ಮೂಡಬಿದಿರೆ : ಗಣಪತಿ ಕಟ್ಟೆಯ ಮೇಲೆ ಹಸಿರು ಧ್ವಜ – ಪಿಡಿಒ ನಿರ್ಲಕ್ಷ್ಯ ಧೋರಣೆ, ತರಾಟೆಗೆ ತೆಗೆದುಕೊಂಡ ಇನ್ಸ್ಪೆಕ್ಟರ್ ಸಂದೇಶ್ : ವಿಡಿಯೋ ವೈರಲ್..!!
- ಕರಾವಳಿ
- October 6, 2023
- No Comment
- 243
ನ್ಯೂಸ್ ಆ್ಯರೋ : ಕಿಡಿಗೇಡಿಗಳು ಗಣಪತಿ ಕಟ್ಟೆಯಲ್ಲಿ ಹಸಿರು ಬಾವುಟವಿಟ್ಟು ಗಲಭೆಗೆ ಯತ್ನಿಸಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಪುಚ್ಚೆಮೊಗೇರು ಎಂಬಲ್ಲಿ ಸೆ.30ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಈಗಾಗಲೇ ಶಿವಮೊಗ್ಗದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದು ಗಲಭೆ ಉಂಟಾದ ಪ್ರಕರಣದ ತನಿಖೆ ನಡೆಯುತ್ತಿದೆ. ಅದೇ ದಿನ ಮಂಗಳೂರಿನಲ್ಲೂ ಶಾಂತಿ ಕದಡುವ ಕೆಲಸ ನಡೆದಿತ್ತು ಎಂದು ತಿಳಿದುಬಂದಿದೆ. ಆದರೆ, ಮೂಡಬಿದ್ರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ ಸಮಯಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದೆ.
ದಕ್ಷಿಣ ಭಾರತದಲ್ಲಿ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಪುಚ್ಚೆಮುಗೇರು ಗ್ರಾಮದಲ್ಲಿ ಹಿಂದೂ ಧಾರ್ಮಿಕ ಕಟ್ಟೆಯಲ್ಲಿ ಇಸ್ಲಾಂ ಧ್ವಜ ನೆಟ್ಟ ಘಟನೆ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಮೂಡಬಿದಿರೆ ಪೊಲೀಸರು ಧ್ವಜವನ್ನು ತೆರವು ಮಾಡಿದ್ದಾರೆ.
ಈ ವೇಳೆ ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ. ಪಂಚಾಯತ್ ಅನುಮತಿ ಪಡೆಯದೆ ಹಾಕಿರುವ ಧ್ವಜ ಇದಾಗಿದ್ದು, ಈ ಬಗ್ಗೆ ಪೊಲೀಸರ ಗಮನಕ್ಕೆ ತರದಿರುವುದಕ್ಕೆ ಪಿಡಿಒ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜೊತೆಗೆ ಪಿಡಿಒ ಕರ್ತವ್ಯದ ಬಗ್ಗೆ ಎಚ್ಚರಿಕೆ ನೀಡಿದ್ದು, ನಿಮ್ಮ ಮೇಲೆ ಕೇಸ್ ಹಾಕೋದಾಗಿ ಎಚ್ಚರಿಸಿದ್ದಾರೆ.
ತರಾಟೆಗೆ ತೆಗೆದುಕೊಂಡ ದೃಶ್ಯ ವೈರಲ್ ಆಗಿರುವ ವಿಡಿಯೋದಲ್ಲಿದೆ. ಗಣಪತಿ ಕಟ್ಟೆ ಮೇಲೆ ಬಾವುಟ ಹಾಕಲಿಕ್ಕೆ ಅನುಮತಿ ತೆಗೊಂಡಿದ್ದಾರಾ? ಎಂದು ಪಿಡಿಒರನ್ನು ಇನ್ಸ್ಪೆಕ್ಟರ್ ಪ್ರಶ್ನೆ ಮಾಡಿದರು. ನಿನ್ನ ಕೆಲಸ ಏನೂ ಅಂತ ನಿನಗೆ ಗೊತ್ತಿಲ್ಲ, ಏನು ಮಾಡ್ತಾ ಇದೀಯಾ? ಅವರು ಅನುಮತಿ ತೆಗೆದುಕೊಂಡಿಲ್ಲ ಅಂದ್ರೆ ಪೊಲೀಸ್ ದೂರು ಕೊಡಬೇಕು. ಮೊದಲು ಇವನನ್ನೇ ಆರೋಪಿ ಮಾಡಬೇಕು. ನಿನ್ನ ಅಧಿಕಾರ ಏನು ಅಂತ ನಿನಗೇ ಗೊತ್ತಿಲ್ಲ. ನನಗೂ ಇದಕ್ಕೂ ಸಂಬಂಧ ಇಲ್ಲ ಅಂತ ಹೇಳುವ ನೀನ್ಯಾಕೆ ಪಿಡಿಒ ಆಗಿದ್ದೀಯ ಅಂತ ಇನ್ಸ್ಪೆಕ್ಟರ್ ಗರಂ ಆದರು.
ಇನ್ನು ಗ್ರಾಮದಲ್ಲಿ ಅಹಿತಕರ ಘಟನೆಗೆ ಈ ಕೃತ್ಯ ಕಾರಣವಾಗುತ್ತಿತ್ತು. ಪೊಲೀಸರ ಸಕಾಲಿಕ ಕ್ರಮದಿಂದ ಪ್ರಕರಣ ತಿಳಿಯಾಗಿದೆ. ಇನ್ನು ಧ್ವಜ ನೆಟ್ಟವರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.