ಚೈತ್ರಾ ಕುಂದಾಪುರ ವಂಚನೆ ಮಾದರಿಯಲ್ಲೇ ಮತ್ತೊಂದು ಪ್ರಕರಣ ತಡವಾಗಿ ಬೆಳಕಿಗೆ – ಮತ್ತೊಬ್ಬ ಬಿಜೆಪಿ ಟಿಕೆಟ್ ಆಕಾಂಕ್ಷಿಗೆ ₹21 ಲಕ್ಷ ವಂಚನೆ, ಪ್ರಕರಣ ದಾಖಲು
- ಕರ್ನಾಟಕ
- September 16, 2023
- No Comment
- 103
ನ್ಯೂಸ್ ಆ್ಯರೋ : ಎಂಎಲ್ಎ ಟಿಕೆಟ್ ಕೊಡಿಸುವುದಾಗಿ 7 ಕೋಟಿ ವಂಚನೆ ಆರೋಪದಡಿಯಲ್ಲಿ ಚೈತ್ರ ಕುಂದಾಪುರ ಜೈಲು ಸೇರಿದ ಬೆನ್ನಲ್ಲೇ ಗಾಯತ್ರಿ ತಿಮ್ಮರೆಡ್ಡಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ 21ಲಕ್ಷ ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ಕೊಪ್ಪಳ ಜಿಲ್ಲೆಯ ಕನಕಗಿರಿ ಮೀಸಲು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ವಂಚನೆ ಮಾಡಿದ ಆರೋಪದಡಿ ಮೂವರ ವಿರುದ್ಧ ಬೆಂಗಳೂರಿನ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಜುಲೈ 19ರಂದು ಎಫ್ಐಆರ್ ದಾಖಲಾಗಿದೆ.
ಗಾಯತ್ರಿ ಎನ್ನುವವರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಹಿಂದಿನ ಶಾಸಕರಾಗಿದ್ದ ಬಸವರಾಜ ದಢೇಸೂಗೂರು ಕೂಡ ಟಿಕೆಟ್ ಗಿಟ್ಟಿಸಲು ಕಸರತ್ತು ನಡೆಸಿದ್ದರು. ಪತ್ನಿಗೆ ಹೇಗಾದರೂ ಮಾಡಿ ಟಿಕೆಟ್ ಕೊಡಿಸಲೇಬೇಕು ಎಂದು ಗಾಯತ್ರಿ ಪತಿ ತಿಮ್ಮಾರೆಡ್ಡಿ ಸಾಕಷ್ಟು ಪ್ರಯತ್ನಿಸುತ್ತಿರುವಾಗ ಸ್ನೇಹಿತ ಬೆಂಗಳೂರಿನ ಜೀತು ಎಂಬುವರ ಮೂಲಕ ದೆಹಲಿ ಮೂಲದ ವಿಶಾಲನಾಗ್ ಎಂಬ ವ್ಯಕ್ತಿ ಪರಿಚಯವಾಗಿದ್ದ. ಈ ವೇಳೆ ವಿಶಾಲನಾಗ್ ತನ್ನನ್ನು ಬಿಜೆಪಿಯ ಸೆಂಟ್ರಲ್ ಸರ್ವೆ ತಂಡದ ಮುಖ್ಯಸ್ಥ ಎಂದು ಪರಿಚಯ ಮಾಡಿಕೊಂಡಿದ್ದ.
ನಿಮ್ಮ ಪತ್ನಿಯ ಹೆಸರು ಸರ್ವೇ ನಂಬರ್ನಲ್ಲಿ ಎರಡನೇ ಸ್ಥಾನದಲ್ಲಿದೆ. ಮೊದಲ ಸ್ಥಾನಕ್ಕೆ ತಂದು ಟಿಕೆಟ್ ಕೊಡಿಸುವ ಅವಕಾಶ ನನ್ನ ಕೈಯಲ್ಲಿದೆ. ಪಕ್ಷದ ವರಿಷ್ಠರಿಗೆ ಸಲ್ಲಿಸುವ ಅಂತಿಮ ವರದಿಯಲ್ಲಿ ಗಾಯತ್ರಿ ಹೆಸರು ಮೊದಲ ಸ್ಥಾನದಲ್ಲಿ ಬರಲಿದೆ. ಇದಕ್ಕಾಗಿ ನಮ್ಮ ಸರ್ವೆ ತಂಡದ ಹುಡುಗರಿಗೆ ಹಣ ನೀಡಬೇಕು ಎಂದಿದ್ದ. ಇದನ್ನೇ ನಿಜವೆಂದು ನಂಬಿದ್ದ ತಿಮ್ಮಾರೆಡ್ಡಿ ₹2 ಲಕ್ಷ ಬ್ಯಾಂಕ್ ಖಾತೆ ಮೂಲಕ ಮತ್ತು ₹19 ಲಕ್ಷ ನಗದು ನೀಡಿದ್ದರು.
ತಿಮ್ಮಾರೆಡ್ಡಿ ನೀಡಿದ ದೂರಿನಲ್ಲಿ ಹೀಗಿದೆ
ವಿಶಾಲನಾಗ್ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ನಲ್ಲಿ ತಂಗಿದ್ದಾಗ ಅಲ್ಲಿ ಹಣ ನೀಡಿದ್ದೆ. ಟಿಕೆಟ್ ಸಲುವಾಗಿ ವಿಶಾಲನಾಗ್ ಕರೆದ ಕಾರಣಕ್ಕೆ ನವದೆಹಲಿಗೆ ಹೋಗಿ ನಾಲ್ಕು ದಿನ ಉಳಿದುಕೊಂಡಿದ್ದೆ. ಅಂತಿಮವಾಗಿ ಟಿಕೆಟ್ ಘೋಷಣೆಯಾದಾಗ ನನ್ನ ಪತ್ನಿಯ ಹೆಸರು ಇರಲಿಲ್ಲ. ಈ ಬಗ್ಗೆ ಕೇಳಲು ಕರೆ ಮಾಡಿದರೆ ಸ್ವೀಕರಿಸಲಿಲ್ಲ. ಬಳಿಕ ಕೆಲ ದಿನ ಬಿಟ್ಟು ಹಣ ಕೊಡುತ್ತೇನೆ ಎಂದು ಹೇಳಿದ. ಇದುವರೆಗೂ ಹಣ ನೀಡಿಲ್ಲ ಎಂದು ತಿಮ್ಮಾರೆಡ್ಡಿ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ದೂರಿನ ಆಧಾರದ ಮೇಲೆ ಅಶೋಕ ನಗರ ಠಾಣೆ ಪೊಲೀಸರು ವಿಶಾಲನಾಗ್, ಸ್ನೇಹಿತ ಗೌರವ್ ಮತ್ತು ಜಿತು ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.