ತಿರುಪತಿಗೆ ತೆರಳುವ ಭಕ್ತರೇ ಗಮನಿಸಿ – ಕೈಯಲ್ಲಿ ಕೋಲು ಕಡ್ಡಾಯ, ಗುಂಪಿನ ಜೊತೆ ಹೋಗದಿದ್ರೆ ಕಾದಿದೆ ಅಪಾಯ..!
- ಧಾರ್ಮಿಕ
- August 16, 2023
- No Comment
- 210
ನ್ಯೂಸ್ ಆ್ಯರೋ : ಇತ್ತೀಚೆಗೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳಿದ್ದ ಬಾಲಕಿ ಚಿರತೆಗೆ ಬಲಿಯಾದ ಬಳಿಕ ತಿರುಪತಿ ತಿರುಮಲ ದೇವಾಲಯ ಆಡಳಿತ ಮಂಡಳಿ ಎಚ್ಚೆತ್ತುಕೊಂಡಿದ್ದು, ಭಕ್ತರ ಸುರಕ್ಷತೆಗಾಗಿ ಕ್ರಮ ಕೈಗೊಂಡಿದೆ.
ಏನೆಲ್ಲಾ ಕ್ರಮ?
ಪಾದಾಚಾರಿ ಮಾರ್ಗದಲ್ಲಿ ಭಕ್ತರು ಕಡಿಮೆ ಸಂಖ್ಯೆಯಲ್ಲಿ ಅಥವಾ ಏಕಾಂಗಿಯಾಗಿ ಹೋಗುವಂತಿಲ್ಲ. ಗುಂಪು ಗುಂಪಾಗಿಯೇ ಕಳುಹಿಸಲಾಗುತ್ತದೆ. ಟಿಟಿಡಿ ಅಧ್ಯಕ್ಷ ಬಿ.ಕರುಣಾಕರ ರೆಡ್ಡಿ ಜಿಲ್ಲಾ ಮತ್ತು ಅರಣ್ಯಾಧಿಕಾರಿಗಳ ಜೊತೆ ನಡೆಸಿದ್ದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಲಾಗಿದೆ.
12 ವರ್ಷಕ್ಕಿಂತ ಕಿರಿಯ ಮಕ್ಕಳೊಂದಿಗೆ ಪಾದಚಾರಿ ಮಾರ್ಗದಲ್ಲಿ ಸಂಚರಿಸುವ ಭಕ್ತರಿಗೆ ಬೆಳಗ್ಗೆ 5ರಿಂದ ಮಧ್ಯಾಹ್ನ 2ರ ವರೆಗೆ ಮಾತ್ರ ಅವಕಾಶ ಇರಲಿದೆ. ಅಲ್ಲದೆ ಸಂಜೆ 6ರಿಂದ ಬೆಳಗ್ಗೆ 6ರ ವರೆಗೆ ಘಾಟಿಯಲ್ಲಿ ದ್ವಿಚಕ್ರ ವಾಹನಗಳು ಸಂಚರಿಸುವಂತಿಲ್ಲ ಎನ್ನುವ ನಿಯಮ ಜಾರಿಗೊಳಿಸಲಾಗಿದೆ.
ಉಳಿದ ಪ್ರಮುಖ ನಿರ್ಧಾರಗಳು
- ಪಾದಯಾತ್ರೆಗೆ ತೆರಳುವ ಪ್ರತಿಯೊಬ್ಬರಿಗೂ ಕೋಲು ಕೊಡಲಾಗುತ್ತದೆ. ಅಲ್ಲದೆ 100 ಭಕ್ತರ ಒಂದು ಗುಂಪು ಮಾಡಿ ಸಿಬ್ಬಂದಿಯ ಜೊತೆ ಕಳುಹಿಸಲಾಗುತ್ತದೆ.
- ಅಲಿಪಿರಿ ಮತ್ತು ತಿರುಮಲ ನಡುವಿನ 7ನೇ ಮೈಲಿಯಲ್ಲಿ ಪೊಲೀಸ್ ಚೌಕಿ ನಿರ್ಮಿಸಿ ಮಕ್ಕಳು, ಶಿಶುಗಳ ಕೈಗೆ ಭದ್ರತಾ ಟ್ಯಾಗ್ ಅವಳವಡಿಸಲಾಗುತ್ತದೆ.
- ಪ್ರಾಣಿಗಳಿಗೆ ಆಹಾರ ನೀಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗುತ್ತದೆ. 500 ಸಿಸಿ ಕ್ಯಾಮರಾ, ಫೋಕಸ್ ಲೈಟ್ ಅಳವಡಿಸಲಾಗುತ್ತದೆ. ಜೊತೆಗೆ ಪಾದಾಚಾರಿ ಮಾರ್ಗದಲ್ಲಿ ಬೇಲಿ ನಿರ್ಮಾಣಕ್ಕೆ ಕೇಂದ್ರ ಅರಣ್ಯ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.