Mangalore : ಪ್ರಿಯತಮನಿಗೆ ಪತ್ರ ಬರೆದಿಟ್ಟು ಹೊಸ ಮನೆಯ ಗೃಹಪ್ರವೇಶದ ಐದನೇ ದಿನಕ್ಕೆ ಯುವತಿ ಆತ್ಮಹತ್ಯೆ – ಸಂಭ್ರಮದ ಮನೆ ಸೂತಕದ ಮನೆಯಾಗಲು ಕಾರಣವಾಗಿದ್ದೇನು?
- ಕರಾವಳಿ
- June 8, 2023
- No Comment
- 204
ನ್ಯೂಸ್ ಆ್ಯರೋ : ಸ್ವಂತ ಮನೆ ಕಟ್ಟುವುದು ಅಥವಾ ಖರೀದಿಸುವುದು ಪ್ರತಿಯೊಬ್ಬರ ಕನಸು. ಆ ಕನಸಿನಂತೆ ನೂತನ ಮನೆ ಖರೀದಿಸಿ, ಅದ್ದೂರಿಯಾಗಿ ಗೃಹಪ್ರವೇಶ ಮಾಡಿದ ಯುವತಿ ಖುಷಿಯಿಂದ ಇರಬೇಕಿತ್ತು. ತನ್ನ ಕನಸನ್ನು ಈಡೇರಿಸಿಕೊಂಡ ಉತ್ಸಾಹದಲ್ಲಿರಬೇಕಿದ್ದ ಯುವತಿ ಇದೀಗ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕನಸಿನ ಮನೆ ಈಗ ಸಾವಿನ ಮನೆಯಾಗಿ ಮಾರ್ಪಟ್ಟಿದ್ದೆ. ಇಂತಹದ್ದೊಂದು ಹೃದಯ ವಿದ್ರಾವಕ ಘಟನೆ ನಡೆದಿದ್ದು ಮಂಗಳೂರಿನ ಕುಂಪಲದಲ್ಲಿ..! ಗೃಹಪ್ರವೇಶವಾಗಿ ಐದೇ ದಿನಕ್ಕ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ? ಆಕೆ ತನ್ನ ಪ್ರಿಯತಮನಿಗೆ ಬರೆದ ಪತ್ರದಲ್ಲೇನಿದೆ? ಈ ಪ್ರಕರಣದ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.
ಉಳ್ಳಾಲ ತಾಲೂಕಿನ ಕುಂಪಲದ ಚಿತ್ರಾಂಜಲಿ ನಗರದ ನಿವಾಸಿಯಾಗಿರುವ 25 ವರ್ಷ ಪ್ರಾಯದ ಅಶ್ವಿನಿ ಬಂಗೇರ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ನಿನ್ನೆ ರಾತ್ರಿಯಷ್ಟೇ ಅಶ್ವಿನಿ ತನ್ನ ಗೆಳತಿಗೆ ಚಾಟ್ ಮಾಡಿದ್ದಳು ಎನ್ನಲಾಗಿದೆ. ಆದರೆ ಸ್ನೇಹಿತೆ ಬೆಳಗ್ಗೆ ಬಂದು ಕೋಣೆಯ ಬಾಗಿಲು ಒಡೆದು ನೋಡಿದಾಗ ಅಶ್ವಿನಿ ರೂಮಿನ ಸೀ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಅಶ್ವಿನಿ ಆತ್ಮಹತ್ಯೆಗೂ ಮುನ್ನ ಬರೆದಿಟ್ಟ 24 ಪುಟಗಳ ಸುದೀರ್ಘ ಡೆತ್ ನೋಟನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಡೆತ್ ನೋಟ್ ನಲ್ಲಿ ಏನಿದೆ?
ಸಾವಿಗೂ ಮುನ್ನ ಅಶ್ವಿನಿ ಬರೆದಿದ್ದ ಡೆತ್ ನೋಟ್ ಬಗ್ಗೆ ಸ್ಥಳೀಯರು ಹಾಗೂ ಪೊಲೀಸರಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಈ ಪತ್ರದಲ್ಲಿ ಆಕೆ, ‘ತಾನು ಮನೆ ಖರೀದಿಸಿ ಮೋಸ ಹೋಗಿದ್ದು, ಬ್ಯಾಂಕ್ ಅಧಿಕಾರಿಗಳು ಪೀಡಿಸುತ್ತಿರುವ ಬಗ್ಗೆ ಉಲ್ಲೇಖಿಸಿದ್ದಾಳೆ ಎನ್ನಲಾಗಿದೆ. ಅಶ್ವಿನಿ ಹೊರ ದೇಶದಲ್ಲಿ ಉದ್ಯೋಗದಲ್ಲಿದ್ದು ಒಂದೂವರೆ ತಿಂಗಳ ಹಿಂದೆಯಷ್ಟೇ ಊರಿಗೆ ಬಂದಿದ್ದಳು. ಇತ್ತೀಚೆಗಷ್ಟೇ ಈಕೆ ಚಿತ್ರಾಂಜಲಿ ನಗರದ ಸಂಗೀತ ಎಂಬವರಿಂದ ಮನೆ ಖರೀದಿಸಿದ್ದಳು. ಜೂ.3ರಂದು ತಾಯಿ ದೇವಕಿ ಹಾಗೂ ದೊಡ್ಡಮ್ಮನ ಇಬ್ಬರು ಗಂಡು ಮಕ್ಕಳ ಸಮ್ಮುಖದಲ್ಲಿ ಅದ್ದೂರಿಯಾಗಿ ಗೃಹಪ್ರವೇಶ ನೆರವೇರಿಸಿದ್ದಳು. ಆದರೆ ಅದಾದ ಐದೇ ದಿನಕ್ಕೆ ನಿನ್ನೆ ರಾತ್ರಿ ಮನೆಯಲ್ಲಿ ಎಲ್ಲರೂ ಇರುವಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಗೃಹಪ್ರವೇಶದ ದಿನ ಸಂಭ್ರಮಿಸಿದ್ದ ಅಶ್ವಿನಿ..!
ಕಳೆದ ಜೂನ್ 3ರಂದು ಭರ್ಜರಿಯಾಗಿ ನಡೆದ ಕನಸಿನ ಮನೆಯ ಗೃಹಪ್ರವೇಶ ಕಾರ್ಯಕ್ರಮದ ದಿನ ರಾತ್ರಿ ಅಶ್ವಿನಿ ತನ್ನ ಗೆಳತಿಯರೊಂದಿಗೆ ಸೇರಿ ಪಾರ್ಟಿ ಮಾಡಿ ಕುಣಿದು ಸಂಭ್ರಮಿಸಿದ್ದಳು. ಅನಂತರವೂ ಮನೆಗೆ ಬರುತ್ತಿದ್ದ ಸ್ನೇಹಿತರೊಂದಿಗೆ ಮನೆಯ ಟೆರೆಸ್ ಮೇಲೆ ಪಾರ್ಟಿ ಮಾಡುತ್ತಿದ್ದಳಂತೆ. ತನ್ನ ಡೆತ್ನೋಟ್ ನಲ್ಲಿ ಅಶ್ವಿನಿ ತನ್ನ ಪ್ರಿಯತಮನ ಹೆಸರು ಉಲ್ಲೇಖಿಸಿ ‘ಐ ಲವ್ ಯೂ’ ಎಂದು ಬರೆದಿದ್ದಾಳೆ. ಜೊತೆಗೆ ತಾನು ಬಳಸುತ್ತಿದ್ದ ಐ ಫೋನ್ ಆತನಿಗೆ ನೀಡುವಂತೆ ಬರೆದಿದ್ದಾಳೆ ಎನ್ನಲಾಗಿದೆ. ಮಗಳ ಸಾವಿನಿಂದ ಕಂಗೆಟ್ಟಿರುವ ಅಶ್ವಿನಿ ಅವರ ತಾಯಿ ಮನೆಯೊಳಗೆ ಬಿದ್ದು ಹೊರಳಾಡುವ ದೃಶ್ಯ ಮನಕಲಕುವಂತಿದೆ. ಮಾನಸಿಕ ಖಿನ್ನತೆಯಿಂದ ಅಶ್ವಿನಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.