವಿಧಾನ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ ಶಿಕ್ಷಣ ಇಲಾಖೆಯ ಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.
ಸುನೀಲ್ ಕುಮಾರ್ ಹೇಳಿದ್ದೇನು?
ಈ ವಿಚಾರದ ಬಗ್ಗೆ ವಿಧಾನ ಸಭೆಯಲ್ಲಿ ಮಾತನಾಡಿದ ಸುನೀಲ್ ಕುಮಾರ್, ‘ದೈವ ಕೋಲ ಎಂಬುದು ತುಳುನಾಡಿನ ಮತ್ತು ತುಳು ಜನರ ಬಹುದೊಡ್ಡ ನಂಬಿಕೆ. ಆದರೆ ಇದೀಗ ಶಿಕ್ಷಣ ಇಲಾಖೆ ಶಾಲಾ ಪ್ರತಿಭಾ ಕಾರಂಜಿಯಲ್ಲಿ ಜನಪದ ವಿಭಾಗದಲ್ಲಿ ದೈವ ಕೋಲ ಪ್ರದರ್ಶನಕ್ಕೆ ಅವಕಾಶ ನೀಡಿರುವುದು ತಪ್ಪು.
ದೈವ ಕೋಲ ಎಂಬುದು ಪ್ರದರ್ಶನದ ವಸ್ತುವಲ್ಲ. ಆದ್ದರಿಂದ ಸರ್ಕಾರ ಈ ಆದೇಶವನ್ನು ಹಿಂಪಡೆಯಬೇಕು’ ಎಂದು ಒತ್ತಾಯಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.