ಮಹಾಕುಂಭ ಭಕ್ತರಲ್ಲಿ ಆತಂಕ ಸೃಷ್ಟಿಸುವ ಪ್ರಯತ್ನ; ಪ್ರಯಾಗರಾಜ್ ರೈಲಿಗೆ ಕಲ್ಲು ತೂರಾಟ

ನ್ಯೂಸ್ ಆ್ಯರೋ: ಮಹಾಕುಂಭ ಮೇಳಕ್ಕೆ ಪವಿತ್ರ ಪುಷ್ಯ ಹುಣ್ಣಿಮೆ(ಸೋಮವಾರ) ಚಾಲನೆ ಸಿಕ್ಕಿದೆ. 45 ದಿನಗಳ ಕಾಲ ನಡೆಯುವ ಮಹಾ ಕುಂಭ ಮೇಳಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ದೇಶ ವಿದೇಶಗಳಿಂದ ಭಕ್ತರು ಮಹಾಕುಂಭಮೇಳದಲ್ಲಿ ಪಾಲ್ಗೊಂಡು ಪುಣ್ಯಸ್ನಾನ ಮಾಡಲಿದ್ದಾರೆ. ಇಂದು ಚಾಲನೆ ಸಿಕ್ಕ ಬಳಿಕ ಬೆಳಗಿನ ಜಾವದಲ್ಲಿ 60 ಲಕ್ಷ ಭಕ್ತರು ಪುಣ್ಯಸ್ನಾನ ಮಾಡಿದ್ದರೆ.
ಈ ಬಾರಿ ಬರೋಬ್ಬರಿ 40 ಕೋಟಿ ಭಕ್ತರು ಪಾಲ್ಗೊಲ್ಳುವ ನಿರೀಕ್ಷೆ ಇದೆ. ಧಾರ್ಮಿಕವಾಗಿ ಮಾತ್ರವಲ್ಲ, ಐತಿಹಾಸಿಕವಾಗಿಯೂ ಭಾರಿ ಮಹತ್ವ ಪಡೆಡುಕೊಂಡಿರುವ ಮಹಾಕುಂಭಮೇಳೆ ಸರಾಗವಾಗಿ ನಡೆಯಲು ಎಲ್ಲಾ ತಯಾರಿ ಮಾಡಿಕೊಳ್ಳಲಾಗಿದೆ. ಆದರೆ ಇದರ ನಡುವೆ ಭಕ್ತರಲ್ಲಿ ಆತಂಕ ಸೃಷ್ಟಿಸುವ ಪ್ರಯತ್ನಗಳು ನಡೆದಿದೆ. ಮಹಾಕುಂಭ ಮೇಳಕ್ಕೆ ತೆರಳುತ್ತಿದ್ದ ಭಕ್ತರ ರೈಲಿನ ಮೇಲೆ ಕಲ್ಲು ತೂರಾಟ ಘಟನೆ ನಡೆದಿದೆ.
ಸೂರತ್ನಿಂದ ಪ್ರಯಾಗರಾಜ್ಗೆ ತೆರಳುತ್ತಿದ್ದ ಪ್ರಯಾಗರಾಜ್ ತಪ್ತಿ ಗಂಗಾ ಎಕ್ಸ್ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ ನಡೆದಿದೆ ಎಂದು ವರದಿಯಾಗಿದೆ. ಇದು ಮಹಾಕುಂಭಮೇಳಕ್ಕೆ ಭಾರತೀಯ ರೈಲ್ವೇ ಘೋಷಿಸಿದ ವಿಶೇಷ ರೈಲು ವ್ಯವಸ್ಥೆಯಾಗಿದೆ. ಈ ರೈಲಿನಲ್ಲಿ ವೃದ್ಧರು, ಹಿರಿಯರು, ಮಹಿಳೆಯರು ಮಕ್ಕಳು ಸೇರಿದಂತೆ ಸಾವಿರಾರು ಭಕ್ತರು ಪ್ರಯಾಗರಾಜ್ಗೆ ಪ್ರಯಾಣಿಸುತ್ತಿದ್ದರು. ಜಲಗಾಂವ್ಗಿಂತ ಮೂರು ಕಿಲೋಮೀಟರ್ ಹಿಂದೆ ಈ ಘಟನೆ ನಡೆದಿದೆ. ಕಲ್ಲು ತೂರಾಟದಲ್ಲಿ ಬಿ6 ಕೋಚ್ ಗಾಜುಗಳು ಪುಡಿ ಪುಡಿಯಾಗಿದೆ. ಕಲ್ಲುಗಳು ಬೋಗಿ ಒಳಗೆ ತೂರಿಬಂದಿದೆ ಎಂದು ಭಕ್ತರು ಹೇಳಿದ್ದಾರೆ.
ಮಹಾಕುಂಭ ಮೇಳಕ್ಕೆ ತೆರಳುತ್ತಿದ್ದ ಭಕ್ತರು ಈ ಘಟನೆಯಿಂದ ಆತಂಕಗೊಂಡಿದ್ದಾರೆ. ಇದೇ ವೇಳೆ ರೈಲಿನಲ್ಲಿದ್ದ ಕೆಲ ಭಕ್ತರು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ. ಮಹಾಕುಂಭಮೇಳಕ್ಕೆ ಶಾಂತಿಯುತವಾಗಿ ತೆರಳತ್ತಿರುವ ಭಕ್ತರಲ್ಲಿ ಆತಂಕ ಸೃಷ್ಟಿಸುವ ಪ್ರಯತ್ನಗಳು ನಡೆದಿದೆ. ಈ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ. ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಪ್ರಯಾಣಿಕರು, ಭಕ್ತರಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಈ ಘಟನೆಯನ್ನು ಉತ್ತರ ಪ್ರದೇಶದ ಪೊಲೀಸರು ಗಂಬೀರವಾಗಿ ಪರಿಗಣಿಸಿದ್ದಾರೆ. ಎಲ್ಲಾ ಭಕ್ತರಿಗೆ ಭದ್ರತೆ ಕಲ್ಪಿಸಲಾಗಿದೆ. ಈ ರೀತಿಯ ಅಶಾಂತಿ ಸೃಷ್ಟಿಸುವ ಯಾವುದೇ ಘಟನೆಯನ್ನು ಸಹಿಸುವುದಿಲ್ಲ ಎಂದಿದ್ದಾರೆ.
ಧಾರ್ಮಿಕ ನಗರ ಪ್ರಯಾಗರಾಜ್ನಲ್ಲಿ 45 ದಿನಗಳ ಕಾಲ ನಡೆಯುವ ಮಹಾಕುಂಭ ಮೇಳಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಉತ್ತರ ಪ್ರದೇಶ ಸರ್ಕಾರ ಮಹಾಕುಂಭ ಮೇಳ ಆಯೋಜನೆಗೆ ಬರೋಬ್ಬರಿ 7,000 ಕೋಟಿ ರೂಪಾಯಿ ಅನುದಾನ ನೀಡಿದೆ. ಗಂಗಾ, ಯುಮನಾ ಹಾಗೂ ಸರಸ್ವತಿ ನದಿ ಸಂಗಮ ಪ್ರದೇಶದಲ್ಲಿ ಭಕ್ತರು ಪುಣ್ಯಸ್ನಾನ ಮಾಡಲಿದ್ದಾರೆ. ಮೊದಲ ದಿನವಾದ ಇಂದು ಬೆಳಗ್ಗೆ ಬರೋಬ್ಬರಿ 60 ಲಕ್ಷ ಭಕ್ತರು ಪುಣ್ಯಸ್ನಾನ ಮಾಡಿದ್ದಾರೆ.
Leave a Comment