ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಅನುದಾನ ತಡೆ ಆದೇಶ ಗೊಂದಲ – ಸಚಿವರ ಸೂಚನೆ ಮೇರೆಗೆ ಆದೇಶ ವಾಪಸ್ ಪಡೆದ ಧಾರ್ಮಿಕ ದತ್ತಿ ಇಲಾಖೆ
- ರಾಜಕೀಯ
- August 18, 2023
- No Comment
- 71
ನ್ಯೂಸ್ ಆ್ಯರೋ : ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ನೀಡುವ ಅನುದಾನವನ್ನು ತಡೆ ಹಿಡಿಯುವಂತೆ ಧಾರ್ಮಿಕ ದತ್ತಿ ಇಲಾಖೆ ಹೊರಡಿಸಿದ್ದ ಆದೇಶ ಹಿಂಪಡೆಯುವಂತೆ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಸೂಚಿಸಿದ್ದಾರೆ.
ಏನಿದು ಗೊಂದಲ?
2022-2023ನೇ ಸಾಲಿನಲ್ಲಿ ಬಿಡುಗಡೆಯಾಗಿರುವ ಅನುದಾನದಲ್ಲಿ, ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿ ಇನ್ನೂ ಆರಂಭವಾಗದಿದ್ದರೆ ಹಣ ಬಿಡುಗಡೆ ಮಾಡಬಾರದು, ಶೇ. 50ರಷ್ಟು ಹಣ ಬಿಡುಗಡೆಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದರೆ ತಕ್ಷಣ ರದ್ದು ಮಾಡಬೇಕು, ಅನುದಾನದ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದರೆ ಆಡಳಿತಾತ್ಮಕವಾಗಿ ಮಂಜೂರಾತಿ ತಡೆ ಹಿಡಿಯಬೇಕು ಎನ್ನುವ ಮೂರು ವಿಷಯಗಳನ್ನು ಧಾರ್ಮಿಕ ದತ್ತಿ ಇಲಾಖೆ ಪ್ರಸ್ತಾವಿಸಿತ್ತು.
ಅದರಂತೆ ದೇವಸ್ಥಾನಗಳ ಜೀರ್ಣೋದ್ಧಾರ ಅನುದಾನ ತಡೆಹಿಡಿಯಬೇಕು ಎಂದು ಆದೇಶ ಹೊರಡಿಸಿತ್ತು. ಇದರ ಬೆನ್ನಲ್ಲೇ ರಾಮಲಿಂಗಾ ರೆಡ್ಡಿ ಆದೇಶ ವಾಪಸ್ ಪಡೆಯುವಂತೆ ಸೂಚನೆ ನೀಡಿದ್ದಾರೆ.
ಗೊಂದಲದಿಂದಾಗಿ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಅನುದಾನ ತಡೆಹಿಡಿಯುವ ಆದೇಶ ಹೊರಡಿಸಿದ್ದು ಗೊತ್ತಾಗಿದ್ದು, ಸಚಿವರ ಸೂಚನೆ ಹಿನ್ನಲೆಯಲ್ಲಿ ವಾಪಸ್ ಪಡೆದಿದ್ದಾರೆ.