ಈ ಬಾರಿ ಮಂಗಳೂರು ದಸರಾದಲ್ಲಿ ದೈವಕೋಲ ಸ್ಥಬ್ದ ಚಿತ್ರಕ್ಕೆ ಇಲ್ಲ ಅವಕಾಶ – ಸಾರ್ವಜನಿಕರಿಗೆ ದಸರಾ ಸಮಿತಿಯ ಮನವಿ
- ಕರಾವಳಿ
- October 13, 2023
- No Comment
- 127
ನ್ಯೂಸ್ ಆ್ಯರೋ : ಮಂಗಳೂರು ದಸರಾ ಮೆರವಣಿಗೆಯಲ್ಲಿ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಯಾವುದೇ ರೀತಿಯ ಸ್ತಬ್ದ ಚಿತ್ರಗಳನ್ನು ಬಳಸದಂತೆ ದಸರಾ ಸಮಿತಿ ಮನವಿ ಮಾಡಿದೆ.
ದಸರಾ ಆಚರಣೆ, ಮೆರವಣಿಗೆ ಕುರಿತು ಯಾವುದೇ ವಿವಾದ ಸೃಷ್ಟಿಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಸಮಿತಿ ಸಭೆಯಲ್ಲಿ ಮುಖ್ಯವಾಗಿ ದಸರಾ ಮೆರವಣಿಗೆಯಲ್ಲಿ ಈ ಬಾರಿ ತುಳುನಾಡಿನ ದೈವಗಳ ಸ್ತಬ್ಧಚಿತ್ರಗಳನ್ನು ಬಳಸದಂತೆ ತೀರ್ಮಾನ ಕೈಗೊಳ್ಳಲಾಗಿದೆ.
ಇತ್ತೀಚೆಗೆ ಸಾರ್ವಜನಿಕ ಮೆರವಣಿಗಳಲ್ಲಿ ದೈವ ಕೋಲ ಸ್ತಬ್ದ ಚಿತ್ರಗಳು ವಿವಾದ ಸೃಷ್ಟಿಸುತ್ತಿದ್ದು, ಈ ಕುರಿತು ಅನೇಕ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ. ಹೀಗಾಗಿ ಮಂಗಳೂರು ದಸರಾ ಸಮಿತಿ ಈ ನಿರ್ಣಯ ಕೈಗೊಂಡಿದೆ.
ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ 34ನೇ ವರ್ಷದ ದಸರಾ ಹಬ್ಬಕ್ಕೆ ಅಕ್ಟೋಬರ್ 15ರಂದು ಚಾಲನೆ ದೊರೆಯಲಿದ್ದು, ಅಕ್ಟೋಬರ್ 24ರ ಅದ್ದೂರಿ ಮೆರವಣಿಗೆಯೊಂದಿಗೆ ಸಂಪನ್ನವಾಗಲಿದೆ.
ಈ ಮೆರವಣಿಗೆಯಲ್ಲಿ ದಕ್ಷಿಣ ಕನ್ನಡದ ವಿವಿಧ ಭಾಗಗಳ ಟ್ಯಾಬ್ಲೋ ಗಳು ಪಾಲ್ಗೊಳ್ಳಲಿವೆ. ದಕ್ಷಿಣ ಕನ್ನಡದ ಸಂಸ್ಕೃತಿಯನ್ನು ಬಿಂಬಿಸುವ ದೈವಕೋಲಕ್ಕೆ ಅವಮಾನವಾಗಬಾರದು. ದಕ್ಷಿಣ ಕನ್ನಡದ ಅನೇಕ ಕಡೆ ದೈವದ ಕೋಲದ ರೂಪಕಗಳು ಪ್ರದರ್ಶನಗೊಳ್ಳುತ್ತಿದೆ. ಇನ್ನು ಮುಂದೆ ಇದು ನಡೆಯಬಾರದು. ಹೀಗಾಗಿ ದಸರಾ ಮೆರವಣಿಗೆಯಲ್ಲಿ ಅವಕಾಶ ನೀಡದಂತೆ ದೇವಸ್ಥಾನ ಸಮಿತಿಗೆ ದೂರುಗಳು ಬಂದಿತ್ತು.
ಈ ಹಿನ್ನೆಲೆಯಲ್ಲಿ ಸಂಘಟಕರು ಈ ತೀರ್ಮಾನ ಕೈಗೊಂಡಿದ್ದಾರೆ. ಇದರೊಂದಿಗೆ ಡಿಜೆ ಸಂಗೀತ ಮತ್ತು ನೃತ್ಯ ನಮ್ಮ ಸಂಸ್ಕೃತಿಗೆ ಧಕ್ಕೆ ತರುತ್ತಿದೆ. ಈ ಬಗ್ಗೆಯೂ ನಿರ್ಣಯ ಕೈಗೊಳ್ಳುವುದಾಗಿ ಕೋಶಾಧಿಕಾರಿ ಆರ್. ಪದ್ಮರಾಜ್ ತಿಳಿಸಿದ್ದಾರೆ.