ಮುಂಗಾರು ವಿಳಂಬ; ಶಿಕ್ಷಣ ರಂಗಕ್ಕೂ ತಟ್ಟಿದ ಬಿಸಿ – ಕೆಲವು ಕಾಲೇಜುಗಳಲ್ಲಿ ಮತ್ತೆ ಆನ್ ಲೈನ್ ತರಗತಿ
- ಕರಾವಳಿ
- June 8, 2023
- No Comment
- 123
ನ್ಯೂಸ್ ಆ್ಯರೋ : ಮುಂಗಾರು ಮಳೆ ಸುರಿಯಲು ಮೀನಾ ಮೇಷ ಎಣಿಸುತ್ತಿದೆ. ಹೀಗಾಗಿ ಕರಾವಳಿಯ ಬಹುತೇಕ ಕಡೆ ನೀರಿನ ಕೊರತೆ ಎದುರಾಗಿದ್ದು, ಇದರ ಪರಿಣಾಮ ಶಿಕ್ಷಣ ರಂಗದ ಮೇಲೂ ಬೀರಿದೆ. ನೀರಿನ ಅಭಾವದಿಂದ ಮಂಗಳೂರು ನಗರದ ಕೆಲವು ಕಾಲೇಜುಗಳಿಗೆ ರಜೆ ಸಾರಲಾಗಿದ್ದು, ಆನ್ ಲೈನ್ ತರಗತಿ ನಡೆಸಲಾಗುತ್ತಿದೆ. ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಅರ್ಧ ದಿನ ಮಾತ್ರ ತರಗತಿ ನಡೆಸುತ್ತಿವೆ.
ಎಲ್ಲ ಕಡೆ ತಟ್ಟಿದ ಬಿಸಿ
ಶೈಕ್ಷಣಿಕ ಸಂಸ್ಥೆಗಳು ಮಾತ್ರವಲ್ಲ ಮನೆ, ಆಸ್ಪತ್ರೆ, ಕಚೇರಿಗಳಿಗೂ ನೀರಿನ ಅಭಾವ ತಲೆದೋರಿದೆ. ಎರಡು ತಿಂಗಳಿನಿಂದ ಮಂಗಳೂರು ಉತ್ತರ ಹಾಗೂ ಮಂಗಳೂರು ನಗರ ಭಾಗಕ್ಕೆ ಎರಡು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಜಿಲ್ಲಾ ವ್ಯಾಪ್ತಿಯ ಇತರ ಪಟ್ಟಣ ಪ್ರದೇಶಗಳಿಗೂ ಈಗ 2-3 ದಿನಕ್ಕೊಮ್ಮೆ ನೀರನ್ನು ಪೂರೈಸುವ ಸ್ಥಿತಿ ನಿರ್ಮಾಣವಾಗಿದೆ. ಕೆಲವು ಕಡೆ ಟ್ಯಾಂಕರ್ ಮೂಲಕ ನೀರು ಪೂರೈಕೆಯಾಗುತ್ತಿದೆ.
ತುಂಬೆ ಡ್ಯಾಂನಲ್ಲೇ ನೀರಿಲ್ಲ..!!
ಜೂನ್ ಆರಂಭದಲ್ಲೇ ಕರಾವಳಿಗೆ ಮಳೆ ಕಾಲಿಡಬೇಕಾಗಿತ್ತು. ಆದರೆ ವಿಳಂಬವಾದ ಕಾರಣ ಮಂಗಳೂರು ನಗರ ಸೇರಿದಂತೆ ಸುತ್ತಮುತ್ತಲ ಪ್ರದೇಶಕ್ಕೆ ನೀರು ಪೂರೈಕೆಯಾಗುವ ತುಂಬೆ ಡ್ಯಾಂನಲ್ಲಿ ಜಲ ಮಟ್ಟ 1.86 ಮೀಟರ್ ಗೆ ಕುಸಿದಿದೆ.
ಹಣ ನೀಡಿದರೂ ಟ್ಯಾಂಕರ್ ನೀರು ಪೂರೈಕೆಯಾಗುತ್ತಿಲ್ಲ..!
ಮಂಗಳೂರಿನ ಹಂಪನಕಟ್ಟೆ ವಿ.ವಿ.ಕಾಲೇಜಿನಲ್ಲಿ ಸುಮಾರು 1,800 ಪದವಿ ವಿದ್ಯಾರ್ಥಿಗಳಿದ್ದಾರೆ. ಇಲ್ಲಿ ಶೌಚಾಲಯಕ್ಕೂ ನೀರಿನ ಅಭಾವ ತಟ್ಟಿದೆ. ಜೊತೆಗೆ ಕೆಲವು ಸಲ ಹಣ ನೀಡಿದರೂ ಟ್ಯಾಂಕರ್ ನೀರು ಪೂರೈಕೆಯಾಗುತ್ತಿಲ್ಲ. ಹೀಗಾಗಿ ಬುಧವಾರದಿಂದ ಆಫ್ಲೈನ್ ತರಗತಿ ನಿಲ್ಲಿಸಲಾಗಿದೆ. ನಗರದ ಕುಂಟಿಕಾನದಲ್ಲಿರುವ ಖಾಸಗಿ ಮೆಡಿಕಲ್ ಕಾಲೇಜಿನ ಮೂರು ಹಾಗೂ ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೂ ಆಫ್ಲೈನ್ ತರಗತಿ ರದ್ದು ಮಾಡಲಾಗಿದೆ. ಕಾಲೇಜಿನ ಹಾಸ್ಟೆಲ್ ನಡೆಸಲಾಗುತ್ತಿಲ್ಲ. ಸುಮಾರು ಒಂದು ಸಾವಿರಕ್ಕೂ ಅಧಿಕ ರೋಗಿಗಳಿರುವ ಮಂಗಳೂರಿನ ವೆನ್ಲಾಕ್ ಸರಕಾರಿ ಆಸ್ಪತ್ರೆಯಲ್ಲಿಯೂ ನೀರಿನ ಕೊರತೆ ಎದುರಾಗಿದೆ. ಇಲ್ಲಿರುವ ಬಾವಿ, ಕೊಳವೆಬಾವಿಗಳಲ್ಲಿ ನೀರು ತಳ ಸೇರಿದ್ದು, ಪಾಲಿಕೆ ಮತ್ತು ಖಾಸಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.
ಕಟೀಲು ದೇಗುಲಕ್ಕೂ ತಟ್ಟಿದ ಬಿಸಿ
ಇತ್ತ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲೂ ನೀರಿನ ಕೊರತೆ ಕಂಡು ಬಂದಿದೆ. ಇಲ್ಲಿ ಹರಿಯುವ ನಂದಿನಿ ನದಿ ಬತ್ತಿದ್ದು, ದೇವಸ್ಥಾನಕ್ಕೆ ಬರುವ ಭಕ್ತರಿಗೆ ಹಾಳೆ ತಟ್ಟೆಯಲ್ಲಿ ಅನ್ನದಾನ ಒದಗಿಸಲಾಗುತ್ತಿದೆ. ಅದೇ ರೀತಿ ದೇವಸ್ಥಾನದ ವತಿಯಿಂದ ನಡೆಯುವ ಶಿಕ್ಷಣ ಸಂಸ್ಥೆಗಳಲ್ಲಿ ಮಧ್ಯಾಹ್ನದ ವರೆಗೆ ಮಾತ್ರ ತರಗತಿ ನಡೆಸಲಾಗುತ್ತಿದೆ.