
ಅಗ್ನಿಸಾಕ್ಷಿ ಖ್ಯಾತಿಯ ನಟ ಸಂಪತ್ ಜಯರಾಮ್ ಸಾವು ಪ್ರಕರಣ – ಸೊಸೆಯ ವರ್ತನೆ, ನಡತೆ ಸಂಶಯಾಸ್ಪದ : ತನಿಖೆಗೆ ಆಗ್ರಹಿಸಿದ ಸಂಪತ್ ತಂದೆ
- ಮನರಂಜನೆ
- September 8, 2023
- No Comment
- 53
ನ್ಯೂಸ್ ಆ್ಯರೋ : ಅಗ್ನಿಸಾಕ್ಷಿ ಧಾರವಾಹಿ ಖ್ಯಾತಿಯ ಕಿರುತೆರೆ ನಟ ಸಂಪತ್ ಜಯರಾಮ್ ಅವರ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಅವರ ತಂದೆ ಜಯರಾಮ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಪೊಲೀಸರಿಗೆ ದೂರು ನೀಡಿದ್ದಾರೆ.
ಅಲ್ಲದೆ, ಸಂಪತ್ ಪತ್ನಿ ಚೈತನ್ಯ ಭಾರದ್ವಾಜ್ ಮತ್ತು ಚೈತನ್ಯ ತಂಗಿ ತೇಜಸ್ವಿನಿ, ಅಮರೇಶ್, ಜಯಲಕ್ಷ್ಮಿ ಮೇಲೆ ಅನುಮಾನ ವ್ಯಕ್ತಪಡಿಸಿದ್ದು, ಕೂಲಂಕುಷವಾಗಿ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸುವಂತೆ ಕೋರಿದ್ದಾರೆ.
ಘಟನೆಯ ಹಿನ್ನೆಲೆ:
ಏಪ್ರಿಲ್ 23ರಂದು ಕಿರುತೆರೆ ನಟ ಸಂಪತ್ ಜಯರಾಮ್ ಅವರು ಅರಿಶಿನಕುಂಟೆಯಲ್ಲಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ನೆಲಮಂಗಲ ಟೌನ್ ಠಾಣೆಯಲ್ಲಿ ಯುಡಿಆರ್ ದಾಖಲು ಮಾಡಲಾಗಿತ್ತು.
ಕಿರುತೆರೆ ಮತ್ತು ಹಿರಿತೆರೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ ಸಂಪತ್ ಜಯರಾಮ್ ಅವರಿಗೆ ಸೂಕ್ತ ಅವಕಾಶ ಇಲ್ಲದೇ ಕಂಗಾಲಾಗಿದ್ದರು ಎನ್ನಲಾಗುತ್ತಿತ್ತು. ಒಂದು ವರ್ಷದ ಹಿಂದೆ ಮದುವೆ ಆಗಿದ್ದರು. ಇವರ ಸಾವಿಗೆ ನಟರೂ ಆಗಿರುವ ಸ್ನೇಹಿತ ರಾಜೇಶ್ ಧ್ರುವ ಸೇರಿದಂತೆ ಅನೇಕರು ಕಂಬನಿ ಮಿಡಿದಿದ್ದರು.
ಈ ಬಗ್ಗೆ ವಿಡಿಯೋ ಮಾಡಿದ್ದ ನಟ ರಾಜೇಶ ಧ್ರುವ, ಸಂಸಾರದಲ್ಲಿ ಸಣ್ಣ ಪುಟ್ಟ ಜಗಳ ಇದ್ದಿದ್ದೆ. ಆದರೆ ಹುಡುಗಾಟಿಕೆಯಲ್ಲಿ ಈ ಘಟನೆ ಆಗಿದೆ ಅಷ್ಟೇ. ಯಾರು ಕೂಡ ಇಲ್ಲಸಲ್ಲದ ಊಹಾಪೋಹ ಹರಡಬೇಡಿ. ಗಂಡ-ಹೆಂಡತಿ ನಡುವೆ ಚಿಕ್ಕ ಜಗಳ ಆಗಿದೆ. ನಾನು ಸಾಯುತ್ತೇನೆ ಎಂದು ಹೆದರಿಸಲು ಹೋಗಿ ಅದು ಲಾಕ್ ಆಗಿದೆ ಎಂದು ಹೇಳಿದ್ದರು.
ಇದೀಗ ಸಾವನ್ನಪ್ಪಿದ ನಾಲ್ಕು ತಿಂಗಳ ಬಳಿಕ ನಟ ಸಂಪತ್ ಜಯರಾಮ್ ಅವರ ತಂದೆ ಸೊಸೆ ಹಾಗೂ ಆಕೆಯ ಕುಟುಂಬದ ಮೇಲೆ ಅನುಮಾನ ವ್ಯಕ್ತಪಡಿಸಿ ಠಾಣೆ ಮೆಟ್ಟಿಲೇರಿದ್ದಾರೆ.
ದೂರಿನಲ್ಲಿ ನನ್ನ ಮಗನನ್ನು ಉದ್ದೇಶಪೂರ್ವಕವಾಗಿ ಚಿತ್ರಹಿಂಸೆ, ಮಾನಸಿಕ ಒತ್ತಡ, ಕಿರುಕುಳ ನೀಡಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದಿಸಿದ್ದಾರೆ. ಸಾವಿನ ನಂತರ ಸಂಪತ್ ಪತ್ನಿ ಚೈತನ್ಯ ಭಾರದ್ವಾಜ್ ಅವರ ಸಂಶಯಾಸ್ಪದ ವರ್ತನೆ ಮತ್ತು ನಡತೆ ಬಗ್ಗೆ ಅನುಮಾನ ವ್ಯಕ್ತವಾಗಿದೆ ಎಂದು ಜಯರಾಮ್ ಪೊಲೀಸರಿಗೆ ದೂರು ನೀಡಿದ್ದಾರೆ.
ಆತ್ಮಹತ್ಯೆ ಹಿಂದೆ ಸಂಪತ್ ಪತ್ನಿ ಚೈತನ್ಯ ಭಾರದ್ವಾಜ್ ಮತ್ತು ಚೈತನ್ಯ ತಂಗಿ ತೇಜಸ್ವಿನಿ, ಅಮರೇಶ್, ಜಯಲಕ್ಷ್ಮಿ ಅವರ ಮೇಲೆ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಕೂಲಂಕುಷವಾಗಿ ಮಗನ ಸಾವಿನ ಬಗ್ಗೆ ಪರಿಶೀಲನೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸಬೇಕೆಂದು ಜಯರಾಮ್ ದೂರಿನಲ್ಲಿ ಮನವಿ ಮಾಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸಂಪತ್ ಪತ್ನಿ ಚೈತನ್ಯ ಭಾರದ್ವಾಜ್ ಮತ್ತು ಚೈತನ್ಯ ತಂಗಿ ತೇಜಸ್ವಿನಿ, ಅಮರೇಶ್, ಜಯಲಕ್ಷ್ಮಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.