ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಲು ಸಾಲು ಬೆಕ್ಕುಗಳ ಮಾರಣಹೋಮ – ದಿಢೀರ್ ಸಾವಿಗೆ ಕಾರಣವೇನು? ಪರಿಹಾರ ಹೇಗೆ?
- ಕರಾವಳಿ
- August 12, 2023
- No Comment
- 156
ನ್ಯೂಸ್ ಆ್ಯರೋ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಪ್ರತಿ ನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಬೆಕ್ಕುಗಳು ಸಾಯುತ್ತಿವೆ. ಫೆಲೈನ್ ಪ್ಲಾನ್ಲ್ಯುಕೋಪೆನಿಯಾ ವೈರಸ್ ದಾಳಿಯಿಂದ ಮಂಗಳೂರು, ಕಡಬ ಸೇರಿದಂತೆ ವಿವಿಧೆಡೆಗಳ ಬೆಕ್ಕುಗಳು ಸಾಯುತ್ತಿವೆ ಎಂದು ಮೂಲಗಳು ತಿಳಿಸಿವೆ.
ಏನಿದು ಕಾಯಿಲೆ?
ಈ ವೈರಸ್ ಸೋಂಕು ಬೆಕ್ಕುಗಳ ದೇಹದಲ್ಲಿ ಬಿಳಿ ರಕ್ತ ಕಣಗಳ ಇಳಿಕೆಗೆ ಕಾರಣವಾಗುತ್ತದೆ. ಬೆಕ್ಕುಗಳ ಪರಸ್ಪರ ಸಂಪರ್ಕದಿಂದ ಇದು ಹರಡುತ್ತದೆ. ವ್ಯಾಕ್ಸಿನೇಷನ್ ಮಾತ್ರವೇ ಇದಕ್ಕಿರುವ ಪರಿಹಾರ ಎಂದು ತಜ್ಞರು ಹೇಳುತ್ತಾರೆ. ಇದು ಬೆಕ್ಕಿಗೆ ಹೊರತು ಪಡಿಸಿ ಇತರ ಪ್ರಾಣಿ, ಮನುಷ್ಯರಿಗೆ ಹರಡುವುದಿಲ್ಲ. ಆದರೂ ಮುನ್ನೆಚ್ಚರಿಕೆ ವಹಿಸಬೇಕು ಎಂದು ಎಚ್ಚರಿಸಿದ್ದಾರೆ.
ಲಕ್ಷಣಗಳೇನು?
ಸೋಂಕು ಬಾಧಿಸಿದ ಬೆಕ್ಕಿನಲ್ಲಿ ಹೆಚ್ಚಿನ ಜ್ವರ, ವಾಂತಿ, ಅತಿಸಾರ, ಹಸಿವಿನ ಕೊರತೆ, ನಿರ್ಜಲೀಕರಣದ ಲಕ್ಷಣ ಕಾಣಿಸಿಕೊಳ್ಳುತ್ತದೆ. ಕೊನೆಗೆ ಸಾಯುತ್ತದೆ. ಹೀಗಾಗಿ ಸೋಂಕಿಗೆ ತುತ್ತಾಗದಂತೆ ಬೆಕ್ಕುಗಳಿಗೆ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ವೈದ್ಯರು ಸೂಚಿಸಿದ್ದಾರೆ.
ನಡವಳಿಕೆ ಗಮನಿಸಿ
ಬೆಕ್ಕುಗಳಿಗೆ ಸೋಂಕು ತಗುಲಿದೆಯೇ ಎನ್ನುವುದನ್ನು ತಿಳಿದುಕೊಳ್ಳಲು ಅವುಗಳ ನಡವಳಿಕೆ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆ ಗಮನಿಸಬೇಕು. ಬೆಕ್ಕು ರೋಗಕ್ಕೆ ತುತ್ತಾದ ಬಳಿಕ ಚಿಕಿತ್ಸೆಗೆ ಕರೆ ತರುವುದಕ್ಕಿಂತ ಮೊದಲೇ ಲಸಿಕೆ ಹಾಕಿಸಬೇಕು. ಟ್ರೈ ಕ್ಯಾಟ್, ಫೆಲಿಜೆನ್ ಅಥವಾ ಫೆಲೋಸೆಲ್ ಲಸಿಕೆಯನ್ನು ಬೆಕ್ಕಿಗೆ ನೀಡಬಹುದು. ನೀವೇ ನೀಡುವ ಬದಲು ಪಶು ವೈದ್ಯರಲ್ಲಿ ಕರೆದುಕೊಂಡು ಹೋಗಬೇಕು ಎಂದು ತಜ್ಞರು ಸೂಚಿಸಿದ್ದಾರೆ.