ಗಾಬರಿಯಾಗಬೇಡಿ, ಆತುರದಿಂದ ಕಸ್ತೂರಿ ರಂಗನ್ ವರದಿ ಜಾರಿ ಇಲ್ಲ – ಅರಣ್ಯ ಸಚಿವ ಈಶ್ವರ್ ಖಂಡ್ರೆ ಸ್ಪಷ್ಟನೆ
- ಕರ್ನಾಟಕ
- August 1, 2023
- No Comment
- 78
ನ್ಯೂಸ್ ಆ್ಯರೋ : ಕಸ್ತೂರಿ ರಂಗನ್ ವರದಿ ಜಾರಿ ಕುರಿತಾದ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದ್ದು, ಕಾಡಂಚಿನಲ್ಲಿ ವಾಸಿಸುತ್ತಿರುವವರಿಗೆ ಆತಂಕ ಆರಂಭವಾಗಿದೆ. ಈ ಮಧ್ಯೆ ಸ್ಪಷ್ಟನೆ ನೀಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಕಸ್ತೂರಿ ರಂಗನ್ ವರದಿ ಜಾರಿ ಸರಕಾರ ಬದ್ಧ ಎಂದು ಎಲ್ಲೂ ಹೇಳಿಲ್ಲ ಎಂದಿದ್ದಾರೆ.
ಜೀವ ವೈವಿಧ್ಯ ರಕ್ಷಣೆಯ ಭರವಸೆ
ಬೆಂಗಳೂರಿನಲ್ಲಿ ನಡೆದ ಅಂತರ್ ಜೀವಿ (ಪ್ರಬೇಧ) ಸಮಾವೇಶದಲ್ಲಿ ಮಾತನಾಡಿದ ಅವರು, ಪಶ್ಚಿಮ ಘಟ್ಟದಲ್ಲಿ ಜೀವ ವೈವಿಧ್ಯ ಮತ್ತು ಸಸ್ಯ ಸಂಕುಲ ರಕ್ಷಣೆಗೆ ಸರಕಾರ ಬದ್ದವಾಗಿದೆ ಎಂದು ಹೇಳಿದ್ದೇನೆಯೇ ಹೊರತು ಕಸ್ತೂರಿರಂಗನ್ ವರದಿ ಜಾರಿಗೆ ಬದ್ಧ ಎಂದು ಎಲ್ಲೂ ಹೇಳಿಲ್ಲ ಎಂದು ತಿಳಿಸಿದ್ದಾರೆ.
ಕಸ್ತೂರಿ ರಂಗನ್ ವರದಿ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಕೇಂದ್ರ ಸರಕಾರ ಸಂಜಯ್ ಕುಮಾರ್ ನೇತೃತ್ವದ ಪುನರ್ ಪರಿಶೀಲನಾ ಸಮಿತಿ ರಚಿಸಿದ್ದು, ಅದರ ಸದಸ್ಯರು ಇತ್ತೀಚೆಗೆ ನನ್ನನ್ನು ಭೇಟಿಯಾಗಿದ್ದರು. ಈ ಸಮಿತಿ ಡಿಸೆಂಬರ್ ವೇಳೆಗೆ ವರದಿ ಸಲ್ಲಿಸಲಿದ್ದು, ಬಳಿಕ ಅದರ ಸಾಧಕ-ಬಾಧಕ ಚರ್ಚಿಸಿ, ಪಶ್ಚಿಮ ಘಟ್ಟದ ಎಲ್ಲಾ ಬಾಧ್ಯಸ್ಥರೊಂದಿಗೆ ಮಾತುಕತೆ ನಡೆಸಿ ಸರಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ವಿವರಿಸಿದ್ದಾರೆ.
ಕಸ್ತೂರಿ ರಂಗನ್ ವರದಿ 10 ವರ್ಷಗಳಷ್ಟು ಹಳೆಯದ್ದು. ಇಂದಿಗೆ ಪ್ರಸ್ತುತವೇ ಎನ್ನುವ ವಾದ ಕೇಳಿ ಬಂದಿದೆ. ಪಶ್ಚಿಮ ಘಟ್ಟವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಿದರೆ ಜೀವನ, ಜೀವನೋಪಾಯಕ್ಕೆ ತೊಂದರೆಯಾಗುತ್ತದೆ ಎನ್ನುವ ಆತಂಕ ಆ ಭಾಗದ ಜನರಲ್ಲಿದೆ. ಹೀಗಾಗಿ ಈ ಬಗ್ಗೆ ಆತುರದ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಸಚಿವ ಭರವಸೆ ನೀಡಿದರು.
ಪಶ್ಚಿಮ ಘಟ್ಟದಲ್ಲಿ ಕೆಂಪು ಪ್ರವರ್ಗದ ಕೈಗಾರಿಕೆಗಳು ನಡೆಯಬಾರದು. ಆದರೆ ಜನ ವಾಸದ ಬಗ್ಗೆ ಹಾಗೆ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಪರಿಸರವೂ ಉಳಿಯಬೇಕು, ಜನರ ಜೀವನೋಪಾಯಕ್ಕೂ ದಕ್ಕೆ ಆಗಬಾರದು, ಸುಸ್ಥಿರ ಅಭಿವೃದ್ಧಿ ನಮ್ಮ ಸರಕಾರದ ಗುರಿ ಎಂದು ಈಶ್ವರ್ ಖಂಡ್ರೆ ಹೇಳಿದ್ದಾರೆ.