ಅಭಿಷೇಕ್ ಅವಿವಾ ಬೀಗರ ಔತಣಕೂಟಕ್ಕೆ ಭರ್ಜರಿ ಸಿದ್ಧತೆ – 15 ಎಕರೆ ಜಾಗದಲ್ಲಿ ಪೆಂಡಾಲ್, ಮೆನು ಹೇಗಿರಲಿದೆ?
- ಮನರಂಜನೆ
- June 13, 2023
- No Comment
- 630
ನ್ಯೂಸ್ ಆ್ಯರೋ : ರೆಬಲ್ ಸ್ಟಾರ್ ದಿ.ಅಂಬರೀಷ್ ಮತ್ತು ನಟಿ, ಸಂಸದೆ ಸುಮಲತಾ ಪುತ್ರ ಅಭಿಷೇಕ್ ಹಾಗೂ ಅವಿವಾ ಬಿದ್ದಪ್ಪ ಅವರ ವಿವಾಹ ಇತ್ತೀಚೆಗೆ ಅದ್ದೂರಿಯಾಗಿ ನಡೆದಿದೆ. ಚಿತ್ರರಂಗ, ರಾಜಕೀಯ, ವಿವಿಧ ಕ್ಷೇತ್ರಗಳ ಗಣ್ಯರು ಹಾಜರಾಗಿ ವಧು-ವರರನ್ನು ಹಾರೈಸಿದ್ದರು. ಇದೀಗ ಬೀಗರ ಔತಣಕೂಟಕ್ಕೆ ಸಿದ್ದತೆ ನಡೆದಿದೆ.
ಜೂ. 16ರಂದು ಬೀಗರ ಔತಣಕೂಟ ಆಯೋಜಿಸಲಾಗಿದೆ. ಸುಮಾರು 50 ಸಾವಿರ ಮಂದಿ ಈ ಸಮಾರಂಭಕ್ಕೆ ಹಾಜರಾಗುವ ನಿರೀಕ್ಷೆ ಇದೆ. ಮಂಡ್ಯದ ಮದ್ದೂರಿನ ಗೆಜ್ಜಲಗೆರೆ ಕಾಲನಿ ಬಳಿ ಕಾರ್ಯಕ್ರಮ ನಿಗದಿಯಾಗಿದೆ.
ಸುಮಾರು 15 ಎಕ್ರೆಯಲ್ಲಿ ಜರ್ಮನ್ ಟೆಂಟ್ ಹಾಕಿ ಊಟಕ್ಕೆ ಸಿದ್ದತೆ ನಡೆಸಲಾಗುತ್ತಿದೆ. ಬೆಳಗ್ಗೆ 11 ಗಂಟೆಯಿಂದಲೇ ಊಟದ ವಿತರಣೆ ಆರಂಭವಾಗಲಿದೆ. ಅಂಬರೀಷ್ ಕುಟುಂಬದ ಆಪ್ತ, ನಿರ್ಮಾಪಕ ರಾಕಲೈನ್ ವೆಂಕಟೇಶ್, ಅಂಬರೀಷ್ ಸಹೋದರನ ಮಗ ಮದನ್, ಸುಮಲತಾ ಬೆಂಬಲಿಗರು ಸಿದ್ಧತೆ ಪರಿಶೀಲನೆ ನಡೆಸಿದರು.
ಹೇಗಿರಲಿದೆ ಮೆನು?
ಅಂಬರೀಷ್ ಅವರಿಗೆ ಪ್ರಿಯವಾದ ಮಂಡ್ಯ ಶೈಲಿಯ ಬಾಡೂಟದ ವ್ಯವಸ್ಥೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ. ಮುದ್ದೆ, ಬೋಟಿ ಗೊಜ್ಜು, ಮಟನ್, ಚಿಕನ್, ಮೊಟ್ಟೆ, ಗೀ ರೈಸ್, ಅನ್ನ, ತಿಳಿ ಸಾಂಬಾರ್, ಮಜ್ಜಿಗೆ, ಬೀಡಾ, ಐಸ್ ಕ್ರೀಂ ಇರಲಿದೆ ಎನ್ನಲಾಗಿದೆ. ಎಷ್ಟೇ ಜನ ಬಂದರೂ ಊಟ ಬಡಿಸಲಾಗುವುದು ಎಂದು ರಾಕ್ಲೈನ್ ವೆಂಕಟೇಶ್ ಹೇಳಿದ್ದಾರೆ.