ಅದೃಷ್ಟ ತಂದ ‘ದಿ ಎಲಿಫೆಂಟ್ ವಿಸ್ಪರರ್ಸ್’ – ಆಸ್ಕರ್ ಗೆದ್ದ ಬೆಳ್ಳಿ ಅವರಿಗೆ ಕುದುರಿದ ಲಕ್..!
- ರಾಷ್ಟ್ರೀಯ ಸುದ್ದಿ
- August 3, 2023
- No Comment
- 113
ನ್ಯೂಸ್ ಆ್ಯರೋ : ಈ ವರ್ಷ ಆಸ್ಕರ್ ಅಂಗಳದಲ್ಲಿ ಸದ್ದು ಮಾಡಿ ಪ್ರಶಸ್ತಿ ಮುಡಿಗೇರಿಸಿಕೊಂಡ ‘ದಿ ಎಲಿಫೆಂಟ್ ವಿಸ್ಪರ್ಸ್’ ಸಾಕ್ಷ್ಯ ಚಿತ್ರಕ್ಕೆ ಪೇರಣೆಯಾಗಿದ್ದ ಬೆಳ್ಳಿ ಅವರಿಗೆ ಸರಕಾರಿ ಹುದ್ದೆ ಲಭಿಸಿದೆ. ಮೊದಲ ಸರಕಾರಿ ಮಹಿಳಾ ಕಾವಡಿಯನ್ನಾಗಿ ಅವರನ್ನು ತಮಿಳುನಾಡು ಸರಕಾರ ನೇಮಿಸಿದೆ.
ಇದುವರೆಗೆ ತಾತ್ಕಾಲಿಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಬೆಳ್ಳಿ ಇನ್ನು ಮಹಿಳಾ ಕಾವಡಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ನೀಲಗಿರಿ ಜಿಲ್ಲೆಯಲ್ಲಿರುವ ಮುದುಮಲೈ ಹುಲಿ ಅಭಯಾರಣ್ಯದಲ್ಲಿರುವ ತೆಪ್ಪಕಾಡು ಆನೆ ಬಿಡಾರದಲ್ಲಿ ಅವರು ಕಾರ್ಯ ನಿರ್ವಹಿಸಲಿದ್ದಾರೆ. ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ನೇಮಕ ಪತ್ರ ವಿತರಿಸಿದ್ದಾರೆ.
ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದ ಆನೆ ಸಾಕಾಣಿಕೆ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಬೊಮ್ಮನ್ ಮತ್ತು ಬೆಳ್ಳಿ ದಂಪತಿ ತಾಯಿಯಿಂದ ಬೇರ್ಪಟ್ಟ ಆನೆ ಮರಿಗಳನ್ನು ಸಾಕಿದ್ದರು. ಈ ದಂಪತಿ ಈ ಆನೆಮರಿಗಳನ್ನು ಮಕ್ಕಳಂತೆ ಮುದ್ದಾಗಿ ಬೆಳೆಸಿದ್ದರು.
ಆನೆಮರಿಗಳು ಮತ್ತು ಈ ದಂಪತಿಯ ಒಡನಾಟ, ಸ್ಫೂರ್ತಿದಾಯಕ ಜೀವನವನ್ನು ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವಿಸ್ ಸಾಕ್ಷ್ಯ ಚಿತ್ರವಾಗಿಸಿದ್ದರು. ಇದು ಅತ್ಯುತ್ತಮ ಸಾಕ್ಷ್ಯ ಚಿತ್ರ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಪಡೆದುಕೊಂಡಿತ್ತು.