ದೇವರ ಮೇಲಿನ ಅಂಧ ಭಕ್ತಿಗೆ ತಲೆ ಕತ್ತರಿಸಿಕೊಂಡ ದಂಪತಿ – ಭಯಾನಕ ಘಟನೆ ನಡೆದದ್ದೆಲ್ಲಿ ಗೊತ್ತಾ…!?
- ವೈರಲ್ ನ್ಯೂಸ್
- April 17, 2023
- No Comment
- 142
ನ್ಯೂಸ್ ಆ್ಯರೋ : ಭಾರತದಲ್ಲಿ ದೇವರ ನೆಪದಲ್ಲಿ ಮೂಢನಂಬಿಕೆ ಇನ್ನೂ ಕಡಿಮೆಯಾಗಿಲ್ಲ ಅನ್ನೋ ಮಾತು ಆಗಾಗ ಕೇಳಿಬರುತ್ತಲೇ ಇರುತ್ತದೆ. ಈ ಮಧ್ಯೆ ದೇವರ ಮೇಲಿನ ಭಕ್ತಿಗೆ ದಂಪತಿಗಳಿಬ್ಬರು ತಮ್ಮ ತಲೆಯನ್ನು ಕತ್ತರಿಸಿ ದೇವರಿಗೆ ಅರ್ಪಿಸಿದ ಘಟನೆ ಗುಜರಾತ್ನ ರಾಜ್ಕೋಟ್ನಲ್ಲಿ ನಡೆದಿದೆ. ಹೀಗೆ ತಲೆಯನ್ನು ಕತ್ತರಿಸಿಕೊಳ್ಳಲು ಸ್ವತಃ ದಂಪತಿಯೇ ಮನೆಯಲ್ಲಿ ಶಿರಚ್ಛೇದದ ಯಂತ್ರವನ್ನು ಕೂಡಾ ರೂಪಿಸಿಕೊಂಡಿದ್ದರು ಎಂಬ ವಿಚಾರ ಕೋಲಾಹಲವನ್ನೇ ಎಬ್ಬಿಸಿದೆ.
ದೇಹವನ್ನು ದೇವರಿಗೆ ಅರ್ಪಿಸಿಕೊಂಡ ದಂಪತಿಯನ್ನು ಹೇಮುಭಾಯ್ ಮಕ್ವಾನಾ (38) ಮತ್ತು ಹನ್ಸಾಬೆನ್ (35) ಎಂದು ಗುರುತಿಸಲಾಗಿದೆ. ಘಟನಾ ಸ್ಥಳದಲ್ಲಿ ಮರಣ ಪತ್ರವೊಂದು ಸಿಕ್ಕಿದ್ದು, ಅದರಲ್ಲಿ ತಮ್ಮ ವೃದ್ಧ ತಂದೆ ತಾಯಿ ಮತ್ತು ಇಬ್ಬರು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಕುಟುಂಬದ ಸದಸ್ಯರನ್ನು ದಂಪತಿ ಕೋರಿದ್ದಾರೆ.
ಘಟನೆಯ ವಿವರ :
ರಾಜ್ಕೋಟ್ ಜಿಲ್ಲೆಯ ವಿಂಚಿಯ್ಯಾ ಗ್ರಾಮದ ಹೇಮುಭಾಯ್ ಮತ್ತು ಹನ್ಸಾಬೆನ್ ಕಳೆದೊಂದು ವರ್ಷದಿಂದ ತಮ್ಮ ಗುಡಿಸಿಲಿನಲ್ಲೇ ಭಾರೀ ಪ್ರಮಾಣದಲ್ಲಿ ದೇವರ ಪೂಜೆ ಮಾಡುತ್ತಾ ಕಾಲ ಕಳೆಯುತ್ತಿದ್ದರು. ಈ ಪ್ರಾರ್ಥನೆಯ ಮುಂದುವರೆದ ಭಾಗವಾಗಿ ದಂಪತಿ ತಮ್ಮ ದೇಹವನ್ನು ದೇವರಿಗೆ ಅರ್ಪಿಸಿಕೊಳ್ಳಲು ನಿರ್ಧರಿಸಿದ್ದರು ಎನ್ನಲಾಗಿದೆ.
ತಮ್ಮ ತಲೆಯನ್ನು ಕತ್ತರಿಸಿದ ಬಳಿಕ ಅದನ್ನು ಬೆಂಕಿಯ ಮೂಲಕ ದೇವರಿಗೆ ನೈವೇದ್ಯದ ರೂಪದಲ್ಲಿ ಅರ್ಪಿಸಲು ನಿರ್ಧರಿಸಿದ್ದ ದಂಪತಿ ಅದಕ್ಕೆಂದೇ ಮೊದಲಿಗೆ ಶಿರಚ್ಛೇದ ಸ್ಥಳದ ಮುಂಭಾಗದಲ್ಲೇ ಅಗ್ನಿಜ್ವಾಲೆಯನ್ನು ಹೊತ್ತಿಸಿದ್ದರು. ಬಳಿಕ ಶಿರಚ್ಛೇದದ ಯಂತ್ರಕ್ಕೆ ಇಬ್ಬರೂ ಒಟ್ಟಿಗೆ ತಲೆ ಕೊಟ್ಟಿದ್ದಾರೆ. ನಂತರ ಯಂತ್ರದ ಹಗ್ಗವನ್ನು ಸ್ವಯಂ ಎಳೆದಾಗ ಹರಿತವಾದ ಆಯುಧ ಮೇಲಿನಿಂದ ಕೆಳಗೆ ಜಾರಿ ಒಂದೇ ಹೊಡೆತಕ್ಕೆ ಇಬ್ಬರ ತಲೆಯೂ ತುಂಡಾಗಿದೆ. ಹೀಗಾಗಿ ತುಂಡಾದ ಎರಡೂ ರುಂಡಗಳು ಒಟ್ಟಿಗೆ ಹೋಗಿ ಅಗ್ನಿಜ್ವಾಲೆಗೆ ಸಿಕ್ಕಿ ಆಹುತಿಯಾಗಿದೆ. ಶನಿವಾರ ರಾತ್ರಿ ನಡೆದ ಈ ದುರ್ಘಟನೆ ಬಗ್ಗೆ ಭಾನುವಾರ ಬೆಳಗ್ಗೆ ಕುಟುಂಬ ಸದಸ್ಯರಿಗೆ ಮಾಹಿತಿ ಸಿಕ್ಕಿದ್ದು, ಘಟನಾ ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.