ನಿಮ್ಮ ನಾಯಿ ಯಾರಿಗೂ ಕಚ್ಚದಂತೆ ಜಾಗ್ರತೆ ವಹಿಸಿ – ಕೊಂಚ ಯಾಮಾರಿದ್ರೂ ಆರು ತಿಂಗಳು ಜೈಲು ಶಿಕ್ಷೆ ಗ್ಯಾರಂಟಿ..!
- ರಾಷ್ಟ್ರೀಯ ಸುದ್ದಿ
- August 3, 2023
- No Comment
- 114
ನ್ಯೂಸ್ ಆ್ಯರೋ : ಇತ್ತೀಚೆಗೆ ದೇಶದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗುತ್ತಿದೆ. ಝಾರ್ಖಂಡ್, ಕೇರಳ ಸೇರಿದಂತೆ ವಿವಿಧೆಡೆ ನಾಯಿ ಕಡಿತದ ಪ್ರಕರಣ ಅಧಿಕವಾಗಿರುವುದು ಕಂಡುಬಂದಿದೆ. ಬೀದಿ ನಾಯಿ ಜೊತೆಗೆ ಸಾಕು ನಾಯಿ ಕಡಿತದಿಂದಲೂ ಜನ ಬೇಸತ್ತಿದ್ದಾರೆ. ಹಾಗಾದರೆ ಶ್ವಾನ ಬೆಳೆಸುವಾಗ ಯಾವ ರೀತಿ ಕ್ರಮ ಕೈಗೊಳ್ಳಬೇಕು? ಬೀದಿ ನಾಯಿಕಾಟದಿಂದ ಪಾರಾಗುವ ಬಗೆ ಹೇಗೆ? ಎನ್ನುವುದನ್ನು ನೋಡೋಣ.
ವಾತಾವರಣ ಬದಲಾವಣೆಯಿಂದ ನಾಯಿ ಕಡಿತ ಹೆಚ್ಚಳ?
ಹೌದು, ಬದಲಾದ ವಾತಾವರಣ ಇತ್ತೀಚಿನ ದಿನಗಳಲ್ಲಿ ನಾಯಿ ಕಡಿತ ಹೆಚ್ಚಾಗಲು ಕಾರಣ ಎಂದು ತಜ್ಞರು ಹೇಳುತ್ತಾರೆ. ಜೂನ್-ಆಗಸ್ಟ್ ನಾಯಿಗಳ ಸಂತಾನೋತ್ಪತ್ತಿ ಕಾಲ. ಅಲ್ಲದೆ ಮಳೆಗಾಲದಲ್ಲಿ ನಾಯಿಗಳ ಹಾರ್ಮೋನುಗಳಲ್ಲಿ ಬದಲಾವಣೆ ಸಂಭವಿಸುತ್ತದೆ. ಇದು ಅವುಗಳನ್ನು ವ್ಯಘ್ರವಾಗಿಸುತ್ತದೆ. ಇದರಿಂದಲೇ ಅವು ಕಾರಣವಿಲ್ಲದೆ ಆಕ್ರಮಣ ಮಾಡುತ್ತವೆ.
ಮುಂಜಾಗ್ರತಾ ಕ್ರಮ
- ಕೆಲವರು ಮುದ್ದಾದ ಸಾಕು ನಾಯಿ ಕಂಡು ಬಂದರೆ ತಕ್ಷಣ ಅದರ ಬಳಿ ತೆರಳಿ ಹಣೆಯನ್ನು ಸವರುತ್ತಾರೆ. ಇದು ಸರಿಯಲ್ಲ. ಈ ನಾಯಿ ಆಕ್ರಮಣಕಾರಿ ಸ್ವಭಾವ ಹೊಂದಿದೆಯೋ ಎನ್ನುವುದನ್ನು ಮೊದಲು ಸಾಕುವವರಲ್ಲಿ ಕೇಳಿ ತಿಳಿದುಕೊಳ್ಳಿ.
- ಸಾಕು ನಾಯಿ ಕಂಡು ಬಂದರೆ ತಕ್ಷಣ ಓಡಲು ಆರಂಭಿಸಬೇಡಿ. ಹೀಗೆ ಮಾಡಿದರೆ ಅವು ಬೆನ್ನಟ್ಟುವ ಸಾಧ್ಯತೆ ಇದೆ.
- ಯಾರ ಮಾತನ್ನು ಕೇಳುತ್ತದೆಯೋ ಅವರ ಜೊತೆ ಮಾತ್ರ ನಾಯಿಯನ್ನು ವಾಕಿಂಗ್ ಕಳುಹಿಸಿ. ಮಕ್ಕಳು ಮತ್ತು ವೃದ್ಧರ ಜೊತೆ ನಾಯಿಯನ್ನು ಹೊರಗೆ ಸುತ್ತಾಡಲು ಬಿಡಬೇಡಿ.
- ನಾಯಿ ಸಾಕುವುದಿದ್ದರೆ ಚಿಕ್ಕಂದಿನಿಂದಲೇ ಅದನ್ನು ಎಲ್ಲರೊಂದಿಗೆ ಬೆರೆಯಲು ಬಿಡಿ. ಯಾರಿಗೂ ಕಚ್ಚದಂತೆ ಬೆಳೆಸಿ
- ಹೊರಗೆ ಕರೆದುಕೊಂಡು ಹೋಗುವಾಗ ನಾಯಿಯ ಬಾಯಿಯನ್ನು ಮುಚ್ಚಿ
- ಇತರರೊಂದಿಗೆ ಮಾತನಾಡುವಾಗ ನಾಯಿಯ ಹಗ್ಗ ಸಡಿಲ ಮಾಡಬೇಡಿ
ಇದನ್ನು ಗಮನದಲ್ಲಿಡಿ
ನಾಯಿ ಸಾಕುವಾಗ ಕೆಲವೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
- ಕೆಲವು ನಗರಗಳಲ್ಲಿ ಶ್ವಾನ ಸಾಕಲು ಲೈಸನ್ಸ್ ಅಗತ್ಯ. ಇಲ್ಲದಿದ್ದರೆ ದಂಡ ಕಟ್ಟಬೇಕಾಗುತ್ತದೆ. ಹೀಗಾಗಿ ಈ ಬಗ್ಗೆ ಮಾಹಿತಿ ಕಲೆಹಾಕಿ
- ಚಿಕ್ಕ ಶ್ವಾನ ಮರಿಯನ್ನು ಮಗುವಿನಂತೆಯೇ ಬೆಳೆಸಿ. ಅಪರಿಚಿತರು ಬಂದಾಗ ಆಕ್ರಮಣಕಾರಿ ವರ್ತನೆ ತೋರದಂತೆ ಅಭ್ಯಾಸ ಮಾಡಿ
*ಸಾಕುವ ನಾಯಿಯ ಪ್ರಬೇಧದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಿರಿ
*ಆರಂಭದಿಂದಲೇ ಸಾಕು ನಾಯಿಗೆ ಆಹಾರ ಒದಗಿಸುವ ಸಮಯವನ್ನು ನಿಗದಿ ಪಡಿಸಿ. ಅದರ ಪ್ರಕಾರ ಸಮಯಕ್ಕೆ ಸರಿಯಾಗಿ ಆಹಾರ ನೀಡಿ
ಬೀದಿ ನಾಯಿ ಬಗ್ಗೆ ಎಚ್ಚರಿಕೆ ವಹಿಸಿ
ಸಾಕು ನಾಯಿಗಳ ವಿಚಾರದಲ್ಲಿ ಯಾವೆಲ್ಲ ಮುಂಜಾಗ್ರತಾ ಕ್ರಮ ವಹಿಸಬೇಕು ಎನ್ನುವುದನ್ನು ನೋಡಿದ್ದೇವೆ. ಇನ್ನು ಬೀದಿ ನಾಯಿಗಳ ಜೊತೆ ಹೇಗೆಲ್ಲ ವರ್ತಸಬೇಕು ಎನ್ನುವುದನ್ನು ಗಮನಿಸೋಣ.
ಬೀದಿ ನಾಯಿ ಆಕ್ರಮಣ ಮಾಡಲು ಬಂದಾಗ ಎನು ಮಾಡಬೇಕು?
*ನೀವು ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ನಾಯಿ ಎದುರಾಗಿ ಕಚ್ಚಲು ಬಂದರೆ ಗಾಬರಿಯಾಗಿ ಓಡಬೇಡಿ. ಆತ್ಮವಿಶ್ವಾಸ, ಧೈರ್ಯದಿಂದ ಎದುರಿಸಿ. ಕಲ್ಲು ಅಥವಾ ಕೋಲಿನ ಸಹಾಯದಿಂದ ಅವುಗಳನ್ನು ಬೆದರಿಸಲು ನೋಡಿ.
*ಕೆಲವೊಂದು ನಾಯಿಗಳು ವಾಹನದ ಹಿಂದೆ ಅಟ್ಟಿಸಿಕೊಂಡು ಬರುತ್ತವೆ. ಆಗ ಗಾಬರಿಯಿಂದ ವಾಹನದ ವೇಗ ಹೆಚ್ಚಿಸಬೇಡಿ. ಇದರಿಂದ ಅಪಪಘಾತಗಳಾಗುವ ಸಾಧ್ಯತೆ ಇದೆ. ಒದಲಾಗಿ ಹಾರ್ನ್ ಮಾಡಿ. ಇದರಿಂದ ನಾಯಿ ಶಾಂತವಾಗುತ್ತದೆ.
*ಬೆಳಗಿನ ವಾಕಿಂಗ್ ಹೋಗುವಾಗ ಬೀದಿ ನಾಯಿಯ ಕಾಟ ವಿಪರೀತವಾಗಿದ್ದರೆ ಜೊತೆಗೆ ಒಂದು ಕೋಲು ಅಥವಾ ವಿಸಿಲ್ ಕೊಂಡೊಯ್ಯಿರಿ. ಇದಕ್ಕೆ ಅವು ಹೆದರುತ್ತವೆ. ಬಾಟಲಿ ಇದ್ದರೆ ನೀರನ್ನು ಅವುಗಳ ಮೇಲೆ ಸಿಂಪಡಿಸಿ.
*ಬೀದಿಯಲ್ಲಿರುವ ನಾಯಿ, ನಾಯಿ ಮರಿಗಳನ್ನು ಸ್ಪರ್ಶಿಸದಂತೆ ಮಕ್ಕಳಿಗೆ ತಿಳಿ ಹೇಳಿ. ಇವುಗಳಲ್ಲಿರುವ ಸೂಕ್ಷ್ಮಾಣು ಜೀವಿಗಳು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು.
ಬೀದಿ ನಾಯಿಗಳು ಯಾಕೆ ಆಕ್ರಮಣ ಸ್ವಾಭಾವ ಹೊಂದಿರುತ್ತವೆ?
ಇದಕ್ಕೆ ನಮ್ಮ ವರ್ತನೆಯೇ ಮುಖ್ಯ ಕಾರಣ. ಮೊದಲೇ ಬೀದಿ ನಾಯಿಗಳಿಗೆ ಸಮರ್ಪಕ ಆಹಾರ ದೊರೆತಿರುವುದಿಲ್ಲ. ಈ ಮಧ್ಯೆ ಕೆಲವರು ಅದಕ್ಕೆ ಕಲ್ಲು ಹೊಡೆಯುವುದು, ಬೆದರಿಸುವುದು ಇತ್ಯಾದಿ ಮಾಡುತ್ತಿರುತ್ತಾರೆ. ಇದು ಬೀದಿ ನಾಯಿಯನ್ನು ಕೆರಳಿಸಿ ಆಕ್ರಮಣ ಮನೋಭಾವ ಮೂಡುವಂತೆ ಮಾಡುತ್ತದೆ. ಒಂದು ವೇಳೆ ನೀವು ಅದಕ್ಕೆ ಆಹಾರ ಒದಗಿಸಿದರೆ ಅದು ನಿಮ್ಮ ಜೊತೆಯೂ ಪ್ರೀತಿಯಿಂದ ವರ್ತಿಸುತ್ತದೆ.
ನಾಯಿ ಕಡಿತವಾದ ತಕ್ಷಣ ಎನು ಮಾಡಬೇಕು?
ನಾಯಿ ಕಚ್ಚಿದರೆ ತಕ್ಷಣ ಪ್ರಥಮ ಚಿಕಿತ್ಸೆ ಪಡೆದುಕೊಳ್ಳಬೇಕು. ಮೊದಲು ಶುದ್ಧ ನೀರಿನಿಂದ ಗಾಯವನ್ನು ತೊಳೆಯಬೇಕು. ಬಳಿಕ ಆ್ಯಂಟಿ ಬ್ಯಾಕ್ಟೀರಿಯಾ ಕ್ರೀಮ್ ಹಚ್ಚಬೇಕು. ನಂತರ ಬ್ಯಾಂಡೇಜ್ ಅಥವಾ ಬಟ್ಟೆಯಿಂದ ಪಟ್ಟಿ ಕಟ್ಟಿ ಕೂಡಲೇ ವೈದ್ಯರನ್ನು ಭೇಟಿಯಾಗಬೇಕು. ನಾಯಿ ಕಡಿತವಾಗಿ 24 ಗಂಟೆಯೊಳಗೆ ಆ್ಯಂಟಿ ರ್ಯಾಬೀಸ್ ಇಂಜೆಕ್ಷನ್ ತೆಗೆದುಕೊಳ್ಳಬೇಕು.
ನಾಯಿ ಕಡಿತಕ್ಕೆ ಶಿಕ್ಷೆ ಏನು?
ಕಡಿದರೆ ಸಾಕು ನಾಯಿಗೆ ಶಿಕ್ಷೆ ನೀಡಲಾಗುವುದಿಲ್ಲ. ಐ.ಪಿ.ಸಿ. ಸೆಕ್ಷನ್ 289ರ ಪ್ರಕಾರ ಸಾಕು ನಾಯಿಯ ಮಾಲಕರಿಗೆ ಗರಿಷ್ಟ 6 ತಿಂಗಳುವರೆಗೆ ಜೈಲು ವಿಧಿಸುವ ಸಾಧ್ಯತೆ ಇದೆ.