‘ಆದಿಪುರುಷ್’ ಸಿನಿಮಾ ನೋಡಿ ಟ್ರೋಲ್ ಮಾಡಿದ ವೀರೇಂದ್ರ ಸೆಹ್ವಾಗ್ – ಡ್ಯಾಶಿಂಗ್ ಓಪನರ್ ಗೆ ಬಾಹುಬಲಿಯ ಕಟ್ಟಪ್ಪ ನೆನಪಾಗಿದ್ದೇಕೆ?
- ಮನರಂಜನೆ
- June 26, 2023
- No Comment
- 112
ನ್ಯೂಸ್ ಆ್ಯರೋ : ಅದು ಕೆಲವು ವರ್ಷಗಳ ಹಿಂದಿನ ಮಾತು. ಭಾರತದ ಸಿನಿ ಇತಿಹಾಸದಲ್ಲಿ ಚರಿತ್ರೆ ಸೃಷ್ಟಿಸಿದ್ದ ‘ಬಾಹುಬಲಿ’ ಚಿತ್ರ ತೆರೆಕಂಡ ಸಮಯ. ಕಾರಣ ತೋರಿಸದೆ ಬಾಹುಬಲಿಯನ್ನು ಕಟ್ಟಪ್ಪ ಕೊಲ್ಲುವುದರೊಂದಿಗೆ ಚಿತ್ರ ಮುಕ್ತಾಯವಾಗುತ್ತದೆ. ಬಳಿಕ ಎರಡನೇ ಭಾಗ ತೆರೆ ಕಾಣುವ ಮೊದಲು ಎಲ್ಲರಿಗೂ ಅದೇ ಕುತೂಹಲ ಕಾಡುತ್ತಿತ್ತು. ಎಲ್ಲರೂ ಕಟ್ಟಪ್ಪ ಬಾಹುಬಲಿಯನ್ನು ಯಾಕೆ ಕೊಂದ ಎಂಬುದರ ಬಗ್ಗೆ ತಲೆ ಕೆಡಿಸಿಕೊಂಡಿದ್ದರು. ಇದೀಗ ಈ ವಿಚಾರವನ್ನು ಪ್ರಸ್ತಾವಿಸಿ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಪ್ರಭಾಸ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಟ್ರೋಲ್ ಮಾಡಿದ ಸೆಹ್ವಾಗ್
ಓಂ ರಾವತ್ ನಿರ್ದೇಶನದ, ಪ್ರಭಾಸ್ ನಟನೆಯ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ‘ಆದಿಪುರುಷ್’ ತೆರೆ ಕಂಡಿದೆ. ‘ರಾಮಾಯಣ’ ಆಧರಿಸಿದ ಈ ಚಿತ್ರದಲ್ಲಿನ ಪಾತ್ರಗಳ ಚಿತ್ರಣ, ಸಂಭಾಷಣೆ, ಕಳಪೆ ವಿ.ಎಫ್.ಎಕ್ಸ್. ಟ್ರೋಲ್ ಗೆ ಆಹಾರವಾಗಿದೆ. ನೆಗೆಟಿವ್ ಕಮೆಂಟ್ ಗಳ ಜೊತೆಗೆ ಪ್ರತಿ ದಿನ ಹೊಸ ಹೊಸ ಟ್ರೋಲ್ ಹುಟ್ಟಿಕೊಳ್ಳುತ್ತಿದೆ. ಇದೀಗ ವೀರೇಂದ್ರ ಸೆಹ್ವಾಗ್ ಕೂಡ ಚಿತ್ರವನ್ನು ಟ್ರೋಲ್ ಮಾಡಿದ್ದಾರೆ.
ಸೆಹ್ವಾಗ್ ಹೇಳಿದ್ದೇನು?
‘ಆದಿಪುರುಷ್’ ಸಿನಿಮಾ ನೋಡಿದ ಬಳಿಕ ಕಟ್ಟಪ್ಪ ಯಾಕೆ ಬಾಹುಬಲಿಯನ್ನು ಕೊಂದಿದ್ದಾನೆಂದು ಗೊತ್ತಾಯಿತು ಎಂದು ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ. ಆ ಮೂಲಕ ಚಿತ್ರವನ್ನು ಪರೋಕ್ಷವಾಗಿ ಟೀಕಿಸಿದ್ದಾರೆ. ಈ ಟ್ವೀಟ್ ವೈರಲ್ ಆಗಿದ್ದು ಹಲವರು ಮೆಚ್ಚುಗೆ ಸೂಚಿಸಿದರೆ ಪ್ರಭಾಸ್ ಅಭಿಮಾನಿಗಳು ಕೆಂಡ ಕಾರಿದ್ದಾರೆ.
ಅಭಿಮಾನಿಗಳು ಕೆಂಡಾಮಂಡಲ
ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಪ್ರಭಾಸ್ ಅಭಿಮಾನಿಗಳು ಸೆಹ್ವಾಗ್ ಅವರನ್ನು ಟೀಕಿಸಿದ್ದಾರೆ. ಈ ಹಿಂದೆ ಧೋನಿ ನಿಮ್ಮನ್ನು ಏಕೆ ಪಂದ್ಯದಿಂದ ಹೊರಗಿಟ್ಟಿದ್ದರು ಎನ್ನುವುದು ಇಂದು ಅರ್ಥವಾಯಿತು ಎಂದು ಅವರದೇ ಶೈಲಿಯಲ್ಲಿ ಒಬ್ಬರು ಉತ್ತರ ಕೊಟ್ಟರೆ ಇನ್ನೊಬ್ಬರು ಕೆಲವು ಪಂದ್ಯಗಳಲ್ಲಿ ನೀವು ಡಕ್ ಔಟ್ ಆಗಿದ್ದೀರಿ. ಕೆಲವು ಪಂದ್ಯಗಳಲ್ಲಿ ಇತಿಹಾಸ ನಿರ್ಮಿಸಿದ್ದೀರಿ. ನಾವು ಕೂಡ ಡಾರ್ಲಿಂಗ್ ಪ್ರಭಾಸ್ ಕಮ್ ಬ್ಯಾಕ್ ಆಗುವುದನ್ನು ನೋಡಲು ಕಾಯುತ್ತಿದ್ದೇವೆ. ಒಂದು ದಿನ ಅವರು ಎದ್ದು ಬಂದರೆ ಇತಿಹಾಸ ನಿರ್ಮಾಣವಾಗುತ್ತದೆ ಎಂದಿದ್ದಾರೆ. ಹಲವರು ಪ್ರಭಾಸ್ ಅವರಿಗೆ ಅಗೌರವ ತೋರಬೇಡಿ ಎಂದು ಸಲಹೆ ನೀಡಿದ್ದಾರೆ.