Chaithra Kundapur Fraud Case : ಹಾಲಶ್ರೀ ಸ್ವಾಮೀಜಿ ಮಠಕ್ಕೆ 56 ಲಕ್ಷ ಹೊತ್ತು ತಂದ ವಕೀಲ – ವಂಚನೆ ಪ್ರಕರಣದಲ್ಲಿ ಸಿಸಿಬಿಗೆ ಸಿಕ್ತು ಬಲುದೊಡ್ಡ ಸಾಕ್ಷ್ಯ..!
- ಕರ್ನಾಟಕ
- September 20, 2023
- No Comment
- 122
ನ್ಯೂಸ್ ಆ್ಯರೋ : ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ಚೈತ್ರಾ ಕುಂದಾಪುರ ಗ್ಯಾಂಗ್ನಿಂದ 5 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿ ಗ್ರಾಮದಲ್ಲಿರುವ ಹಾಲಸ್ವಾಮಿ ಮಠಕ್ಕೆ ವ್ಯಕ್ತಿಯೊಬ್ಬ 56 ಲಕ್ಷ ರೂ. ಹಣ ನೀಡಿ ತೆರಳಿದ ಘಟನೆ ನಡೆದಿದ್ದು, ವಂಚನೆ ಪ್ರಕರಣದಲ್ಲಿ ಸ್ವಾಮೀಜಿ ಶಾಮೀಲು ವಿಚಾರಕ್ಕೆ ಸಂಬಂಧಿಸಿದಂತೆ ಬಹುದೊಡ್ಡ ಸಾಕ್ಷಿ ದೊರಕಿದಂತಾಗಿದೆ.
ಮೈಸೂರು ಮೂಲದ ಪ್ರಣವ್ ಪ್ರಸಾದ್ ವೃತ್ತಿಯಲ್ಲಿ ವಕೀಲ ಹಾಗೂ ಉದ್ಯಮಿಯಾಗಿದ್ದು, ಹಣ ನೀಡಿರುವುದರ ಬಗ್ಗೆ ವಿಡಿಯೋ ಮಾಡಿ ಹೇಳಿಕೆ ನೀಡಿರುವ ಅವರು, 4 ದಿನಗಳ ಹಿಂದೆ ಅಭಿನವ ಹಾಲಶ್ರೀ ಕಾರು ಚಾಲಕ ರಾಜು ಮೈಸೂರಿನಲ್ಲಿ ನನಗೆ 60 ಲಕ್ಷ ರೂ. ಹಣ ನೀಡಿದ್ದರು. ಈ ಪೈಕಿ 56 ಲಕ್ಷ ರೂ. ನನಗೆ ತಲುಪಿಸಿದ್ದರು. ಉಳಿದ 4 ಲಕ್ಷ ರೂ. ವಕೀಲರ ಶುಲ್ಕಕ್ಕಾಗಿ ಕಾರು ಚಾಲಕ ಪಡೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಮೈಸೂರಿನ ನನ್ನ ಕಚೇರಿಗೆ ಶ್ರೀಗಳ ಕಾರು ಚಾಲಕ ಹಣ ಕೊಟ್ಟು ಹೋಗಿದ್ದರು. ಹಣ ವಾಪಸ್ ಪಡೆಯಲು ಯಾರೂ ಬಾರದಿದ್ದರಿಂದ ಮಠಕ್ಕೆ ನೀಡಿದ್ದೇನೆ. ನಾನು ಖುದ್ದು ಹಾಲಸ್ವಾಮಿ ಮಠಕ್ಕೆ ಆಗಮಿಸಿ 56 ಲಕ್ಷ ರೂ. ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಸಿಸಿಬಿ ಡಿಸಿಪಿ ಅಬ್ದುಲ್ ಅಹದ್ಗೆ ಪ್ರಣವ್ ಪ್ರಸಾದ್ ಪತ್ರ ಬರೆದಿದ್ದು, ಕಳೆದ 8 ತಿಂಗಳಿಂದ ಶ್ರೀಗಳಿಗೆ ಪ್ರಣವ್ ಪ್ರಸಾದ್ ಪರಿಚಯವಿದ್ದು, ಆಗಾಗ ಮನೆಗೆ ಆಶೀರ್ವಚನ ನೀಡಲು ಹೋಗುತ್ತಿದ್ದರು. ಆದರೆ ನನಗೂ, ವಂಚನೆ ಕೇಸ್ಗೂ ಯಾವುದೇ ಸಂಬಂಧವಿಲ್ಲ. ತನಿಖೆಗೆ ಅನಕೂಲವಾಗುತ್ತದೆ ಎಂದು ಮಾಹಿತಿ ನೀಡುತ್ತಿದ್ದೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪ್ರಣವ್ ಪತ್ನಿ ಮಾತನಾಡಿ, ಪತಿ ಪ್ರಣವ್ ಮನೆ ಬಿಟ್ಟು 3 ದಿನವಾಯಿತು. ಸ್ವಾಮೀಜಿಗೂ ನಮ್ಮ ಕುಟುಂಬಕ್ಕೂ ಪರಿಚಯವಿತ್ತು. ನನ್ನ ಪತಿಯ ಸಹೋದರ ಮನೆಯಲ್ಲಿ ಸ್ವಾಮೀಜಿ ಉಳಿದು ಕೊಂಡಿದ್ದರು. 2 ವರ್ಷದಿಂದ ನಮಗೆ ಸ್ವಾಮೀಜಿ ಪರಿಚಯ. ನಮಗೆ ಹಣದ ವ್ಯವಹಾರ ಗೊತ್ತಿಲ್ಲ. ನಮ್ಮ ಮನೆಯಲ್ಲಿ ಹಣ ಇರಲಿಲ್ಲ ಎಂದು ಹೇಳಿದ್ದು ಪ್ರಕರಣ ಮತ್ತಷ್ಟು ಕುತೂಹಲ ಕೆರಳಿಸಿದೆ.