ಗುರುವಾರ ವಿಷ್ಣು ಪ್ರಿಯ ತುಳಸಿಯನ್ನು ಈ ರೀತಿ ಪೂಜಿಸಿದ್ರೆ ಸಿಗುತ್ತೆ ಲಕ್ಷ್ಮೀ ನಾರಾಯಣ ಕೃಪೆ – ತುಳಸಿ ಪೂಜನೆ ಹೇಗೆ ಮಾಡಬೇಕು ಗೊತ್ತಾ?
- ಧಾರ್ಮಿಕ
- October 12, 2023
- No Comment
- 69
ನ್ಯೂಸ್ ಆ್ಯರೋ : ತುಳಸಿಯು ಹಿಂದೂ ಧರ್ಮದ ದೇವ ರೂಪದ ಸಸ್ಯ. ಈ ಕಾರಣಕ್ಕಾಗಿ ತುಳಸಿಯನ್ನು ಅತ್ಯಂತ ಪ್ರವಿತ್ರವೆಂದು ಹೇಳಲಾಗುತ್ತದೆ. ತುಳಸಿ ಗಿಡವೂ ಸಾಕ್ಷಾತ್ ಲಕ್ಷ್ಮಿಯ ರೂಪ. ಶಾಸ್ತ್ರದ ಪ್ರಕಾರ, ವಾರದ ಶುಕ್ರವಾರವನ್ನು ಲಕ್ಷ್ಮಿ ದೇವಿಗೆ ಸಮರ್ಪಿಸಲಾಗಿದ್ದರೆ, ಗುರುವಾರವನ್ನು ಭಗವಾನ್ ವಿಷ್ಣುವಿಗೆ ಸಮರ್ಪಿತವಾದ ದಿನವಾಗಿದೆ.
ಲಕ್ಷ್ಮಿ ದೇವಿಯು ವಿಷ್ಣುವಿನ ಪತ್ನಿಯಾದ್ದರಿಂದ, ತುಳಸಿಯು ಲಕ್ಷ್ಮಿಯ ರೂಪವಾದ್ದರಿಂದ ಗುರುವಾರದಂದು ತುಳಸಿಯನ್ನು ಆರಾಧಿಸುವ ಮೂಲಕ ಲಕ್ಷ್ಮಿ – ನಾರಾಯಣರ ಆಶೀರ್ವಾದ ದೊರೆಯುತ್ತದೆ. ಅದರಲ್ಲೂ ನೀವು ಜೀವನದಲ್ಲಿ ಆರ್ಥಿಕ ಸರ್ಮೃದ್ಧಿಯನ್ನೂ, ಸಂಪತ್ತನ್ನೂ ಬಯಸುವುದಾದರೆ ಗುರುವಾರ ತುಳಸಿ ಸಸ್ಯಕ್ಕೆ ಸಂಬಂಧಿಸಿದ ಈ ಕೆಲಸ ಮಾಡಿ.
ತುಳಸಿ ನೀರಿನ ಸ್ನಾನ
ನೀವು ಯಾರಿಗಾದರೂ ಹಣವನ್ನು ಸಾಲವಾಗಿ ನೀಡಿದ್ದರೆ, ಅವರು ಆ ಹಣವನ್ನು ನಿಮಗೆ ಮರಳಿ ನೀಡದಿದ್ದರೆ, ಯಾವುದೋ ಅತ್ಯಂತ ಅಮೂಲ್ಯವಾದ ವಸ್ತು ಕಳೆದು ಹೋಗಿದ್ದರೆ, ನೀವು ಗುರುವಾರದ ದಿನದಂದು ತುಳಸಿ ನೀರಿನಿಂದ ಸ್ನಾನವನ್ನು ಮಾಡಬೇಕು. ಗುರುವಾರ ಮುಂಜಾನೆ ನೀವು ಸ್ನಾನ ಮಾಡುವ ಸಮಯದಲ್ಲಿ ಸ್ನಾನದ ನೀರಿಗೆ 10 ರಿಂದ 15 ತುಳಸಿ ದಳಗಳನ್ನು ಹಾಕಿ ಸ್ನಾನ ಮಾಡಬೇಕು. ತುಳಸಿ ದಳಗಳೊಂದಿಗೆ ಒಂದು ಚಿಟಿಕೆ ಅರಿಶಿನವನ್ನೂ ನೀರಿಗೆ ಹಾಕಿ ಸ್ನಾನ ಮಾಡಿ. ಗುರುವಾರ ನೀವು ಈ ನೀರಿನಿಂದ ಸ್ನಾನ ಮಾಡುವುದರಿಂದ ಆರ್ಥಿಕ ಲಾಭವನ್ನು ಪಡೆದುಕೊಳ್ಳುತ್ತೀರಿ.
ತುಳಸಿಗೆ ಹಾಲನ್ನು ಅರ್ಪಿಸಿ
ನೀವು ಹಣದ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದರೆ ಅಥವಾ ನೀವು ಹಣದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ನೀರಿಗೆ ಹಸಿ ಹಾಲನ್ನು ಬೆರೆಸಿ ತುಳಸಿ ಗಿಡಕ್ಕೆ ಅರ್ಪಿಸಬೇಕು. ಇದನ್ನು ಮಾಡುವುದರಿಂದ ನೀವು ಹಣಿಕಾಸಿನ ಪ್ರಯೋಜನಗಳನ್ನು ಪಡೆದುಕೊಳ್ಳುತ್ತೀರಿ. ಧನಾಗಮನ ನಿಮ್ಮನ್ನು ಹುಡುಕಿ ಬರುವುದು.
ತುಪ್ಪದ ದೀಪ ಬೆಳಗಿ
ಪ್ರತಿದಿನ ಮುಂಜಾನೆ ಮತ್ತು ಸಂಜೆ ತುಳಸಿ ಗಿಡದ ಬಳಿ ತುಪ್ಪದ ದೀಪವನ್ನು ಬೆಳಗಬೇಕು. ಅದರಲ್ಲೂ ನೀವು ವಿಶೇಷವಾಗಿ ಗುರುವಾರದ ದಿನದಂದು ತಪ್ಪದೇ ಎರಡೂ ಸಮಯ ತುಪ್ಪದ ದೀಪವನ್ನು ಹಚ್ಚಿಡಬೇಕು. ತುಳಸಿ ಬಳಿ ತುಪ್ಪದ ದೀಪವನ್ನು ಹಚ್ಚಿಡುವುದರಿಂದ ದೇವಾನುದೇವತೆಗಳ ಆಶೀರ್ವಾದ ನಿಮಗೆ ದೊರೆಯುತ್ತದೆ. ಅಷ್ಟು ಮಾತ್ರವಲ್ಲ, ಇದರಿಂದ ನೀವು ಬಡತನದಂತಹ ಸಮಸ್ಯೆಗಳಿಂದಲೂ ಮುಕ್ತಿಯನ್ನು ಪಡೆದುಕೊಳ್ಳುತ್ತೀರಿ. ಸಂಪತ್ತಿನ ಮಾರ್ಗಗಳು ನಿಮ್ಮ ಪಾಲಿಗೆ ತೆರೆದುಕೊಳ್ಳುತ್ತದೆ. ಇದರಿಂದ ಉದ್ಯೋಗ ದೊರೆಯುವ ಸಾಧ್ಯತೆಯೂ ಇದೆ.
ತುಳಸಿಗೆ ಪ್ರದಕ್ಷಿಣೆ
ತುಳಸಿ ಗಿಡದ ಬಳಿ ನಾವು ಪ್ರತಿನಿತ್ಯ ಹೇಗೆ ತುಪ್ಪದ ದೀಪವನ್ನು ಬೆಳಗುತ್ತೇವೆಯೋ ಹಾಗೇ ಪ್ರತಿದಿನ ನೀರನ್ನೂ ನೀಡಬೇಕು. ಒಂದು ವೇಳೆ ನಿಮಗೆ ಪ್ರತಿದಿನ ತುಳಸಿಗೆ ನೀರನ್ನು ನೀಡಲು ಸಾಧ್ಯವಾಗದಿದ್ದರೆ ಗುರುವಾರ ತಪ್ಪದೇ ನೀರನ್ನು ಅರ್ಪಿಸಬೇಕು. ಆದರೆ, ಇಲ್ಲಿ ನೀವು ಗಮನದಲ್ಲಿಟ್ಟುಕೊಳ್ಳಬೇಕಾದ ಪ್ರಮುಖ ವಿಚಾರವೆಂದರೆ ತುಳಸಿಗೆ ನೀರನ್ನು ನೀಡುವ ಮೊದಲು ಸೂರ್ಯ ದೇವನಿಗೆ ನೀರನ್ನು ಅಂದರೆ ಅರ್ಘ್ಯವನ್ನು ನೀಡಬೇಕು. ತುಳಸಿಗೆ ನೀರನ್ನು ನೀಡಿದ ನಂತರ 3 ಬಾರಿ ಪ್ರದಕ್ಷಿಣೆಯನ್ನು ಹಾಕಬೇಕು. ಈ ರೀತಿ ಮಾಡುವುದರಿಂದ ನೀವು ಜೀವನದಲ್ಲಿ ಧನಾತ್ಮಕತೆಯನ್ನು ಪಡೆದುಕೊಳ್ಳುತ್ತೀರಿ.
ಒಣಗಿದ ತುಳಸಿ ಎಲೆ ಪರಿಹಾರ
ಮನೆಯಲ್ಲಿ ತುಳಸಿ ಗಿಡವನ್ನು ಒಣಗಲು ಬಿಡಬಾರದು. ಒಂದು ವೇಳೆ ತುಳಸಿ ಗಿಡ ಒಣಗಿದರೆ ಅದನ್ನು ತಕ್ಷಣವೇ ತೆಗೆದು ಹರಿಯುವ ನೀರಿನಲ್ಲಿ ಬಿಡಬೇಕು. ಹಾಗೂ ಒಣಗಿದ ತುಳಸಿಯ ಸ್ಥಳದಲ್ಲಿ ಮತ್ತೊಂದು ಹಸಿರೆಲೆಯ ತುಳಸಿ ಗಿಡವನ್ನು ನೆಡಬೇಕು. ತುಳಸಿ ಗಿಡ ಒಣಗಿದಾಗ ನೀವು ಮತ್ತೊಂದು ಉಪಾಯವನ್ನೂ ಮಾಡಬಹುದು. ಒಣಗಿದ ತುಳಸಿಯನ್ನು ಆಗಿರಬಹುದು ಅಥವಾ ಒಣಗಿದ ತುಳಸಿ ಎಲೆಯನ್ನೂ ಆಗಿರಬಹುದು.. ಇದನ್ನು ಕೆಂಪು ಬಣ್ಣದ ಬಟ್ಟೆಯಲ್ಲಿ ಕಟ್ಟಿ ನಿಮ್ಮ ಪರ್ಸ್ನಲ್ಲಿ ಇಟ್ಟುಕೊಳ್ಳಿ. ಇದು ನಿಮ್ಮ ಹಣದ ಸಮಸ್ಯೆಯನ್ನು ಸುಲಭವಾಗಿ ದೂರಾಗಿಸುತ್ತದೆ.