Mangalore : ಜೆಸಿಬಿ ಬಳಸಿ ಎಟಿಎಂ ಮೆಷಿನ್ ಕಳ್ಳತನ ಯತ್ನ ಪ್ರಕರಣ – ನಾಲ್ವರು ಖತರ್ನಾಕ್ ಆರೋಪಿಗಳು ಅಂದರ್ : ಕಳ್ಳತನ ಯತ್ನ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ
- ಕರಾವಳಿ
- August 21, 2023
- No Comment
- 231
ನ್ಯೂಸ್ ಆ್ಯರೋ : ಸುರತ್ಕಲ್ ಪೇಟೆಯಲ್ಲಿ ಜೆಸಿಬಿ ಬಳಸಿ ಎಟಿಎಂ ಮೆಷಿನ್ ಕಳವು ಮಾಡಲು ಯತ್ನಿಸಿದ್ದ ಅಂತರ್ ಜಿಲ್ಲಾ ನಾಲ್ವರು ಕಳ್ಳರನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದು, ಅವರಿಂದ 15.50 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಇನ್ನೂ ತನಿಖೆ ವೇಳೆ ಈ ಹಿಂದೆಯೂ ಜೆಸಿಬಿ ಬಳಸಿ ಎಟಿಎಂ ದರೋಡೆ ಮಾಡಲು ಯತ್ನಿಸಿರುವುದಾಗಿ ಬೆಳಕಿಗೆ ಬಂದಿದೆ.
ಬಂಧಿತರನ್ನು ಶಿವಮೊಗ್ಗ ಜಿಲ್ಲೆಯ ಬೇಗೂರು ಗ್ರಾಮದ ದೇವರಾಜ್(24), ಭರತ್ ಎಚ್(20), ನಾಗರಾಜ ನಾಯ್ಕ(21) ಎಂದು ಗುರುತಿಸಲಾಗಿದೆ. ಅದಲ್ಲದೆ ಕೃತ್ಯಕ್ಕೆ ಧನರಾಜ್ ನಾಯ್ಕ(22) ಧನ ಸಹಾಯ ಮಾಡಿದ್ದು ಆತನನ್ನು ಬಂಧಿಸಲಾಗಿದೆ.
ಪ್ರಕರಣದ ಹಿನ್ನೆಲೆ:
ಸುರತ್ಕಲ್ ಪೇಟೆಯಲ್ಲಿ ಆಗಸ್ಟ್ 4ರಂದು ಮುಂಜಾನೆ ಜೆಸಿಬಿ ಬಳಸಿ ಎಟಿಎಂ ಕಳವಿಗೆ ಯತ್ನಿಸಿದ ಘಟನೆ ನಡೆದಿದ್ದು ಬ್ಯಾಂಕ್ನ ಸೈರನ್ ಮೊಳಗಿದ ಕಾರಣ ಅಲ್ಲಿದ್ದ ಖದೀಮರು ಪರಾರಿಯಾಗಿದ್ದಾರೆ. ಈ ಬಗ್ಗೆ ದಿ ಸೌತ್ ಇಂಡಿಯನ್ ಬ್ಯಾಂಕ್ನ ಶಾಖಾ ಮ್ಯಾನೇಜರ್ ರೋಹಿತ್ ಎಂಬವರು ಸುರತ್ಕಲ್ ಠಾಣೆಯಲ್ಲಿ ದೂರು ನೀಡಿದ್ದರು.
ಅದರ ಅನುಸಾರ ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್, ಡಿಸಿಪಿಗಳಾದ ಆಂಶು ಕುಮಾರ್, ದಿನೇಶ್ ಕುಮಾರ್ ಹಾಗೂ ಎಸಿಪಿ ಮನೋಜ್ ಕುಮಾರ್ ನಾಯ್ಕ ಇವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ಸುರತ್ಕಲ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಮಹೇಶ್ ಪ್ರಸಾದ್ರವರ ನೇತೃತ್ವದಲ್ಲಿ ಸುರತ್ಕಲ್ ಪೊಲೀಸ್ ನಿರೀಕ್ಷಕರಾದ ರಘು, ನಾಯ್ಡ್, ಅರುಣ್ ಕುಮಾರ್ ಡಿ ಮತ್ತು ಎ.ಎಸ್.ಐ ರಾಧಾಕೃಷ್ಣ, ಹೆಚ್.ಸಿ: ಉಮೇಶ್ ಕೊಟ್ಟಾರಿ, ಹಚ್,ಸಿ ಅಣ್ಣಪ್ಪ ಪಂಜ್ಞೆ, ಪಿ.ಸಿ ಕಾರ್ತಿಕ್ ಕುಲಾಲ್, ಪಿ.ಸಿ ಸುನಿಲ್ ಕುಸುನಾಳ್ ಅವರ ತಂಡ ಇದೀಗ ಪ್ರಕರಣವನ್ನು ಭೇದಿಸಿ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಪತ್ತೆ ಕಾರ್ಯ ಆರಂಭಿಸಿದಾಗ ಎಟಿಎಂ ದರೋಡೆಗೆ ಬಳಸಿದ ಜೆಸಿಬಿಯನ್ನು ಕೆಐಒಸಿಎಲ್ ಕಡೆಯಿಂದ ಜೋಕಟ್ಟೆ ಕಡೆಗೆ ಹೋಗುವ ರಸ್ತೆಯಲ್ಲಿ ಪತ್ತೆ ಮಾಡಲಾಗಿದೆ. ನಂತರ ಆರೋಪಿಗಳನ್ನು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಬಂಧಿಸಲಾಗಿದೆ.
ಈ ಪ್ರಕರಣ ಸಂಬಂಧ ನಾಲ್ಕು ಜನ ಆರೋಪಿಗಳನ್ನು ಬಂಧಿಸಿದ್ದು, ಅವರಿಂದ ಕೃತ್ಯಕ್ಕೆ ಬಳಸಿದ ಹೀರೋ ಸೈಂಡರ್ ಬೈಕ್ನ್ನು ಹಾಗೂ 2 ಆಂಡ್ರಾಯ್ಡ್ ಮೊಬೈಲ್ಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳು ಪೂರ್ವ ಅಪರಾಧ ಚರಿತ್ರೆಯುಳ್ಳವರಾಗಿದ್ದು, ಆರೋಪಿತ ದೇವರಾಜ್ ನಾಯ್ಕ ಹಾಗೂ ನಾಗಾರಜ್ ಮೇಲೆ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದೆ. ಅದಲ್ಲದೆ ಆರೋಪಿಗಳನ್ನು ಕೂಲಂಕುಷವಾಗಿ ವಿಚಾರಿಸಿದಾಗ ಶಿವಮೊಗ್ಗ ಜಿಲ್ಲೆಯ ವಿನೋಭಾ ನಗರದಲ್ಲಿರುವ ಆಕ್ಸಿಸ್ ಬ್ಯಾಂಕಿನ ಎಟಿಎಂ ಅನ್ನು ಜೆಸಿಬಿ ಮೂಲಕ ಒಡೆಯಲು ಯತ್ನಿಸಿರುವುದು ಹಾಗೂ ಸುರತ್ಕಲ್ನಲ್ಲಿ ಎಟಿಎಂ ಒಡೆಯಲು ಜೆಸಿಬಿಯನ್ನು ಕಳವು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.
ಸದ್ಯ ಆರೋಪಿಗಳನ್ನು ಆಗಸ್ಟ್ 16ರಂದು ಒಂದನೇ ಹೆಚ್ಚುವರಿ ಸಿ.ಜೆ.ಎಮ್. ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಪ್ರಕರಣದ ಪ್ರಮುಖ ಆರೋಪಿಗಳಾದ ದೇವರಾಜ್, ಭರತ್ ಎಚ್, ನಾಗರಾಜ ಎಂಬವರನ್ನು ಪೊಲೀಸ್ ಕಸ್ಟಡಿಗೆ ಹಾಗೂ ಧನರಾಜ್ ನಾಯ್ಕ್ ಎಂಬಾತನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.