ಶಿವಮೊಗ್ಗದ ಹಿಂಸಾಚಾರ ಪ್ರಕರಣ: 24 ಎಫ್ಐಆರ್ ದಾಖಲು – ಮೆರವಣಿಗೆಯಲ್ಲಿ ಕಲ್ಲು ಎಸೆದವರು ಯಾರು?
- ಕರ್ನಾಟಕ
- October 4, 2023
- No Comment
- 248
ನ್ಯೂಸ್ ಆ್ಯರೋ : ಅಕ್ಟೋಬರ್ 1ರಂದು ಶಿವಮೊಗ್ಗದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪೊಲೀಸರ ಮೇಲೆ ನಡೆದ ಕಲ್ಲು ತೂರಾಟ ಸಂಬಂಧ ಒಟ್ಟು 24 ಎಫ್ಐಆರ್ ದಾಖಲಿಸಿ, 60 ಜನರನ್ನು ಬಂಧಿಸಿದ್ದಾರೆ. ಬಂಧಿತರನ್ನು ಶಿವಮೊಗ್ಗ, ಬಳ್ಳಾರಿ ಹಾಗೂ ಚಿತ್ರದುರ್ಗ ಜೈಲಿಗೆ ಶಿಫ್ಟ್ ಮಾಡಲಾಗಿದೆ.
ಈದ್ ಮಿಲಾದ್ ವೇಳೆ ಕಿಡಿಗೇಡಿಗಳ ಗುಂಪು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿತ್ತು. ಇಷ್ಟು ಮಾತ್ರವಲ್ಲದೇ ರಾಗಿಗುಡ್ಡ ಪ್ರದೇಶದಲ್ಲಿನ ಹಿಂದೂಗಳ ಮನೆಗಳ ಮೇಲೆಯೂ ಕಲ್ಲು ಎಸೆಯಲಾಗಿತ್ತು. ಮೊದಲು ಕಲ್ಲು ಬೀಸಿದ್ದು ಯಾರು ಎಂಬುದರ ಬಗ್ಗೆ ಸಮರ್ಪಕ ಉತ್ತರ ಸಿಕ್ಕಿಲ್ಲ.
ಕಲ್ಲು ಬೀಸಿದವರ ಬಗ್ಗೆ ಇನ್ನೂ ಸ್ಪಷ್ಟನೆಯಿಲ್ಲ:
ನಾಲ್ಕು ಎಫ್ಐಆರ್ ಗಳಲ್ಲಿ ಮೆರವಣಿಗೆದಾರರೇ ಕಲ್ಲು ಬೀಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಮತ್ತೊಂದು ಎಫ್ಐಆರ್ ನಲ್ಲಿ ಎರಡು ಕಡೆಯೂ ಗುಂಪು ಸೇರಿಕೊಂಡು ಗಲಾಟೆ ಆರಂಭವಾಯಿತು ಎಂದು ಉಲ್ಲೇಖಿಸಲಾಗಿದೆ. ಈ ಮಾಹಿತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಯಾರು ಮೊದಲು ಕಲ್ಲು ಬೀಸಿದ್ರು ಎನ್ನುವುದಕ್ಕೆ ಪೊಲೀಸರ ಮಧ್ಯೆ ಗೊಂದಲ ಇದ್ದಂತೆ ಕಾಣಿಸುತ್ತಿದೆ.
ಒಟ್ಟು 24 ಎಫ್ಐಆರ್ ದಾಖಲು:
ಐಪಿಸಿ 143, 144, 147, 148, 504, 506, 324, 332, 353, 307, 427, 149 ಸೆಕ್ಷನ್ಗಳಡಿಯಲ್ಲಿ ಒಟ್ಟು 24 ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಇದರಲ್ಲಿ ನಾಲ್ವರು ಪೊಲೀಸ್ ಸಿಬ್ಬಂದಿ ನೀಡಿದ ದೂರಿನ ಆಧಾರದ ಮೇಲೆಯೂ ಎಫ್ಐಆರ್ ದಾಖಲಾಗಿವೆ.
ಹಲವು ಪ್ರಶ್ನೆಗಳಿಗೆ ಪೊಲೀಸ್ ತನಿಖೆಯಿಂದ ಉತ್ತರ ಸಿಗಬೇಕಿದೆ
ಮೆರವಣಿಗೆಯಲ್ಲಿ ಭಾಗಿಯಾದವರೇ ಮೇಲೆ ಕಲ್ಲು ತೂರಿದ್ರಾ? ರಾಗಿಗುಡ್ಡದಲ್ಲಿ ಗುಂಪು ಘರ್ಷಣೆ ನಡೆದಿತ್ತಾ? ಮೆರವಣಿಗೆ ನೋಡಲು ಬಂದವರು ಕಲ್ಲು ತೂರಿದ್ರಾ ಎಂಬಿತ್ಯಾದಿ ಪ್ರಶ್ನೆಗಳಿಗೆ ಪೊಲೀಸರ ತನಿಖೆಯಲ್ಲಿ ಉತ್ತರ ಸಿಗಬೇಕಿದೆ.
ಪೊಲೀಸ್ ಅಧಿಕಾರಿ ಶಿವರಾಜ್ ನೀಡಿರುವ ದೂರಿನಲ್ಲಿ ಮೆರವಣಿಗೆ ನೋಡುತ್ತಿದವರೇ ಮೊದಲು ಕಲ್ಲು ಬೀಸಿದ್ದಾರೆ ಎಂದು ಹೇಳಲಾಗಿದೆ. ಮೊದಲು ಕಲ್ಲು ಬೀಸಿದ್ದು ಯಾರು ಎಂಬುದರ ಬಗ್ಗೆ ಸ್ಪಷ್ಟ ಉತ್ತರ ಸಿಗಬೇಕಿದೆ.