
ಐದು ಕೋಟಿ ವಂಚನೆ ಪ್ರಕರಣದಲ್ಲಿ ಚೈತ್ರಾ ಕುಂದಾಪುರ, ಇತರ ಆರೋಪಿಗಳಿಗೆ 10 ದಿನಗಳ ನ್ಯಾಯಾಂಗ ಬಂಧನ – ಕೋರ್ಟ್ ಕಟಕಟೆಯಲ್ಲಿ ಗೋಗರೆದು ಕಣ್ಣಿರು ಸುರಿಸಿದ “ಕಾಳಿಕಾ ಛಾಯೆ”…!!
- ಕರಾವಳಿ
- September 13, 2023
- No Comment
- 195
ನ್ಯೂಸ್ ಆ್ಯರೋ : ಬಿಜೆಪಿಯ ವಿಧಾನಸಭಾ ಟಿಕೆಟ್ ಕೊಡಿಸುವುದಾಗಿ ಬೆಂಗಳೂರಿನ ಉದ್ಯಮಿಗೆ 5 ಕೋಟಿ ರೂ. ಹಣವನ್ನು ಪಡೆದು ವಂಚನೆ ಮಾಡಿದ ಚೈತ್ರಾ ಕುಂದಾಪುರ ಸೇರಿದಂತೆ ಐವರನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಾಗಿತ್ತು. ಈ ವೇಳೆ ನ್ಯಾಯಾಧೀಶರ ಮುಂದೆ ಉಡುಪಿಯಲ್ಲಿ ಪೊಲೀಸರು ನನ್ನನ್ನು ಹಿಡಿದು ಎಳೆದಾಡಿ ನೋವು ಮಾಡಿದ್ದಾರೆ ಎಂದು ಚೈತ್ರಾ ಗಳಗಳನೇ ಕಣ್ಣೀರಿಟ್ಟಿದ್ದಾರೆ.
ಕಳೆದ ರಾತ್ರಿ ಉಡುಪಿಯ ಚೈತ್ರಾ ಆಪ್ತೆಯ ಮನೆಯಿಂದ ಬಂಧಿಸಿದ ಬೆಂಗಳೂರಿನ ಸಿಸಿಬಿ ಪೋಲಿಸರು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಚೈತ್ರಾ ಕುಂದಾಪುರ ಅವರನ್ನು ವಿಚಾರಣೆ ಮಾಡಿದಾಗ ಕೋರ್ಟ್ ಕಟಕಟೆಯಲ್ಲಿ ನಿಂತು ಪೊಲೀಸರು ನನ್ನನ್ನು ಎಳೆದಾಡಿ ನೋವುಂಟು ಮಾಡಿದ್ದಾರೆ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟಿದ್ದಾರೆ.
ಉಡುಪಿ ಪೊಲೀಸರಿಂದ ತೊಂದರೆ ಆಗಿದೆ ಎಂದು ಚೈತ್ರಾ ಹೇಳಿದ್ದಾರಾದರೂ ಈ ಬಗ್ಗೆ ಪೊಲೀಸರನ್ನು ವಿಚಾರಿಸಿದಾಗ ಆರೋಪಿ ಹೇಳುವ ರೀತಿ ಯಾವುದೇ ತೊಂದರೆ ಕೊಟ್ಟಿಲ್ಲ ಎಂದು ಉಡುಪಿ ಠಾಣೆಯ ಎಸಿಪಿ ರೀನಾ ಸುವರ್ಣ ಹೇಳಿದ್ದಾರೆ. ಇನ್ನು ಬಂಧನದ ಬಗ್ಗೆ ಎಲ್ಲಾ ವಿಡಿಯೋ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಜೊತೆಗೆ, ಮೆಡಿಕಲ್ ರಿಪೋರ್ಟ್ ಕೂಡ ಮಾಡಿಸಲಾಗಿದೆ ಎಂದು ಎಸಿಪಿ ರೀನಾ ಸುವರ್ಣ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.
ಉಡುಪಿಯಲ್ಲಿ ನನ್ನನ್ನು ವಶಕ್ಕೆ ಪಡೆದ ಪೊಲೀಸರು ನಮ್ಮ ಮನೆಯವರಿಗೆ ಹಾಗೂ ಕುಟುಂಬ ಸದಸ್ಯರಿಗೆ ಯಾವುದೇ ಮಾಹಿತಿ ನೀಡಿಲ್ಲ. ನಾನು ಪೊಲೀಸರಿಗೆ ಕುಟುಂಬ ಸದಸ್ಯರ ಪೋನ್ ನಂಬರ್ ಕೊಟ್ಟರೂ ಕಾಲ್ ಮಾಡಿಲ್ಲ. ಉಡುಪಿ ಪೊಲೀಸರು ತೊಂದರೆ ಕೊಟ್ಟಿದ್ದಾರೆ. ಆದರೆ, ನನ್ನನ್ನು ಬೆಂಗಳೂರಿಗೆ ಕರೆತಂದ ನಂತರ, ಬೆಂಗಳೂರು ಪೊಲೀಸರು ಯಾವುದೇ ತೊಂದರೆ ಕೊಟ್ಟಿಲ್ಲ. ಜೊತೆಗೆ, ನನ್ನ ಮೇಲೆ ಯಾರು ದೂರು ಕೊಟ್ಟಿದ್ದಾರೆ? ದೂರಿವ ವಿವರವೇನು ಎಂಬುದರ ಬಗ್ಗೆಯೂ ಮಾಹಿತಿಯನ್ನು ನೀಡಿಲ್ಲ. ಪೊಲೀಸರು ನನ್ನನ್ನು ವಶಕ್ಕೆ ಪಡೆದ ನಂತರ ತಾಯಿಯೊಂದಿಗೆ ಮಾತನಾಡಲು ಕೂಡ ಅವಕಾಶ ನೀಡಿಲ್ಲ ಎಂದು ಚೈತ್ರಾ ಕಣ್ಣೀರು ಸುರಿಸಿದ್ದಾರೆ.
ಕೋರ್ಟ್ನಲ್ಲಿ ನ್ಯಾಯಾಧೀಶರ ಮುಂದೆ ಚೈತ್ರಾ ಕುಂದಾಪುರ ಎಷ್ಟೇ ಕಣ್ಣೀರು ಹಾಕಿದರೂ, ದೊಡ್ಡ ಮಟ್ಟದಲ್ಲಿ ವಂಚನೆ ಮಾಡಿರುವ ಆರೋಪವಿರುವ ಹಿನ್ನೆಲೆಯಲ್ಲಿ ಚೈತ್ರಾ ಸೇರಿದಂತೆ 6 ಮಂದಿ ಆರೋಪಿಯನ್ನು 14 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡುವಂತೆ ಸಿಸಿಬಿ ಅಧಿಕಾರಿಗಳು ಮನವಿ ಮಾಡಿದರು. ಈ ಬಗ್ಗೆ ವಿಚಾರಣೆ ಮಾಡಿದ ನ್ಯಾಯಾಲಯವು ಸಿಸಿಬಿ ಪೊಲೀಸರ ಮನವಿ ಮೇರೆಗೆ 10 ದಿನಗಳ ಕಾಲ (ಸೆ.23ರವರೆಗೆ) ಬಂಧಿತವಾದ ಎಲ್ಲ ಆರೋಪಿಗಳನ್ನು ಪೊಲೀಸರ ವಶಕ್ಕೆ ಪಡೆಯುವಂತೆ ಆದೇಶ ಹೊರಡಿಸಿದೆ.
ಸದ್ಯ ಈ ಪ್ರಕರಣದಲ್ಲಿ ಚೈತ್ರಾ ಕುಂದಾಪುರ, ರಮೇಶ್, ಧನರಾಜ್, ಪ್ರಜ್ವಲ್ ಮತ್ತು ಶ್ರೀಕಾಂತ್ ಎಂಬವರ ಬಂಧನವಾಗಿದ್ದು, ಕಸ್ಟಡಿಯ ತನಿಖೆಯ ಬಳಿಕ ಪ್ರಕರಣದ ಸತ್ಯಾಸತ್ಯತೆ ಹೊರಬರಲಿದೆ. ಈ ಪ್ರಕರಣದಲ್ಲಿ ಗುರುತಿಸಿಕೊಂಡಿರುವ ಹಾಲಶ್ರೀ ಸ್ವಾಮೀಜಿ ಚೈತ್ರಾ ಬಂಧನವಾಗುತ್ತಲೇ ಪರಾರಿಯಾಗಿದ್ದು, ಆತನ ಪತ್ತೆಗೆ ಬಲೆ ಬೀಸಲಾಗಿದೆ.