ನಾಗರ ಪಂಚಮಿಯಂದು ಹಾವಿನ ಹುತ್ತಕ್ಕೆ ಹಾಲೆರೆಯೋದು ತಪ್ಪು – ವೈಜ್ಞಾನಿಕ ಕಾರಣ ಇಲ್ಲಿದೆ..
- ಧಾರ್ಮಿಕ
- August 21, 2023
- No Comment
- 182
ನ್ಯೂಸ್ ಆ್ಯರೋ : ಇಂದು ನಾಡಿನಾದ್ಯಂತ ನಾಗರಪಂಚಮಿ ಹಬ್ಬವನ್ನು ದೇವಸ್ಥಾನಗಳಲ್ಲಿ, ಶ್ರದ್ಧಾ ಕೇಂದ್ರಗಳಲ್ಲಿ, ಕುಟುಂಬದ ಮೂಲ ಮನೆಗಳಲ್ಲಿ ನಾಗನ ಕಲ್ಲಿಗೆ ಹಾಲೆರೆದು ಭಕ್ತಿಯಿಂದ ಆಚರಿಸಲಾಗುತ್ತಿದೆ. ಇದು ಪ್ರಕೃತಿ ಮತ್ತು ನಂಬಿಕೆಯ ಮೇಲೆ ಆರಾಧಿಸಲ್ಪಡುವ ಹಬ್ಬವಾಗಿದೆ.
ಶ್ರಾವಣಮಾಸದ ಶುಕ್ಲ ಪಂಚಮಿಯಂದು ಅಂದರೆ ಅಮಾವಾಸ್ಯೆ ಮುಗಿದ ಐದನೇ ದಿನ ಆಚರಣೆ ಮಾಡಲಾಗುತ್ತದೆ. ಈ ಹಬ್ಬದಲ್ಲಿ ನಾಗ ಅರ್ಥಾತ್ ಹಾವನ್ನು ಪೂಜಿಸುವ ಸಂಪ್ರದಾಯವನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ವಿಶೇಷವಾಗಿ ಹೆಣ್ಣುಮಕ್ಕಳು ತಮ್ಮ ಸಹೋದರರ ಒಳಿತಿಗಾಗಿ ನಾಗಪ್ಪನಿಗೆ ಹಾಲನ್ನು ಅರ್ಪಿಸಿ ಪ್ರಾರ್ಥಿಸುವ ಹಬ್ಬ ಇದು.
ಕರಾವಳಿಯಲ್ಲಿ ಇಂದು ನಾಗನ ಕಲ್ಲಿಗೆ ಹಾಲೆರೆದು ನಾಗರ ಪಂಚಮಿಯನ್ನು ಆಚರಿಸಲಾಗುತ್ತದೆ. ಕೆಲವೊಂದು ಕಡೆ ಮೂಡನಂಬಿಕೆ ಎಂಬಂತೆ ನಿಜ ನಾಗನ ಮೈಮೇಲೆ ಹಾಲನ್ನು ಸುರಿದು ಆರಾಧಿಸುತ್ತಾರೆ. ಇದು ಹಾವಿನ ಜೀವಕ್ಕೂ ಕುತ್ತು ಬರುವ ಸಾಧ್ಯತೆಗಳಿಂದು ಈ ರೀತಿಯ ನಡವಳಿಕೆಯನ್ನು ಮುಂದುವರೆಸುವುದು ಪ್ರಕೃತಿ ವಿರುದ್ಧ ನಡೆದುಕೊಂಡ ಹಾಗೆ. ನಾವು ಮಾಡುವ ಅನಾಚಾರಗಳು ಕೆಲವೊಂದು ಬಾರಿ ನಮ್ಮ ಜೀವಕ್ಕೆಯೇ ಅಪಾತ್ತು ತಂದೊಡ್ಡುವ ಸಾಧ್ಯತೆಗಳಿವೆ.
ಈಚೆಗೆ ಪ್ರಜ್ಞಾವಂತರು, ಸ್ವಾಮೀಜಿಗಳು, ಶಿಕ್ಷಕರು ಸಾಮಾಜಿಕ ಕಾರ್ಯಕರ್ತರು ಹುತ್ತಕ್ಕೆ ಹಾಗೂ ನಿಜ ನಾಗನಿಗೆ ಹಾಲೆರೆಯದಂತೆ ಮನವರಿಕೆಯನ್ನು ಮಾಡುತ್ತಿದ್ದಾರೆ. ಇದೀಗ ಹುತ್ತಕ್ಕೆ ಹಾಗೂ ಹಾಗೂ ನಾಗರ ಹಾವಿನ ಮೇಲೆ ಹಾಲೇರುವ ಘಟನೆಗಳು ತುಂಬಾನೇ ಕಡಿಮೆ. ನಾವು ಹುತ್ತದ ಮೇಲೆ ಹಾಲೇರೆಯುವ ಮೊದಲು ಹಾವಿನ ಆಹಾರ ಶೈಲಿ ಬಗ್ಗೆ ತಿಳಿದುಕೊಳ್ಳುವುದು ತುಂಬಾನೇ ಅತ್ಯಗತ್ಯ.
ಹಾವು ಮಾಂಸಾಹಾರಿ ಪ್ರಾಣಿ. ಕಪ್ಪೆ, ಇಲಿ, ಹುಳಗಳು ಅದರ ಪ್ರಮುಖ ಆಹಾರ. ಒಂದು ವೇಳೆ ಹಾಲು ಕುಡಿಯುವುದೇ ಆಗಿದ್ದಲ್ಲಿ ಒಂದು ದಿನ ಹಾಲೆರೆದರೆ ಸಾಕೆ? ಉಳಿದ 364 ದಿನ ಅದು ಎಲ್ಲಿ ಹಾಲನ್ನು ಕುಡಿಯಬೇಕು ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕು.
ಭಾರತದಲ್ಲಿ ಸುಮಾರು 28 ಸಾವಿರ ಜಾತಿಯ ಹಾವುಗಳಿವೆ. ಅವುಗಳಲ್ಲಿ ಅನೇಕ ಹಾವುಗಳು ಅಳಿವಿನಂಚಿನಲ್ಲಿವೆ. ಪರಿಸರ ಸಮತೋಲನಕ್ಕೆ ಹಾವುಗಳು ಬೇಕೇ ಬೇಕು. ಭಾರತದ ಹಾವು ಮಾತ್ರವಲ್ಲ, ಜಗತ್ತಿನ ಯಾವುದೇ ಜಾತಿಯ ಹಾವು ಹಾಲು ಕುಡಿಯುವುದಿಲ್ಲ.
ಹಾವು ಹಾಲು ಕುಡಿದರೆ ಹಾವಿನ ಜೀವಕ್ಕೇ ಕುತ್ತು ಬರುವ ಸಂಭವ ಹೆಚ್ಚಿವೆ. ಹಸಿವು ಮತ್ತು ಬಾಯಾರಿಕೆಯಿಂದ ದ್ರವರೂಪದಲ್ಲಿ ಏನು ಸಿಕ್ಕರೂ ಹಾವು ಕುಡಿಯಬಹುದು. ಆದರೆ ಅದರಿಂದ ಅಜೀರ್ಣ ಉಂಟಾಗಿ ಸಾವಿಗೀಡಾಗುತ್ತದೆ. ಹಾಲು ಮೂಗಿನ ಹೊಳ್ಳೆ ಪ್ರವೇಶಿಸಿ ಶ್ವಾಸಕೋಶ ಮತ್ತು ಕಣ್ಣುಗಳನ್ನು ನಿಷ್ಕ್ರಿಯಗೊಳಿಸಿ ನಿಧಾನವಾಗಿ ಸಾವಿನ ದವಡೆಗೆ ದೂಡುತ್ತದೆ.
ಇನ್ನು ಹುತ್ತಕ್ಕೆ ಒಂದಿಷ್ಟು ಹಾಲು ಹಾಕಿದರೆ ಏನು ತಪ್ಪು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಹಾಲು ಹುತ್ತದ ಮಣ್ಣು ಸೇರಿ ಒಂದು ರೀತಿಯ ವಾಸನೆ ಸಂಯೋಜನೆಗೊಂಡು ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿ ಆಗಲೂ ಹಾವು ಸಾಯುವ ಸಾಧ್ಯತೆಗಳಿವೆ. ಆದ್ದರಿಂದ ಪ್ರಜ್ಞಾವಂತರಾದ ನಾವೆಲ್ಲ ಇದನ್ನು ಮನವರಿಕೆ ಮಾಡಿಕೊಂಡು ಪ್ರಕೃತಿಗೆ ವಿರುದ್ಧವಾದ ಕಾರ್ಯಗಳನ್ನು ಮಾಡಬಾರದು.