ಬುಡಕಟ್ಟು ಕಾರ್ಮಿಕನ ಮೇಲೆ ಮೂತ್ರ ವಿಸರ್ಜಿಸಿದ ಪ್ರಕರಣ – ಕಾರ್ಮಿಕನ ಕಾಲು ತೊಳೆದು, ಕ್ಷಮೆ ಕೇಳಿದ ಮಧ್ಯಪ್ರದೇಶ ಮುಖ್ಯಮಂತ್ರಿ..!
- ರಾಷ್ಟ್ರೀಯ ಸುದ್ದಿ
- July 6, 2023
- No Comment
- 200
ನ್ಯೂಸ್ ಆ್ಯರೋ : ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಭಾರೀ ವೈರಲ್ ಆಗಿತ್ತು. ಆ ವಿಡಿಯೋದಲ್ಲಿ ವಿಕೃತನೊಬ್ಬ ಅಮಾಯಕ ಬುಡಕಟ್ಟು ಜನಾಂಗದ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿ ಅಮಾನವೀಯವಾಗಿ ನಡೆದುಕೊಂಡಿದ್ದ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಮಧ್ಯಪ್ರದೇಶ ಸರ್ಕಾರದ ಮೇಲೆ ತೀವ್ರ ಒತ್ತಡ ಬಿದ್ದಿತ್ತು, ಜೊತೆಗೆ ದರ್ಪ ತೋರಿದ ಯುವಕನ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯ ಕೇಳಿ ಬಂದಿತ್ತು. ಈ ವಿಚಾರ ಅಲ್ಲಿನ ಮುಖ್ಯಮಂತ್ರಿಯವರೆಗೆ ತಲುಪಿತ್ತು. ಇದೀಗ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಸಂತ್ರಸ್ಥನ ಕಾಲು ತೊಳೆದು ಕ್ಷಮೆ ಕೇಳಿದ್ದು, ಈ ವಿಡಿಯೋ ವೈರಲ್ ಆಗಿದೆ.
ಕಾರ್ಮಿನ ಕಾಲು ತೊಳೆದ ಮುಖ್ಯಮಂತ್ರಿ!
ಮಧ್ಯಪ್ರದೇಶದ ಬಿಜೆಪಿ ಶಾಸಕನ ಆಪ್ತ ಎನ್ನಲಾದ ಪ್ರವೇಶ್ ಶುಕ್ಲ ಎಂಬಾತ 6 ತಿಂಗಳ ಹಿಂದೆ ಅಮಾಯಕನೊಬ್ಬನ ಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಇದೀಗ ದೌರ್ಜನ್ಯಕ್ಕೆ ಒಳಗಾದ ದಶ್ಮತ್ ರಾವತ್ ನನ್ನು ಭೋಪಾಲ್ ನಲ್ಲಿರುವ ತಮ್ಮ ನಿವಾಸಕ್ಕೆ ಕರೆಸಿಕೊಂಡಿರುವ ಸಿ.ಎಂ.ಶಿವರಾಜ್ ಸಿಂಗ್ ಆತನ ಕಾಲು ತೊಳೆದು ಕ್ಷಮೆ ಕೇಳಿ, ಆತನಿಗೆ ಹೂವಿನ ಹಾರ ಹಾಕಿ ಗೌರವಿಸಿದ್ದಾರೆ.
ಆರೋಪಿಯ ಆಸ್ತಿ ಮೇಲೆ ಬುಲ್ಡೋಜರ್ ಪ್ರಯೋಗ!
ಇನ್ನೊಂದೆಡೆ ಅಮಾಯಕನ ಮೇಲೆ ಮೂತ್ರ ವಿಸರ್ಜನೆ ಮಾಡಿ ದರ್ಪ ತೋರಿದ ಬಿಜೆಪಿ ಶಾಸಕನ ಆಪ್ತ ಎನ್ನಲಾದ ಪ್ರವೇಶ್ ಶುಕ್ಲನನ್ನು ಮುಖ್ಯಮಂತ್ರಿ ಆದೇಶದ ಮೇರೆಗೆ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಆತನ ಅಕ್ರಮ ನಿರ್ಮಾಣದ ಕಟ್ಟಡಗಳ ಮೇಲೆ ಬುಲ್ಡೋಜರ್ ದಾಳಿ ನಡೆಸಿದ್ದಾರೆ. ಆರೋಪಿಗೆ ಕಠಿಣ ಶಿಕ್ಷೆಯ ಬಗ್ಗೆ ವ್ಯಾಪಕ ಜನಾಭಿಪ್ರಾಯ ಬಂದಿರುವ ಬೆನ್ನಲ್ಲೇ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಈ ಕ್ರಮ ಕೈಗೊಂಡಿದ್ದು ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕಾರ್ಮಿಕನಿಂದ ಗಿಡ ನೆಡಿಸಿದ ಮುಖ್ಯಮಂತ್ರಿ!
ಈ ಅಮಾನವೀಯ ದೌರ್ಜನ್ಯದ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಶಿವರಾಜ್ ಸಿಂಗ್, ‘ಆರೋಪಿ ಪ್ರವೇಶ್ ಶುಕ್ಲ ಮಾನವೀಯತೆಗೆ ಕಳಂಕವಿದ್ದಂತೆ. ಆತ ಮಾಡಿದ ದೌರ್ಜನ್ಯಕ್ಕೆ ಕಠಿಣ ಶಿಕ್ಷೆಯೂ ಸಾಲದು. ಆತನನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ. ಇದು ಎಲ್ಲರಿಗೂ ಪಾಠವಾಗಬೇಕು’ ಎಂದು ಗುಡುಗಿದ್ದಾರೆ. ಅನಂತರ ಸಂತ್ರಸ್ತ ವ್ಯಕ್ತಿಯ ಕಾಲು ತೊಳೆದು, ಕ್ಷಮೆ ಕೇಳಿದ ಅವರು ಬಳಿಕ ಆತನನ್ನು ಸ್ಮಾರ್ಟ್ ಸಿಟಿ ಪಾರ್ಕಿಗೆ ಕರೆದೊಯ್ದು ಆತನ ಕೈಯಿಂದ ಗಿಡ ನೆಡಿಸಿದ್ದಾರೆ.