ಮಾಜಿ ಶಾಸಕ ರೇಣುಕಾಚಾರ್ಯಗೆ ರಾಜ್ಯ ಬಿಜೆಪಿ ಶಿಸ್ತು ಸಮಿತಿ ನೋಟೀಸ್ – ಯಡಿಯೂರಪ್ಪ ಆಪ್ತನಿಗೆ ಮುಳುವಾಗುತ್ತಾ ಪಕ್ಷ ವಿರೋಧಿ ಹೇಳಿಕೆ…!?
- ರಾಜಕೀಯ
- June 29, 2023
- No Comment
- 241
ನ್ಯೂಸ್ ಆ್ಯರೋ : ಸ್ವಪಕ್ಷದ ನಾಯಕರ ವಿರುದ್ದವೇ ಹೇಳಿಕೆ ನೀಡಿರುವ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ (Renukacharya) ಅವರಿಗೆ ಸಂಕಷ್ಟ ಎದುರಾಗಿದೆ. ಬಿಜೆಪಿ ರಾಜ್ಯ ಶಿಸ್ತು ಸಮಿತಿ (State BJP disciplinary committee) ನೋಟಿಸ್ (Notice) ನೀಡಿ ಕಾರಣ ಕೇಳಿದೆ.
ಲಿಖಿತ ಉತ್ತರಕ್ಕೆ ಸೂಚನೆ
ಪಕ್ಷ ವಿರೋಧಿ ಹೇಳಿಕೆಗಳ ಕುರಿತು ಸಮಿತಿಯ ಅಧ್ಯಕ್ಷ ಲಿಂಗರಾಜ್ ನೋಟಿಸ್ ನೀಡಿದ್ದಾರೆ. ಒಂದು ವಾರದೊಳಗೆ ಲಿಖಿತ ರೂಪದಲ್ಲಿ ಉತ್ತರ ನೀಡುವಂತೆ ಸೂಚಿಸಲಾಗಿದೆ.
ನೋಟಿಸ್ ನಲ್ಲಿ ಏನಿದೆ?
ತಮಗೆ ಸಾಕಷ್ಟು ಬಾರಿ ತಿಳಿ ಹೇಳಿದರೂ ತಾವು ಪದೇ ಪದೆ ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ವಿರುದ್ಧ ಮಾಧ್ಯಮಗಳ ಮುಂದೆ ಪಕ್ಷಕ್ಕೆ ಮುಜುಗರವಾಗುವ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಿರುವುದನ್ನು ರಾಜ್ಯ ಶಿಸ್ತು ಸಮಿತಿ ಗಂಭೀರವಾಗಿ ಪರಿಗಣಿಸಿ, ತಮ್ಮ ಮೇಲೆ ಯಾಕೆ ಶಿಸ್ತು ಕ್ರಮ ಜರುಗಿಸಬಾರದೆಂದು ಕೇಳಿ ಈ ನೊಟೀಸನ್ನು ನೀಡಲಾಗಿದೆ. ವಾರದೊಳಗೆ ಉತ್ತರ ನೀಡಿ ಎಂದು ಪತ್ರದಲ್ಲಿ ಬರೆದಿದೆ.
ಇತ್ತೀಚೆಗೆ ರೇಣುಕಾಚಾರ್ಯ ವಾಗ್ದಾಳಿ ನಡೆಸಿ, ಬಿ.ಎಸ್.ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿದ್ದು ಬಿಜೆಪಿ ಸೋಲಿಗೆ ಕಾರಣವಾಗಿತ್ತು ಎಂದಿದ್ದರು. ಜೊತೆಗೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರನ್ನೂ ಟೀಕಿಸಿದ್ದರು.
ಮೊದಲೇ ರಾಜ್ಯ ಬಿಜೆಪಿಯಲ್ಲಿ ಬಿ.ಎಲ್. ಸಂತೋಷ್ ಬಣ ಹಾಗೂ ಯಡಿಯೂರಪ್ಪ ಬಣ ಎಂಬ ಬಣ ರಾಜಕೀಯ ಜೋರಾಗಿದ್ದು, ಬಿಜೆಪಿ ಅಧಿಕಾರದಲ್ಲಿ ಇದ್ದಾಗಲೇ ಬಿಜಾಪುರ ಶಾಸಕ ಬಸವನಗೌಡ ಪಾಟೀಲ್ ಯಡಿಯೂರಪ್ಪ ಹಾಗೂ ಬೊಮ್ಮಾಯಿ ವಿರುದ್ಧ ಹೇಳಿಕೆಗಳನ್ನು ನೀಡುತ್ತಾ ಬಿಜೆಪಿಗೆ ಮುಜುಗರ ಉಂಟು ಮಾಡುತ್ತಿದ್ದರು. ಆದರೆ ಆಗ ಅವರಿಗೆ ನೋಟೀಸ್ ನೀಡದೇ ರೇಣುಕಾಚಾರ್ಯಗೆ ನೀಡಿದ್ದು ಯಾಕೆ ಎಂಬ ಪ್ರಶ್ನೆ ಎದುರಾಗಿದೆ. ಇದು ಇನ್ಯಾವ ರೀತಿ ತಿರುವು ಪಡೆಯಲಿದೆ ಎಂದು ಕಾದುನೋಡಬೇಕಿದೆ..