ಕರ್ನಾಟಕ ಬಂದ್ : ಇಂದು ಮಧ್ಯರಾತ್ರಿಯಿಂದಲೇ ನಿಷೇಧಾಜ್ಞೆ ಜಾರಿ – ವಿಪಕ್ಷಗಳ ಬೆಂಬಲ ಘೋಷಿಸಿದ ಬೊಮ್ಮಾಯಿ, ಕನ್ನಡ ಚಿತ್ರರಂಗದಿಂದ ಕಾವೇರಿಗಾಗಿ ಹೋರಾಟ
- ಕರ್ನಾಟಕ
- September 28, 2023
- No Comment
- 101
ನ್ಯೂಸ್ ಆ್ಯರೋ : ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿ ವಿವಿಧ ಸಂಘಟನೆಗಳು ಶುಕ್ರವಾರ ಕರ್ನಾಟಕ ಬಂದ್ ಗೆ ಕರೆ ನೀಡಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಗುರುವಾರ ಮಧ್ಯರಾತ್ರಿಯಿಂದಲೇ ಬೆಂಗಳೂರು ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ದಯಾನಂದ್, ಇಂದು ಮಧ್ಯರಾತ್ರಿಯಿಂದಲೇ 144 ಸೆಕ್ಷನ್ ಜಾರಿ ಮಾಡಲಾಗುತ್ತಿದೆ. ಈ ವೇಳೆಯಲ್ಲಿ ಐದಕ್ಕಿಂತ ಹೆಚ್ಚು ಜನರು ಒಂದೆಡೆ ಸೇರುವಂತಿಲ್ಲ ಎಂದು ತಿಳಿಸಿದರು.
ಬಂದ್ ಗೆ ಕರೆ ನೀಡುವುದು ಅಸಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ವೇಳೆಯಲ್ಲಿ ಯಾವುದೇ ಆಸ್ತಿ ಪಾಸ್ತಿ, ಸಾವು, ನೋವು ಉಂಟಾದರೆ ಅದಕ್ಕೆ ಸಂಘಟಕರೇ ಹೊಣೆಯಾಗುತ್ತಾರೆ ಎಂದು ಅವರು ತಿಳಿಸಿದರು.
ವಾಹನಗಳಿಗೆ ತಡೆ, ಹಾನಿ ಮಾಡುವುದು, ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪ್ರತಿಭಟನೆ, ಮೆರವಣಿಗೆಗೆ ಯಾವುದಕ್ಕೂ ನಗರದಲ್ಲಿ ಅವಕಾಶವಿಲ್ಲ. ಬಲವಂತವಾಗಿ ಬಂದ್ ಮಾಡಿದರೆ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನ ಆದೇಶ ಉಲ್ಲಂಘನೆಯಾಗುತ್ತದೆ ಎಂದು ಎಚ್ಚರಿಸಿದರು.
ವಿಪಕ್ಷದ ಬೆಂಬಲ
ಶುಕ್ರವಾರದ ಬಂದ್ ಕುರಿತು ಹುಬ್ಬಳ್ಳಿಯಲ್ಲಿ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಕಾವೇರಿ, ಕೃಷ್ಣೆಯ ಹಿತರಕ್ಷಣೆಗೂ ಸರ್ಕಾರ ಮುಂದಾಗಬೇಕು. ಸರ್ಕಾರ ಎಡವಿದರೆ ಹೋರಾಟ ಮಾಡಲೇಬೇಕಾಗುತ್ತದೆ. ನಾಳಿನ ಬಂದ್ ಗೆ ವಿಪಕ್ಷದ ಬೆಂಬಲವೂ ಇದೆ ಎಂದು ತಿಳಿಸಿದರು.
ತಮಿಳುನಾಡು ಟ್ರಿಬ್ಯುನಲ್ ಆದೇಶವನ್ನು ಉಲ್ಲಂಘಿಸಿದೆ. ಈಗ 3,000 ಕ್ಯೂಸೆಕ್ಸ್ ನೀರು ಕೊಡಲು ಆದೇಶ ಬಂದಿದೆ. 10,000 ಕ್ಯೂಸೆಕ್ಸ್ ನೀರು ಬಿಡಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶ ಮಾಡಿದಾಗಲೇ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿ ಸರಿಯಾಗಿ ವಾದ ಮಂಡಿಸಿದ್ದಾರೆ.
ಬೃಹತ್ ಪ್ರಮಾಣದ ನೀರು ಬಿಡುವ ಪ್ರಮೇಯ ಬರುತ್ತಿರಲಿಲ್ಲ. ಕಾವೇರಿಗಾಗಿ ಎಲ್ಲಿಯವರೆಗೂ ಹೋರಾಟ ಇರುತ್ತೋ ಅಲ್ಲಿಯವರೆಗೂ ನಮ್ಮ ಹೋರಾಟ ನಡೆದೇ ನಡೆಯುತ್ತದೆ ಎಂದರು.
ಚಿತ್ರರಂಗ ಬೆಂಬಲ
ಚಿತ್ರೀಕರಣ, ಚಿತ್ರ ಪ್ರದರ್ಶನ ಸೇರಿದಂತೆ ಎಲ್ಲ ಚಿತ್ರೋದ್ಯಮ ಚಟುವಟಿಕೆಗಳು ಬಂದ್ ಮೂಲಕ ಕಾವೇರಿ ನೀರಿನ ವಿಚಾರದಲ್ಲಿ ಹೋರಾಟಕ್ಕೆ ಇಳಿದಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ನಟ ಶಿವರಾಜ್ ಕುಮಾರ್ ಅವರ ಮನೆಗೆ ಆಗಮಿಸಿ ಹೋರಾಟದ ಮುಂದಾಳತ್ವ ವಹಿಸುವಂತೆ ಮನವಿ ಮಾಡಿದರು.
ಶಿವರಾಜ್ ಕುಮಾರ್ ನೇತೃತ್ವದಲ್ಲಿ ಶುಕ್ರವಾರ ಗುರುರಾಜ್ ಕಲ್ಯಾಣ ಮಂಟಪದ ಬಳಿ ಚಿತ್ರೋದ್ಯಮ ತಂಡ ಹೋರಾಟ ನಡೆಸಲಿದ್ದು, ಈ ಮೂಲಕ ಚಿತ್ರೋದ್ಯಮ ಸಾಥ್ ನೀಡುತ್ತಿದೆ.
ಫಿಲ್ಮ್ ಚೇಂಬರ್ ಅಂಗ ಸಂಸ್ಥೆಗಳೂ ಸೇರಿದಂತೆ ನಡೆಯುವ ಪ್ರತಿಭಟನೆಯಲ್ಲಿ ಉಪೇಂದ್ರ, ರಾಘವೇಂದ್ರ ರಾಜ್ ಕುಮಾರ್, ಪ್ರೇಮ್, ಅಜಯ್ ರಾವ್, ಪ್ರಜ್ವಲ್ ದೇವರಾಜ್, ರಂಗಾಯಣ ರಘು, ಸಾಧು ಕೋಕಿಲಾ ಸೇರಿದಂತೆ ಅನೇಕ ಕಿರುತೆರೆ ನಟ- ನಟಿಯರು ಪಾಲ್ಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.