ಗ್ಯಾಸ್ ಗೀಸರ್ ನಿಂದ ವಿಷಾನಿಲ ಸೋರಿಕೆ, ಜೊತೆಯಾಗಿ ಸ್ನಾನಕ್ಕೆ ತೆರಳಿದ್ದ ಜೋಡಿ ದುರ್ಮರಣ – ಹಸೆಮಣೆ ಏರಬೇಕಿದ್ದ ಜೋಡಿಯ ದಾರುಣ ಅಂತ್ಯ…!!
- ಕರ್ನಾಟಕ
- June 12, 2023
- No Comment
- 198
ನ್ಯೂಸ್ ಆ್ಯರೋ : ಕೆಲವೇ ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಜೋಡಿಯ ದಾರುಣ ಅಂತ್ಯವಾಗಿದೆ. ಸ್ನಾನಕ್ಕೆ ಜೋಡಿಯಾಗಿ ಹೋಗಿದ್ದ ಯುವಕ ಯುವತಿ ಬಾತ್ ರೂಮ್ ನಲ್ಲಿ ಗ್ಯಾಸ್ ಗೀಸರ್ ಸೋರಿಕೆಯಿಂದ ಸಾವನ್ನಪ್ಪಿರುವ ಘಟನೆ ಚಿಕ್ಕಜಾಲದ ತರಬನಹಳ್ಳಿಯಲ್ಲಿ ನಡೆದಿದ್ದು, ಘಟನೆ ನಡೆದ ಎರಡು ದಿನಗಳ ಬಳಿಕ ಈ ಭೀಕರ ದುರಂತ ಬೆಳಕಿಗೆ ಬಂದಿದೆ.
ಗುಂಡ್ಲುಪೇಟೆ ತಾಲೂಕು ಚಂದ್ರಶೇಖರ್, ಗೋಕಾಕ್ ತಾಲೂಕು ಸುಧಾರಾಣಿ ಮೃತ ದುರ್ದೈವಿಗಳು.
ಚಿಕ್ಕಜಾಲದ ತರಬನಹಳ್ಳಿಯಲ್ಲಿ ವಾಸವಿದ್ದ ಚಂದ್ರಶೇಖರ್ ಬಾಡಿಗೆ ಮನೆಗೆ ಜೂನ್ 10ರಂದು ಸಂಜೆ ಸುಧಾರಾಣಿ ಆಗಮಿಸಿದ್ದಳು. ರಾತ್ರಿ ಸ್ನಾನಕ್ಕೆಂದು ಗ್ಯಾಸ್ ಗೀಸರ್ ಆನ್ ಮಾಡಿ ಬಾತ್ರೂಮ್ಗೆ ಹೋಗಿದ್ದಾರೆ. ದುರದೃಷ್ಟವಶಾತ್ ಆ ವೇಳೆ ಗ್ಯಾಸ್ ಗೀಸರ್ನಿಂದ ವಿಷಾನಿಲ ಸೋರಿಕೆಯಾಗಿದೆ. ಇದರಿಂದ ಸ್ನಾನ ಮಾಡುತ್ತಿರುವಾಗಲೇ ಉಸಿರುಗಟ್ಟಿ ಬಾತ್ರೂಮ್ ನಲ್ಲೇ ಪ್ರಜ್ಞೆ ತಪ್ಪಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಮನೆಯಿಂದ ಯಾರೂ ಹೊರಗೆ ಬಾರದೆ ಇದ್ದಾಗ ಬೆಳಗ್ಗೆ ಮನೆ ಮಾಲೀಕ ಅನುಮಾನಗೊಂಡು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಮನೆ ಮಾಲೀಕ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮೃತದೇಹಗಳನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿದ್ದು, ಈ ಬಗ್ಗೆ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಲ್ಫ್ ಹೋಟೆಲ್ ನಲ್ಲಿ ಚಂದ್ರಶೇಖರ್ ಹಾಗೂ ಸುಧಾರಾಣಿ ಕೆಲಸ ಮಾಡುತ್ತಿದ್ದರು. ಶೀಘ್ರದಲ್ಲೇ ಮದುವೆಯಾಗಲೂ ನಿರ್ಧರಿಸಿದ್ದರು. ಆದರೆ ಅಷ್ಟರಲ್ಲಿ ದುರಂತ ಸಂಭವಿಸಿದ್ದು, ಹಸೆಮಣೆ ಏರಬೇಕಿದ್ದ ಜೋಡಿ ಸ್ಮಶಾನ ಸೇರುವಂತಾಗಿದ್ದು ವಿಪರ್ಯಾಸ.