ಬುಡಕಟ್ಟು ವ್ಯಕ್ತಿಯ ಮೇಲೆ ಮೂತ್ರ ವಿಸರ್ಜಿಸಿ ದರ್ಪ ಪ್ರದರ್ಶಿಸಿದ ಬಿಜೆಪಿ ಶಾಸಕನ ಆಪ್ತ – ಅಮಾನವೀಯತೆ ತೋರಿದಾತನ ಮನೆಯನ್ನೇ ಧ್ವಂಸ ಮಾಡಿದ ಸರ್ಕಾರ..!
- ರಾಷ್ಟ್ರೀಯ ಸುದ್ದಿ
- July 5, 2023
- No Comment
- 278
ನ್ಯೂಸ್ ಆ್ಯರೋ : ಮನುಷ್ಯ ಬುದ್ಧಿವಂತನಾದಂತೆ, ಡಿಜಿಟಲಿಕರಣ ಎಂಬ ನವ ಯುಗಕ್ಕೆ ತೆರೆದುಕೊಳ್ಳುತ್ತಿದ್ದಂತೆ ಮನುಷ್ಯತ್ವನ್ನು ಮರೆಯುತ್ತಿದ್ದಾನೆ. ಕೊಲೆ, ಸುಲಿಗೆ, ಅಮಾನವೀಯ ಕ್ರೌರ್ಯಗಳು ಹೆಚ್ಚಾಗುತ್ತಿವೆ. ಕೆಲ ದುರಹಂಕಾರಿಗಳ ದರ್ಪಕ್ಕೆ ಅಮಾಯಕರು ಜೀವ ಹಾಗೂ ಮರ್ಯಾದೆ ಕಳೆದುಕೊಂಡು ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಈ ಮಾತಿಗೆ ಕನ್ನಡಿ ಹಿಡಿದಂತೆ ಮಧ್ಯಪ್ರದೇಶದ ಯುವಕನೊಬ್ಬ ಅಮಾಯಕ ಬುಡಕಟ್ಟು ವ್ಯಕ್ತಿಯ ಮೇಲೆ ನಡು ರಸ್ತೆಯಲ್ಲೇ ಮೂತ್ರ ವಿಸರ್ಜಿಸಿ ದರ್ಪ ತೋರಿಸಿದ್ದಾನೆ. ಈ ಅಮಾನವೀಯ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
6 ತಿಂಗಳ ಹಿಂದೆ ನಡೆದಿದ್ದ ಘಟನೆ!
ಇಂತಹದ್ದೊಂದು ಅಮಾನವೀಯ ಘಟನೆ ನಡೆದಿರುವುದು ಮಧ್ಯಪ್ರದೇಶ ಜಿಲ್ಲೆಯ ಸಿದ್ದಿ ಜಿಲ್ಲೆಯಲ್ಲಿ. ಪ್ರವೇಶ್ ಶುಕ್ಲ ಎಂಬ ಯುವಕ ಬುಡಕಟ್ಟು ಕಾರ್ಮಿಕನಾದ ಪಲೆಕೋಲ್ ಎಂಬಾತನ ಮೇಲೆ ರಸ್ತೆಯ ಬದಿ ಕೂರಿಸಿ ಮೂತ್ರ ವಿಸರ್ಜನೆ ಮಾಡಿ ಅದನ್ನು ವಿಡಿಯೋ ಮಾಡಿದ್ದಾನೆ. ಇದು 6 ತಿಂಗಳ ಹಿಂದಿನ ವಿಡಿಯೋ ಆಗಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕೃತ್ಯ ಎಸಗಿದ್ದು ಬಿಜೆಪಿ ಶಾಸಕನ ಆಪ್ತ!
ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಘಟನೆ ಮಧ್ಯಪ್ರದೇಶದ ಸಿ.ಎಂ. ಶಿವರಾಜ್ ಸಿಂಗ್ ಚೌಹಾಣ್ ಅವರ ಗಮನಕ್ಕೂ ಬಂದಿದ್ದು, ಆರೋಪಿಯನ್ನು ಬಂಧಿಸಲು ಪೊಲೀಸ್ ಇಲಾಖೆಗೆ ಆದೇಶ ನೀಡಿದ್ದಾರೆ. ಪೊಲೀಸರು ತಕ್ಷಣವೇ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯ ಬಂಧನದ ಬಳಿಕ ಈತ ಬಿಜೆಪಿ ಶಾಸಕ ಕೇದಾರ್ ಶುಕ್ಲ ಅವರ ಆಪ್ತ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಜೊತೆಗೆ ಕೇದಾರ್ ಶುಕ್ಲ ಅವರೊಂದಿಗಿನ ಆರೋಪಿಯ ಫೋಟೋವನ್ನು ಪ್ರತಿಪಕ್ಷ ಪೇಸ್ ಬುಕ್ ನಲ್ಲಿ ಹಂಚಿಕೊಂಡಿದೆ.
ನೆಟ್ಟಿಗರಿಂದ ಆರೋಪಿಗೆ ಕ್ಲಾಸ್!
ಈ ವಿಡಿಯೋ ಟ್ವಿಟ್ಟರ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಕೆಂಡಾಮಂಡಲವಾಗಿದ್ದಾರೆ. ‘ಯಾರೇ ಆಗಿದ್ದರೂ ಸಮಾಜದಲ್ಲಿರುವ ಅಮಾಯಕರ ಮೇಲೆ ಇಂತಹ ಅಮಾನವೀಯ ಕೃತ್ಯ ಎಸಗುವುದು ಖಂಡನೀಯ. ಇಂತಹ ಪಾಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಸರ್ಕಾರದ ಮೇಲೆ ಒತ್ತಾಯ ಹೇರಿದ್ದಾರೆ. ಸದ್ಯ ಯುವಕನ ಈ ಅಮಾನವೀಯ ನಡೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಕೆಲ ಮಾಧ್ಯಮಗಳು ಕುಡಿದ ಮತ್ತಿನಲ್ಲಿ ಆತ ಈ ರೀತಿ ವರ್ತಿಸಿದ್ದಾನೆ ಎಂದು ವರದಿ ಮಾಡಿವೆ.
ಬಂಧಿತ ಆರೋಪಿಯ ತಂದೆ ರಮಾಕಾಂತ್ ಅವರು, ನನ್ನ ಮಗ ಹಲವು ವರ್ಷಗಳಿಂದ ಬಿಜೆಪಿಯಲ್ಲಿದ್ದಾನೆ. ಶಾಸಕ ಕೇದಾರ್ನಾಥ್ ಶುಕ್ಲಾ ನಿಕಟವರ್ತಿಯಾಗಿದ್ದಾನೆ. ಸುಳ್ಳು ಪ್ರಕರಣ ದಾಖಲಿಸಿ ಆತನನ್ನು ಸಿಲುಕಿಸಲು ಸಂಚು ನಡೆದಿದೆ ಎಂದು ಆರೋಪಿಸಿದ್ದಾರೆ. ಆದರೆ, ಪ್ರವೇಶ್ ವರ್ತನೆಯನ್ನು ಖಂಡಿಸಿರುವ ಕೇದಾರ್ನಾಥ್ ಶುಕ್ಲಾ ಆತನಿಗೂ (ಪ್ರವೇಶ್ ಶುಕ್ಲಾಗೂ) ಕೇಸರಿ ಪಕ್ಷಕ್ಕೂ ಸಂಬಂಧವಿಲ್ಲ ಎನ್ನುವ ಮೂಲಕ ಅಂತರ ಕಾಯ್ದುಕೊಂಡಿದ್ದಾರೆ. ಇತ್ತ ಕಾಂಗ್ರೆಸ್ ಪಕ್ಷವು, ಅಮಾನವೀಯ ವರ್ತನೆ ಎಂದಿದೆ. ಇದರ ನಡುವೆ ಅಮಾನವೀಯ ನಡೆ ತೋರಿದ ವ್ಯಕ್ತಿಯ ಮನೆಯನ್ನು ಧ್ವಂಸ ಮಾಡಿದ್ದು ಉತ್ತಮ ಬೆಳವಣಿಗೆಯಾಗಿದೆ.