ಅಂದು ಮೋದಿ ಮಾತು ಕೇಳಿದ್ದರೆ ಐದು ವರ್ಷ ಸಿಎಂ ಆಗ್ತಿದ್ದೆ..!! – HDK ಮಾತಿನ ಹಿನ್ನೆಲೆಯೇನು ಗೊತ್ತಾ?
- ರಾಜಕೀಯ
- July 13, 2023
- No Comment
- 187
ನ್ಯೂಸ್ ಆ್ಯರೋ : ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಅವರ ವಿರುದ್ದ ಹರಿಹಾಯ್ದ ಜೆಡಿಎಸ್ ಮುಖಂಡ ಎಚ್.ಡಿ. ಕುಮಾರಸ್ವಾಮಿ, ಅಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಾತು ಕೇಳಿದ್ದರೆ 5 ವರ್ಷ ಮುಖ್ಯಮಂತ್ರಿಯಾಗಿರುತ್ತಿದ್ದೆ. ಪದೇ ಪದೇ ಜೆಡಿಎಸ್ ಅನ್ನು ಬಿಜೆಪಿಯ ಬಿ ಟೀಂ ಎಂದು ಟೀಕಿಸುವ ಮುನ್ನ ಈ ವಿಚಾರ ತಿಳಿದಿರಲಿ ಎಂದು ಕೆಂಡ ಕಾರಿದರು.
ಆಪರೇಷನ್ ಕಮಲದ ಪ್ರಸ್ತಾವ
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರ ನೀಡುತ್ತಿದ್ದ ಸಿದ್ದರಾಮಯ್ಯ ಆಪರೇಷನ್ ಕಮಲದ ಬಗ್ಗೆ ಪ್ರಸ್ತಾವಿಸಿದರು. ಆಗ ಮಾತನಾಡಿದ ಕುಮಾರಸ್ವಾಮಿ, ಈಗ ಆಪರೇಷನ್ ಹಸ್ತ ಎಂಬ ಸುದ್ದಿ ಬರುತ್ತಿದೆ ಎಂದರು. ಅದಕ್ಕೆ ಮುಖ್ಯಮಂತ್ರಿ ನೀವು ಏಕೆ ಬಿಜೆಪಿ ಜೊತೆ ಸೇರಿಕೊಂಡಿದ್ದೀರಿ? ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಎಚ್.ಡಿ.ಕೆ. ಮೋದಿ 2019ರಲ್ಲಿ ನನ್ನ ಜೊತೆ ಒಂದೂವರೆ ಗಂಟೆ ಚರ್ಚೆ ನಡೆಸಿದ್ದರು. ಕಾಂಗ್ರೆಸ್ ಜೊತೆ ಸಮ್ಮಿಶ್ರ ಸರಕಾರ ನಡೆಸುತ್ತಿದ್ದಾಗ ಮೋದಿ ಮಾತನಾಡಿ, ಮುಂದಿನ ನಾಲ್ಕು ವರ್ಷ ಯಾವುದೇ ಸಮಸ್ಯೆ ಇಲ್ಲ. ಸರಕಾರಕ್ಕೆ ಬೆಂಬಲ ನೀಡುತ್ತೇವೆ ಎಂದಿದ್ದರು. ಅದಕ್ಕೆ ಒಪ್ಪಿಕೊಂಡಿದ್ದರೆ ಸಿಎಂ ಆಗಿರುತ್ತಿದ್ದೆ. ಕಪ್ಪು ಚುಕ್ಕೆ ಬರಬಾರದು ಎಂದು ಆ ಕೊಡುಗೆ ತಿರಸ್ಕರಿಸಿದೆ ಎಂದು ಹೇಳಿದರು.
ಪದೇ ಪದೆ ಬಿಜೆಪಿ ಟೀಂ ಎಂದು ನೀವೇ ನಮ್ಮನ್ನು ಅತ್ತ ತಳ್ಳುತ್ತೀರಿ. ನಾವು ಆ ರೀತಿಯ ರಾಜಕೀಯ ಮಾಡುವುದಾದರೆ ನೇರವಾಗಿಯೇ ಮಾಡುತ್ತೇವೆ ಎಂದು HDK ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.