ರಾಜ್ಯದಲ್ಲಿ ಸದ್ದು ಮಾಡುತ್ತಿದೆ ಪೆನ್ ಡ್ರೈವ್ ರಾಜಕೀಯ – ರಹಸ್ಯ ಹೊರ ಬಂದರೆ ಸಚಿವರೊಬ್ಬರು ರಾಜೀನಾಮೆ : HDK
- ರಾಜಕೀಯ
- July 6, 2023
- No Comment
- 145
ನ್ಯೂಸ್ ಆ್ಯರೋ : ತಮ್ಮ ಬಳಿ ಪ್ರಭಾವಿ ರಾಜಕಾರಣಿಗಳ ರಹಸ್ಯವನ್ನೊಳಗೊಂಡ ಪೆನ್ ಡ್ರೈವ್ ಇರುವುದಾಗಿ ಸಮಯ ಬಂದಾಗ ಅದನ್ನು ಬಹಿರಂಗ ಪಡಿಸುವುದಾಗಿ ಹೇಳಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಇದು ಹೊರ ಬಂದರೆ ಸಚಿವರೊಬ್ಬರು ರಾಜೀನಾಮೆ ನೀಡಬೇಕಾಗುತ್ತದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಸಮಯ ಬಂದಾಗ ಬಹಿರಂಗ
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪೆನ್ ಡ್ರೈವ್ ನಲ್ಲಿ ಏನಿದೆ ಎನ್ನುವುದರ ಕುರಿತು ಈಗ ಸರಕಾರ ಮತ್ತು ಸಾರ್ವಜನಿಕರು ಚರ್ಚೆ ನಡೆಸುತ್ತಿದ್ದಾರೆ. ಕೆಲವರು ಇದೂ ಒಂದು ಗಿಮಿಕ್ ಎನ್ನುತ್ತಿದ್ದಾರೆ. ಆದರೆ ಈಗಲೇ ಈ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ಯಾವುದಕ್ಕೂ ಸಮಯ ಬರಬೇಕು. ಆಗ ನಾನು ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.
ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೆ.ಎಸ್.ಆರ್.ಟಿ.ಸಿ. ಚಾಲಕ ಜಗದೀಶ್ ಅವರ ಆರೋಗ್ಯ ವಿಚಾರಿಸಿದ ಎಚ್.ಡಿ.ಕೆ. ಚಾಲಕ ಆತ್ಮಹತ್ಯೆ ಯತ್ನಕ್ಕೆ ಕಾರಣ, ಕಿರುಕುಳದ ಬಗ್ಗೆ ಬರೆದಿಟ್ಟಿದ್ದಾರೆ. ಸದ್ಯ ಅವರು ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ವರ್ಗಾವಣೆ ಹಿಂದೆ ಸಚಿವರ ಒತ್ತಡವಿತ್ತು ಎನ್ನುವುದನ್ನು ಅದಿಕಾರಿಗಳೇ ಹೇಳಿದ್ದಾರೆ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಚಾಲಕನ ಆತ್ನಹತ್ಯೆ ಯತ್ನ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿಲ್ಲ. ಪೊಲೀಸರನ್ನು ಕೇಳಿದರೆ ವ್ಯಕ್ತಿ ಇನ್ನೂ ಸತ್ತಿಲ್ಲದ ಕಾರಣ ಎಫ್.ಐ.ಆರ್. ದಾಖಲಿಸಲಿಲ್ಲ ಎಂದಿದ್ದಾರೆ. ಆದರೆ ಜಗದೀಶ್ ಎಲ್ಲವನ್ನೂ ಬರೆದಿಟ್ಟಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೋಟ್ ನಲ್ಲಿ ಉಲ್ಲೇಖವಾಗಿರುವ ಸಚಿವರನ್ನು ವಜಾ ಮಾಡಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ವರ್ಗಾವಣೆ ದಂಧೆ
ರಾಜ್ಯದಲ್ಲಿ ಹೊಸ ಸರಕಾರ ಅದಿಕಾರಕ್ಕೆ ಬಂದು 50 ದಿನಗಳಲ್ಲೇ ವರ್ಗವಣೆ ದಂಧೆ ನಡೆಯುತ್ತಿದೆ. ಯಾವುದೇ ಹುದ್ದೆಯ ವರ್ಗಾವಣೆಗೆ ಇಂತಿಷ್ಟು ಹಣ ಎಂದು ನಿಗದಿಯಾಗಿದೆ. ಇದು ಮುಖ್ಯಮಂತ್ರಿ ನೇತೃತ್ವದಲ್ಲಿಯೇ ನಡೆಯುತ್ತಿದೆ. ಜೊತೆಗೆ ಪ್ರಮುಖ ಹುದ್ದೆಗಳೆಲ್ಲ ದುಡ್ಡಿನಿಂದಲೇ ನಡೆಯುತ್ತಿದೆ ಎಂದು ದೂರಿದರು.
ಬಿಜೆಪಿಯ ವಿಪಕ್ಷ ನಾಯಕರ ಜೊತೆಗೆ ನಾವೂ ವಿಪಕ್ಷದ ಸ್ಥಾನದಲ್ಲಿರುತ್ತೇವೆ. ನನ್ನ ಆಸ್ತಿಯನ್ನು ತನಿಖೆ ಮಾಡುತ್ತೇವೆಂದು ಕೆಲವರು ಹೇಳಿದ್ದಾರೆ. ಇದಕ್ಕೆಲ್ಲ ನಾನು ಹೆದರುವುದಿಲ್ಲ. ಯಾವಾಗ ಬೇಕಾದರೂ, ಯಾರು ಬೇಕಾದರೂ ತನಿಖೆ ನಡೆಸಬಹುದು ಎಂದು ಕುಮಾರಸ್ವಾಮಿ ತಿಳಿಸಿದರು.
ದಾಖಲೆ ಇಲ್ಲದೆ ಕುಮಾರಸ್ವಾಮಿ ಆರೋಪ ಮಾಡುತ್ತಿದ್ದಾರೆಂಬ ಸಿದ್ದರಾಮಯ್ಯ ಆರೋಪಕ್ಕೆ ಉತ್ತರಿಸಿ, ವಿಪಕ್ಷದಲ್ಲಿದ್ದಾಗ ಸಿದ್ದರಾಮಯ್ಯ ಯಾವುದೇ ದಾಖಲೆ ಬಿಡುಗಡೆ ಮಾಡಿಲ್ಲ. ನಾನು ವಿಪಕ್ಷದಲ್ಲಿದ್ದಾಗ ದಾಖಲೆ ಸಹಿತ ಆರೋಪ ಮಾಡುತ್ತಿದ್ದೆ ಎಂದು ತಿಳಿಸಿದರು. ಒಂದು ವೇಳೆ ನಾನು ಸಿಎಂ ಆಗಿದ್ದಾಗ ನನ್ನ ಮಗ ಸರಕಾರದಲ್ಲಿ ಹಸ್ತಕ್ಷೇಪ ಮಾಡಿದ್ರೆ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಎಚ್.ಡಿ.ಕೆ. ಸವಾಲು ಹಾಕಿದರು.