ವೈತರಣಿ ನದಿಯ ರಹಸ್ಯ ಗೊತ್ತಾ? – ಈ ನದಿಯಲ್ಲಿ ನೀರು ಹರಿಯೋದಲ್ಲ : ಇದರಲ್ಲಿ ರಕ್ತ, ಕೀವು, ಮೂತ್ರ ಹರಿಯುತ್ತಂತೆ..!!
- ಧಾರ್ಮಿಕ
- August 19, 2023
- No Comment
- 268
ನ್ಯೂಸ್ ಆ್ಯರೋ : ನದಿ ಮಾನವನ ಜೀವನದಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಇದೇ ಕಾರಣಕ್ಕೆ ಜಗತ್ತಿನ ಬಹುತೇಕ ನಾಗರಿಕತೆಗಳು ನದಿ ದಡದಲ್ಲೇ ಆರಂಭವಾಗಿವೆ. ಇನ್ನು ಭಾರತದಲ್ಲಂತೂ ನದಿಯನ್ನು ಪಾಪ ನಾಶಕ ಎಂದೇ ಪರಿಗಣಿಸಲಾಗುತ್ತದೆ.
ವಿಶಿಷ್ಟ ನದಿ
ಆದರೆ ಈಗ ನಾವು ಹೇಳ ಹೊರಟಿರುವ ನದಿ ಮಾತ್ರ ಉಳಿದವುಗಳಿಂತ ಭಿನ್ನ. ಅದುವೇ ವೈತರಣಿ ನದಿ. ಕಾಲ್ಪನಿಕ ನದಿಯಾಗಿರುವ ಇದರ ಬಗ್ಗೆ ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖವಿದೆ. ಗರುಡ ಪುರಾಣದಲ್ಲಿಯೂ ಈ ಭಯಂಕರ ನದಿಯ ಪ್ರಸ್ತಾವವಿದೆ.
ವೈತರಣಿ ನದಿ ಭಯಾನಕ ಕೂಡ ಹೌದು. ಗರುಡ ಪುರಾಣದ ಪ್ರಕಾರ ಈ ನದಿ ಯಮಲೋಕದಲ್ಲಿ ಹರಿಯುತ್ತದೆ. ನಮಗೆ ಗೊತ್ತಿರುವ ನದಿಯಲ್ಲಿ ನೀರು ಹರಿದರೆ ಇದರಲ್ಲಿ ಮಾತ್ರ ರಕ್ತ, ಕೀವು, ಮೂತ್ರ, ಕೊಳಕು ಹರಿಯುತ್ತದೆಯಂತೆ. ಸಾವಿನ ನಂತರ ನಮ್ಮ ಆತ್ಮ ಪ್ರಯಾಣಿಸುವಾಗ ಈ ನದಿಯನ್ನು ದಾಟಿಯೇ ಸಾಗಬೇಕಂತೆ. ಈ ನದಿಯಲ್ಲಿ ಭಯಾನಕ ಕ್ರಿಮಿಗಳು, ಮೊಸಳೆಗಳು, ರಣಹದ್ದುಗಳು ಇರುತ್ತವೆಯಂತೆ.
ಪಾಪಿಗಳಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ
ಸಾವಿನ ನಂತರ ಪಾಪಿಗಳಿಗೆ ಯಮಲೋಕದಲ್ಲಿ ಚಿತ್ರಹಿಂಸೆ ನೀಡುವಂತೆ ವೈತರಣಿ ನದಿಯಲ್ಲೂ ಶಿಕ್ಷೆ ನೀಡಲಾಗುತ್ತದೆಯಂತೆ. ಪಾಪಿಗಳು ಮರಣದ ಬಳಿಕ ಈ ನದಿಯ ಬಳಿ ತೆರಳಿದಾಗ ನೀರು ಕುದಿಯಲು ಆರಂಭವಾಗುತ್ತದೆ. ಪಾಪಿಗಳು ಇದನ್ನು ದಾಟಲು ಬಹಳ ಕಷ್ಟ ಎದುರಿಸಬೇಕಾಗುತ್ತದೆ ಎಂಬ ನಂಬಿಕೆ ಇದೆ.
ಸುಲಭವಾಗಿ ದಾಟುವ ವಿಧಾನ
ವೈತರಣಿ ನದಿ ಎಲ್ಲರಿಗೂ ಶಿಕ್ಷೆ ನೀಡುವುದಿಲ್ಲವಂತೆ. ಜೀವನದಲ್ಲಿ ಒಳ್ಳೆಯ ಕೆಲಸ ಮಾಡಿದವರಿಗೆ ಈ ನದಿ ಶಿಕ್ಷೆಯನ್ನು ನೀಡುವುದಿಲ್ಲ. ಅಂತಹವರು ಸುಲಭವಾಗಿ ಈ ನದಿ ದಾಟಬಹುದು ಎನ್ನುತ್ತದೆ ಗರುಡ ಪುರಾಣ.
ಯಾರು ಶಿವನ ಮೇಲೆ ಭಕ್ತಿ ಹೊಂದಿರುತ್ತಾರೋ ಅಂತಹವರಿಗೆ ಯಾವುದೇ ಕಷ್ಟ ಎದುರಾಗುವುದಿಲ್ಲ. ದಾನ ಧರ್ಮಗಳನ್ನು ಮಾಡಿದವರಿಗೂ ಯಮಲೋಕದ ಯಾತ್ರೆಯಲ್ಲಿ ಯಾವುದೇ ಕಷ್ಟ ಎದುರಾಗುವುದಿಲ್ಲ. ಅದೇ ರೀತಿ ಗೋದಾನ ಮಾಡಿದವರ ಪಾಪವೂ ದೂರವಾಗುತ್ತದೆ. ಅಂತಹವರನ್ನು ಯಮದೂತರು ದೋಣಿಯಲ್ಲಿ ನದಿ ದಾಟಿಸುತ್ತಾರೆ ಎನ್ನುವ ನಂಬಿಕೆ ಇದೆ.