ವಿಚ್ಛೇದನ ಪ್ರಕ್ರಿಯೆಯಿಂದ ಖಿನ್ನತೆ: ಆತ್ಮಹತ್ಯೆಗೆ ಶರಣಾದ ಪ್ರಸಿದ್ದ ದೆಹಲಿ ಬೇಕರಿ ಮಾಲೀಕ

Delhi Cafe Owner
Spread the love

ನ್ಯೂಸ್ ಆ್ಯರೋ: ಪ್ರಸಿದ್ಧ ದೆಹಲಿ ಬೇಕರಿ ಮಾಲೀಕ ಪುನೀತ್ ಖುರಾನಾ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಪತ್ನಿಯಿಂದ ದೂರವಾಗಿದ್ದ ಅವರು ಮಂಗಳವಾರ ಸಂಜೆ ಸಾವಿಗೆ ಶರಣಾಗಿದ್ದಾರೆ. ಪತ್ನಿಯೊಂದಿಗಿನ ವಿಚ್ಛೇದನ ಪ್ರಕ್ರಿಯೆಯೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.

Delhi Cafe Owner

ದೆಹಲಿಯ ಪ್ರಸಿದ್ಧ ಕೆಫೆಯ ಸಹ-ಸಂಸ್ಥಾಪಕ ಪುನೀತ್ ಖುರಾನಾ ಮಂಗಳವಾರ ಸಂಜೆ ಮಾಡೆಲ್ ಟೌನ್‌ನ ಕಲ್ಯಾಣ್ ವಿಹಾರ್ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಕೆಳಗಿಳಿಸಿ ಮರಣೋತ್ತರ ಪರೀಕ್ಷೆಗಾಗಿ ಏರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.

ಕುಟುಂಬ ಸದಸ್ಯರ ಪ್ರಕಾರ, 38 ವರ್ಷದ ಉದ್ಯಮಿ ಪುನೀತ್ ತಮ್ಮ ವಿಚ್ಛೇದನ ಪ್ರಕ್ರಿಯೆಯಿಂದ ತೀವ್ರವಾಗಿ ಖಿನ್ನತೆಗೆ ಒಳಗಾಗಿದ್ದರು. ಆತ್ಮಹತ್ಯೆಗೆ ಕೆಲ ಸಮಯದ ಮೊದಲು, ತಮ್ಮ ಪತ್ನಿಯೊಂದಿಗೆ ಜಂಟಿಯಾಗಿ ಆರಂಭಿಸಿದ ಬೇಕರಿ ವ್ಯವಹಾರದ ಬಗ್ಗೆ ಫೋನ್‌ನಲ್ಲಿ ಮಾತನಾಡಿದ್ದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

Delhi Cafe

ಫೋನ್‌ನಲ್ಲಿ ಇಬ್ಬರು ಕೂಡ ಈ ಸಂದರ್ಭದಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ. ಕಾನೂನುಬದ್ಧವಾಗಿ ನಡೆಯುತ್ತಿದ್ದ ವಿಚ್ಛೇದನ ಪ್ರಕ್ರಿಯೆ ಮತ್ತು ವ್ಯವಹಾರದ ಬಗ್ಗೆ ವಾಗ್ವಾದ ನಡೆದಿದೆ ಎನ್ನಲಾಗಿದೆ. ಈಗಾಗಲೇ ಒತ್ತಡದಲ್ಲಿದ್ದ ಪುನೀತ್, ಪತ್ನಿಯೊಂದಿಗಿನ ವಾಗ್ವಾದದ ನಂತರ ಮತ್ತಷ್ಟು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬ ತಿಳಿಸಿದೆ.

ಪೊಲೀಸರು ಪುನೀತ್ ಅವರ ಫೋನ್ ವಶಪಡಿಸಿಕೊಂಡಿದ್ದು, ಅವರ ಸಾವಿಗೆ ಕಾರಣವೇನು ಎಂಬುದನ್ನು ತನಿಖೆ ನಡೆಸುತ್ತಿದ್ದಾರೆ. ಪುನೀತ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಅವರ ಪತ್ನಿಯನ್ನೂ ವಿಚಾರಣೆ ನಡೆಸಲು ಮುಂದಾಗಿದ್ದು, ಪೂರ್ಣ ವಿವರಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು ಎಂದು ದೆಹಲಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

2016 ರಲ್ಲಿ ಇವರಿಬ್ಬರ ವಿವಾಹವಾಗಿತ್ತು. ದೆಹಲಿ ಬೇಕರಿ ಮಾಲಿಕತ್ವದ ಜೊತೆಗೆ ಫಾರ್ ಗಾಡ್ಸ್ ಕೇಕ್ ಬೇಕರಿ ಮತ್ತು ವುಡ್‌ಬಾಕ್ಸ್ ಕೆಫೆ ಎಂಬ ಇನ್ನೊಂದು ಉಪಾಹಾರ ಗೃಹದ ಸಹ-ಮಾಲೀಕತ್ವವನ್ನು ಹೊಂದಿದ್ದರು. ಕೆಲ ಸಮಯದ ಹಿಂದೆ ವುಡ್‌ಬಾಕ್ಸ್ ಕೆಫೆಯನ್ನು ಮುಚ್ಚಲಾಗಿದೆ ಎಂದು ವರದಿ ತಿಳಿಸಿದೆ.

Leave a Comment

Leave a Reply

Your email address will not be published. Required fields are marked *

error: Content is protected !!