ಪ್ರಯಾಗರಾಜ್ ಮಹಾಕುಂಭ ಮೇಳ; ಫೆ.14ರ ವರೆಗೆ ಶಾಲೆಗಳಿಗೆ ರಜೆ ಘೋಷಣೆ

ನ್ಯೂಸ್ ಆ್ಯರೋ: ಮಹಾಕುಂಭದಲ್ಲಿ ಪ್ರತಿ ದಿನ ಕೋಟಿ ಭಕ್ತರು ಪುಣ್ಯಸ್ನಾನ ಮಾಡುತ್ತಿದ್ದಾರೆ. ದೇಶದ ಮೂಲೆ ಮೂಲೆಯಿಂದ ಹಾಗೂ ವಿದೇಶಗಳಿಂದಲೂ ಭಕ್ತರು ಆಗಮಿಸುತ್ತಿದ್ದಾರೆ. ಹೀಗಾಗಿ ಪ್ರಯಾಗರಾಜ್ ಸುತ್ತ ಮುತ್ತ ಮಾತ್ರವಲ್ಲ ಹಲವು ಜಿಲ್ಲೆಗಳಲ್ಲಿ ಭಾರಿ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದೆ. ಮಹಾಕುಂಭ ಮೇಳ ಹಾಗೂ ರವಿದಾಸ್ ಜಯಂತಿ ಹಿನ್ನಲೆಯಲ್ಲಿ ಉತ್ತರ ಪ್ರದೇಶ ಹಾಗೂ ದೆಹಲಿಯ ಕೆಲ ವಲಯದ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಫೆಬ್ರವರಿ 12 ರಿಂದ ಫೆಬ್ರವರಿ 14ರ ವರೆಗೆ ರಜೆ ನೀಡಲಾಗಿದೆ. ಮಹಾ ಕುಂಭ ಮೇಳದ ಜನಸಂದಣಿಯನ್ನು ಪರಿಗಣಿಸಿ ಪ್ರಯಾಗ್ರಾಜ್ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಶಾಲೆಗಳನ್ನು ಮುಚ್ಚುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅದೇ ರೀತಿ, ಫೆಬ್ರವರಿ 12, 2025 ರಂದು ರವಿದಾಸ್ ಜಯಂತಿಯಂದು ದೆಹಲಿಯಲ್ಲೂ ಶಾಲೆಗಳಿಗೆ ರಜೆ ಇರುತ್ತದೆ. ಪ್ರಯಾಗ್ರಾಜ್, ವಾರಣಾಸಿ, ಅಯೋಧ್ಯೆ ಮತ್ತು ಮಿರ್ಜಾಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಫೆಬ್ರವರಿ 14 ರವರೆಗೆ ಶಾಲೆಗಳು ಬಂದ್ ಆಗಿರುತ್ತವೆ.
ಮಹಾ ಕುಂಭದಲ್ಲಿ ಹರಿದು ಬರುತ್ತಿರುವ ಭಾರಿ ಜನಸಂದಣಿಯನ್ನು ಪರಿಗಣಿಸಿ, ಆಡಳಿತವು ಪ್ರಯಾಗ್ರಾಜ್ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಶಾಲೆಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಆದೇಶಿಸಿದೆ. ಅಷ್ಟೇ ಅಲ್ಲ, ಐಐಟಿ ರೂರ್ಕಿಯವರು ಕೂಡ ಮಹಾ ಕುಂಭದ ಜನಸಂದಣಿಯನ್ನು ಗಮನದಲ್ಲಿಟ್ಟುಕೊಂಡು ಪ್ರಯಾಗ್ರಾಜ್ನಲ್ಲಿ ನಿಗದಿಪಡಿಸಿದ್ದ ಗೇಟ್ ಪರೀಕ್ಷಾ ಕೇಂದ್ರವನ್ನು ವಾರಣಾಸಿಗೆ ಸ್ಥಳಾಂತರಿಸಿದ್ದಾರೆ.
ಫೆಬ್ರವರಿ 12 ರಂದು ಸಂತ ರವಿದಾಸ್ ಜಯಂತಿಯಂದು ದೆಹಲಿಯ ಎಲ್ಲಾ ಶಾಲೆಗಳು ಬಂದ್ ಆಗಿರುತ್ತವೆ. ಆದಾಗ್ಯೂ, ಇದು ಕೇವಲ ಒಂದು ದಿನದ ರಜೆ, ಮತ್ತು ಫೆಬ್ರವರಿ 13 ರಿಂದ ಶಾಲೆಗಳು ಮತ್ತೆ ತೆರೆಯುತ್ತವೆ.
ಇನ್ನು ವಾರಣಾಸಿ ಆಡಳಿತವು 1 ರಿಂದ 8 ನೇ ತರಗತಿಯವರೆಗಿನ ಎಲ್ಲಾ ಶಾಲೆಗಳನ್ನು ಫೆಬ್ರವರಿ 14 ರವರೆಗೆ ಮುಚ್ಚಲು ಆದೇಶಿಸಿದೆ. ಈ ಅವಧಿಯಲ್ಲಿ ಆನ್ಲೈನ್ ಮೂಲಕ ಪಾಠಗಳು ಮುಂದುವರಿಯುತ್ತವೆ. ಜಿಲ್ಲಾ ಮೂಲ ಶಿಕ್ಷಣಾಧಿಕಾರಿ ಡಾ. ಅರವಿಂದ್ ಕುಮಾರ್ ಪಾಠಕ್ ಅವರು ನಗರ ಪ್ರದೇಶದ 99 ಪರಿಷದೀಯ ಶಾಲೆಗಳಲ್ಲಿ ಆನ್ಲೈನ್ ಪಾಠಗಳನ್ನು ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಅಯೋಧ್ಯೆಯಲ್ಲಿ ಮಹಾ ಕುಂಭದ ಭಕ್ತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಸ್ಥಳೀಯ ನಿವಾಸಿಗಳಿಗೆ ಆಗುತ್ತಿರುವ ತೊಂದರೆಯನ್ನು ಗಮನದಲ್ಲಿಟ್ಟುಕೊಂಡು ಆಡಳಿತವು ಜಿಲ್ಲೆಯ ಎಲ್ಲಾ ಶಾಲೆಗಳನ್ನು ಫೆಬ್ರವರಿ 14 ರವರೆಗೆ ಮುಚ್ಚಲು ನಿರ್ಧರಿಸಿದೆ. ಜಿಲ್ಲಾಧಿಕಾರಿ ಹೊರಡಿಸಿದ ಆದೇಶದ ಪ್ರಕಾರ, 12 ನೇ ತರಗತಿಯವರೆಗಿನ ಎಲ್ಲಾ ಶಾಲೆಗಳು ಈ ಅವಧಿಯಲ್ಲಿ ಬಂದ್ ಆಗಿರುತ್ತವೆ.
ಮಿರ್ಜಾಪುರ ಜಿಲ್ಲೆಯಲ್ಲೂ ನರ್ಸರಿಯಿಂದ 8 ನೇ ತರಗತಿಯವರೆಗಿನ ಎಲ್ಲಾ ಶಾಲೆಗಳನ್ನು ಫೆಬ್ರವರಿ 14 ರವರೆಗೆ ಮುಚ್ಚಲು ಆದೇಶಿಸಲಾಗಿದೆ. ಹೆಚ್ಚುತ್ತಿರುವ ಜನಸಂದಣಿ ಮತ್ತು ಸಂಚಾರ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಆಡಳಿತವು ಈ ಕ್ರಮ ಕೈಗೊಂಡಿದೆ.
ಪ್ರಯಾಗ್ರಾಜ್, ವಾರಣಾಸಿ, ಅಯೋಧ್ಯೆ ಮತ್ತು ಮಿರ್ಜಾಪುರದ ಹೆಚ್ಚಿನ ಶಾಲೆಗಳು ಫೆಬ್ರವರಿ 17, 2025 (ಸೋಮವಾರ) ರಿಂದ ಮತ್ತೆ ತೆರೆಯುತ್ತವೆ. ಜನಸಂದಣಿ ನಿಯಂತ್ರಣಕ್ಕೆ ಬಾರದಿದ್ದರೆ ರಜಾದಿನಗಳ ಅವಧಿಯನ್ನು ವಿಸ್ತರಿಸಬಹುದು ಎಂದು ಆಡಳಿತ ಹೇಳಿದೆ. ದೇಶಾದ್ಯಂತ ಮಹಾ ಕುಂಭದ ಹಿನ್ನೆಲೆಯಲ್ಲಿ ಹಲವು ಪ್ರದೇಶಗಳಲ್ಲಿ ಶಾಲೆಗಳನ್ನು ತಾತ್ಕಾಲಿಕವಾಗಿ ಮುಚ್ಚಲು ನಿರ್ಧರಿಸಲಾಗಿದೆ.
Leave a Comment