ಸೌಜನ್ಯಾ ಪ್ರಕರಣದ ತನಿಖಾಧಿಕಾರಿ ಯೋಗಿಶ್ನನ್ನು ಮೊದಲಿಗೆ ಗಲ್ಲಿಗೆ ಹಾಕಬೇಕು – ದಾವಣಗೆರೆಯಲ್ಲಿ ಗುಡುಗಿದ ಮಹೇಶ್ ಶೆಟ್ಟಿ ತಿಮರೋಡಿ
- ಕರಾವಳಿ
- August 19, 2023
- No Comment
- 128
ನ್ಯೂಸ್ ಆ್ಯರೋ : ಪೇಟಧಾರಿಗಳು ಸಾಕಷ್ಟು ಅನ್ಯಾಯ ಅಕ್ರಮದ ಕೆಲಸ ಮಾಡಿದ್ದಾರೆ. ಇವರ ಮೇಲೆ ಇದುವರೆಗೂ ಪ್ರಕರಣ ದಾಖಲು ಮಾಡುವ ಕೆಲಸ ಮಾಡಿಲ್ಲ ಎಂದು ಸೌಜನ್ಯ ನ್ಯಾಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ (Mahesh Shetty Thimarodi) ಕಿಡಿಕಾರಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಧರ್ಮಸ್ಥಳದಲ್ಲಿ ಎಸ್ಡಿಎಂ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ (Sowjanya Rape and Murder Case) ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದರು.
11 ವರ್ಷವಾದರೂ ಸೌಜನ್ಯ ಅತ್ಯಾಚಾರ ಪ್ರಕರಣದಲ್ಲಿ ತಪ್ಪಿತಸ್ಥರು ಯಾರು ಅನ್ನೋದು ಗೊತ್ತಾಗಿಲ್ಲ. ಧರ್ಮಸ್ಥಳದ ದೇವಸ್ಥಾನದ ಪೇಟದಾರಿಗಳು ಲಕ್ಷಾಂತರ ಕೋಟಿ ರೂಪಾಯಿ ಆಸ್ತಿ ಮಾಡಿದ್ದಾರೆ. ಧಾರ್ಮಿಕ ವಿಚಾರದಲ್ಲಿ ಪೇಟಾಧಾರಿಗಳು ಭಯೋತ್ಪಾದಕರು ಎಂದು ಆಕ್ರೋಶ ಹೊರ ಹಾಕಿದರು.
ಧರ್ಮಸ್ಥಳದಲ್ಲಿ ಯಾವುದೇ ಪ್ರಕರಣ ನಡೆದರೂ ಅವರ ಮೇಲೆ ಕೇಸ್ ಆಗಲ್ಲ ಎಂದ ಮಹೇಶ್ ಶೆಟ್ಟಿ ತಿಮರೋಡಿ, ಸೌಜನ್ಯಾ ಪ್ರಕರಣದ ತನಿಖಾಧಿಕಾರಿ ಯೋಗಿಶ್ನನ್ನು ಮೊದಲಿಗೆ ಗಲ್ಲಿಗೆ ಹಾಕಬೇಕು. ಸೌಜನ್ಯ ಪ್ರಕರಣದ ಎಲ್ಲ ಸಾಕ್ಷ್ಯಗಳನ್ನು ನಾಶ ಮಾಡಿದ್ದಾನೆ.
ಸೌಜನ್ಯಾ ಕೇಸ್ನಲ್ಲಿ ಸದ್ಯ ಯಾವುದೇ ಸಾಕ್ಷ್ಯವನ್ನು ಬಿಟ್ಟಿಲ್ಲ. ಎಲ್ಲ ಸಾಕ್ಷ್ಯಗಳನ್ನು ಸಂಪೂರ್ಣವಾಗಿ ನಾಶ ಮಾಡಿದ್ದಾರೆ. ಇವರನ್ನು ಅಣ್ಣಪ್ಪ ಸ್ವಾಮಿ, ಮಂಜುನಾಥ ಸ್ವಾಮಿಯೇ ನೋಡಿಕೊಳ್ತಾನೆ ಎಂದು ಕಿಡಿಕಾರಿದರು.
ಸೌಜನ್ಯಾ ಮೃತಪಟ್ಟಾಗ ಅವರ ಮನೆಗೆ ಸಿಎಂ ಡಿವಿ ಸದಾನಂದಗೌಡ, ಗೃಹ ಸಚಿವ ಆರ್ ಅಶೋಕ, ಬಿಎಸ್ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಆಗಮಿಸಿದ್ದರು. ಇವರು ಸೌಜನ್ಯಾ ಮನೆಗೆ ಅಂತ ಆಗಮಿಸಿ ಧರ್ಮಸ್ಥಳದಲ್ಲಿ ಪ್ರಸಾದ ಸ್ವೀಕರಿಸಿ ವಾಪಸ್ ತೆರಳುತ್ತಾರೆ. ಸೌಜನ್ಯಾ ಮನೆಗೆ ಯಾಕೆ ಬರಲಿಲ್ಲ ಅಂತ ಕೇಳಿದ್ರೆ ಭದ್ರತೆ ಇಲ್ಲ ಅಂತ ಹೇಳುತ್ತಾರೆ ಎಂದು ಬಿಜೆಪಿ ನಾಯಕರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು, ಗೃಹ ಸಚಿವ ಜಿ ಪರಮೇಶ್ವರ್ ಸೌಜನ್ಯ ಕೇಸ್ ಮರು ತನಿಖೆ ಇಲ್ಲ ಎಂಬ ಹೇಳಿಕೆ ನೀಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಮಹೇಶ್ ಶೆಟ್ಟಿ ತಿಮರೋಡಿ, ಗೃಹ ಸಚಿವರಿಗೆ ತಿಳುವಳಿಕೆ ಇಲ್ಲ ಪಾಪ, ಹಳ್ಳಿಯಿಂದ ಬಂದವರು ಯಾರೋ ಹೀಗೆ ಹೇಳಿ ಅಂತ ಹೇಳಿದ್ದಾರೆ. ಪಾಪ ಅವರು ಅದೇ ರೀತಿ ಹೇಳಿದ್ದಾರೆ ಎಂದು ಗೃಹ ಸಚಿವರ ಮಾತಿಗೆ ವ್ಯಂಗ್ಯ ಮಾಡಿದರು.