ಖಾಲಿ ಇರುವ ವಿಪಕ್ಷ ನಾಯಕ ಹುದ್ದೆಗೆ ಬೇಕಾಗಿದ್ದಾರೆ – ರಾಜ್ಯ ಬಿಜೆಪಿಗೆ ಕುಟುಕಿದ ಕಾಂಗ್ರೆಸ್ ಟ್ವೀಟ್
- ಕರ್ನಾಟಕ
- July 1, 2023
- No Comment
- 92
ನ್ಯೂಸ್ ಆ್ಯರೋ : ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿ ಒಂದೂವರೆ ತಿಂಗಳು ಕಳೆದರೂ ಬಿಜೆಪಿ ವಿಪಕ್ಷ ನಾಯಕನನ್ನು ಆಯ್ಕೆ ಮಾಡಿಲ್ಲ. ಇದೇ ವಿಚಾರ ಕಾಂಗ್ರೆಸ್ಗೆ ಅಸ್ತ್ರವಾಗಿ ಪರಿಣಮಿಸಿದ್ದು, ಕಮಲ ಪಡೆಯನ್ನು ಗೇಲಿ ಮಾಡಿದೆ.
ಕಾಂಗ್ರೆಸ್ ಹೊರಡಿಸಿದ ಪ್ರಕಟಣೆ
ಕುರ್ಚಿಯ ಫೋಟೋ ಒಂದನ್ನು ಟ್ವಿಟರ್ ನಲ್ಲಿ ಹಾಕಿ ಕಾಂಗ್ರೆಸ್, ‘ಇದು ಪ್ರಕಟಣೆ: ತುರ್ತಾಗಿ ಬೇಕಾಗಿದ್ದಾರೆ ಎಂದು ಬರೆದಿದೆ. ಅದರ ಕೆಳಗೆ ಖಾಲಿ ಇರುವ ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಹುದ್ದೆಗೆ ಸೂಕ್ತ ವ್ಯಕ್ತಿ ಬೇಕಾಗಿದ್ದಾರೆ. ಅರ್ಹತೆ: ವಾಟ್ಸಾಪ್ ವಿವಿಯಲ್ಲಿ ಪದವಿ ಪಡೆದಿರಬಾರದು. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯ ತಿಳಿದಿರಬೇಕು. ಭ್ರಷ್ಟಾಚಾರ ಮಾಡಿರಬಾರದು’ ಎಂದು ಬರೆದುಕೊಂಡಿದೆ.
‘ಸಂವಿಧಾನವನ್ನು ತಿಳಿದವರು, ಪ್ರಜಾಪ್ರಭುತ್ವವನ್ನು ಅರಿತ ವಿಪಕ್ಷ ನಾಯಕರೊಬ್ಬರು ಬೇಕಾಗಿದ್ದಾರೆ. ಸಿಡಿಗೆ ತಡೆಯಾಜ್ಞೆ ತರದವರು, ಭ್ರಷ್ಟಾಚಾರಿಯಲ್ಲದವರು, ಆರ್.ಎಸ್.ಎಸ್. ಕೈಗೊಂಬೆಯಾಗದವರು, ಕೋಮುವಾದಿ ಅಲ್ಲದ ವಿಪಕ್ಷ ನಾಯಕ ಬೇಕಾಗಿದ್ದಾರೆ. ಸುಳ್ಳು ಹೇಳಬಾರದು. ಘನತೆಯ ವ್ಯಕ್ತಿತ್ವದವರು, ತೂಕದ ಮಾತಿನವರು, ಪ್ರಜಾಪ್ರಬುತ್ವವನ್ನು ಗಟ್ಟಿಗೊಳಿಸಲು ವಿಪಕ್ಷ ನಾಯಕರೊಬ್ಬರು ಬೇಕಾಗಿದ್ದಾರೆ’ ಎಂದು ಕೈ ಪಡೆ ವ್ಯಂಗ್ಯವಾಡಿದೆ.
ಇನ್ನೊಂದು ಟ್ವೀಟ್
ಜೊತೆಗೆ ಇನ್ನೊಂದು ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಚುನಾವಣೆ ಮುಗಿದು 50ಕ್ಕೂ ಹೆಚ್ಚು ದಿನ ಕಳೆಯಿತು. ನಮ್ಮ ಸರಕಾರ ರಚನೆಯಾಗಿ ತಿಂಗಳು ಕಳೆಯಿತು. ಮಂತ್ರಿ ಮಂಡಲವೂ ರಚನೆಯಾಯ್ತು. ಹಲವು ಸಭೆ, ತೀರ್ಮಾನಗಳಾದವು. ಮೂರು ಗ್ಯಾರಂಟಿಗಳೂ ಜಾರಿಯಾದವು. ಇಷ್ಟಲ್ಲಾ ಆದರೂ ಬಿಜೆಪಿಗೆ ಒಬ್ಬ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲಾಗಿಲ್ಲ. ಪಕ್ಷ ಆಡಳಿತ ಮಾಡಲು ನಾಲಾಯಕ್ ಎಂದು ಜನರು ಸರ್ಟಿಫಿಕೆಟ್ ಕೊಟ್ಟಾಗಿದೆ, ಈಗ ವಿರೋಧ ಪಕ್ಷವಾಗಿರಲೂ ನಾಲಾಯಕ್’ ಎಂದು ತಿಳಿಯುತ್ತಿದೆ ಎಂದು ಕುಟುಕಿದೆ.
ಮಾಜಿ ಸಿಎಂ ಬೊಮ್ಮಾಯಿ ಹೇಳಿದ್ದೇನು?
ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ”ವಿಪಕ್ಷ ನಾಯಕ ಸ್ಥಾನದ ಬಗ್ಗೆ ನಾಳೆ ಸಂಜೆ ಗೊತ್ತಾಗುತ್ತದೆ. ಗ್ಯಾರಂಟಿಗಳನ್ನು ಗೊಂದಲದ ಗೂಡು ಮಾಡಿದ್ದಾರೆ. ಎಲ್ಲಾ ಚರ್ಚೆಯಾಗುತ್ತದೆ” ಎಂದಿದ್ದಾರೆ.