ಬಾಲಸೋರ್ ರೈಲು ಅಪಘಾತದ ಕಾರಣ ಕೊನೆಗೂ ಬಹಿರಂಗ – ಈ ಭೀಕರ ದುರಂತ ಸಂಭವಿಸಿದ್ದು ಹೇಗೆ ಗೊತ್ತಾ?
- ರಾಷ್ಟ್ರೀಯ ಸುದ್ದಿ
- June 5, 2023
- No Comment
- 267
ನ್ಯೂಸ್ ಆ್ಯರೋ : ಒಡಿಶಾದ ಬಾಲಸೋರ್ ನಲ್ಲಿ ಜೂ. 2ರಂದು ದೇಶದ ಇತಿಹಾಸದಲ್ಲೇ ಎರಡನೇ ಭೀಕರ ರೈಲು ಅಪಘಾತ ಸಂಭವಿಸಿದ್ದು, ಸುಮಾರು 290ಕ್ಕೂ ಹೆಚ್ಚು ಪ್ರಯಾಣಿಕರು ಅಸುನೀಗಿದ್ದಾರೆ. ಇದೀಗ ಈ ಅವಘಡದ ಕಾರಣ ಬಹಿರಂಗವಾಗಿದ್ದು, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.
ಎಲೆಕ್ಟ್ರಾನಿಕ್ ಇಂಟರ್ ಲಾಕಿಂಗ್ ನಲ್ಲಿ ಕಂಡುಬಂದ ಸಮಸ್ಯೆ ಈ ದುರಂತಕ್ಕೆ ಕಾರಣ (ರೈಲು ಒಂದು ಹಳಿಯಿಂದ ಇನ್ನೊಂದು ಹಳಿಗೆ ಹೋಗಲು ಎಲೆಕ್ಟ್ರಾನಿಕ್ ಪದ್ಧತಿಯಿಂದ ಮಾಡುವ ಬದಲಾವಣೆಯನ್ನು ಇಂಟರ್ ಲಾಕಿಂಗ್ ಸಿಸ್ಟಂ ಎಂದು ಕರೆಯಲಾಗುತ್ತದೆ) ಎಂದು ಹೇಳಿದ್ದಾರೆ.
ಅಪಘಾತ ಹೇಗಾಯಿತು?
ಈ ಕುರಿತು ರೈಲ್ವೇ ಬೋರ್ಡ್ ನ ಅದಿಕಾರಿ ಜಯಾ ಸಿನ್ಹಾ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿದ್ದಾರೆ. ಕೋರಮಂಡಲ ಎಕ್ಸಪ್ರೆಸ್ ಸಂಜೆ 6 ಗಂಟೆ 55 ನಿಮಿಷಕ್ಕೆ ಬಹಾನಗಾ ನಿಲ್ದಾಣಕ್ಕೆ ಬರುತ್ತಿತ್ತು. ಆಗ ಅಪಘಾತಕ್ಕೆ ಒಳಗಾಯಿತು. ಇದರಿಂದ ನಿಲ್ದಾಣದಲ್ಲಿ ನಿಂತಿದ್ದ ಸರಕು ಸಾಗಾಣಿಕೆ ಗಾಡಿ ಮತ್ತು ಅಲ್ಲಿಂದ ಹಾದು ಹೋಗುವ ಯಶವಂತಪುರ ಎಕ್ಸಪ್ರೆಸ್ ಗಾಡಿಯೂ ಹಾನಿಗೊಳಗಾಯಿತು ಎಂದಿದ್ದಾರೆ.
ಎರಡೂ ಎಕ್ಸಪ್ರೆಸ್ ಮಾರ್ಗ ಮತ್ತು ಸಿಗ್ನಲ್ `ಸೆಟ್’ ಮಾಡಲಾಗಿತ್ತು. ಹಸಿರು ಸಿಗ್ನಲ್ ತೋರಿಸಲಾಗಿತ್ತು. ಅಂದರೆ ಅವರಿಗೆ ಮಾರ್ಗ ತೆರವುಗೊಳಿಸಲಾಗಿದೆ ಎಂದರ್ಥ. ಈ ರೈಲುಗಳಿಗೆ 130 ಕಿ.ಮೀ. ಪ್ರತಿಗಂಟೆ ವೇಗದಿಂದ ಹೋಗಲು ಅನುಮತಿಯಿರುತ್ತದೆ. ಕೋರಮಂಡಲ ವೇಗ ಗಂಟೆಗೆ 128 ಕಿ.ಮೀ ಹಾಗೂ ಯಶವಂತಪುರ ರೈಲಿನ ವೇಗ ಗಂಟೆಗೆ 126 ಕಿ.ಮೀ. ಇತ್ತು. ಕೋರಮಂಡಲ ಎಕ್ಸ್ ಪ್ರೆಸ್ ಗಾಡಿಗೆ ಮಾರ್ಗ ತೆರವುಗೊಳಿಸಲಾಗಿದೆಯೆಂದು ಸಿಗ್ನಲ್ ಸಿಕ್ಕಿದ್ದರಿಂದ ಅದು ಮುಂದಕ್ಕೆ ಹೋಯಿತು. ಅದೇ ಮಾರ್ಗದಲ್ಲಿ ಗೂಡ್ಸ್ ಗಾಡಿ ನಿಂತಿತ್ತು ಮತ್ತು ಅದಕ್ಕೆ ಡಿಕ್ಕಿ ಹೊಡೆಯಿತು.
ಪ್ರಾಥಮಿಕ ವರದಿಯಲ್ಲಿ ಸಿಗ್ನಲ್ ನಲ್ಲಿ ತೊಂದರೆ ಕಂಡು ಬಂದಿರುವ ಮಾಹಿತಿಯಿದೆ. ಸದ್ಯ ತನಿಖೆ ಮುಂದುವರಿದಿದೆ. ಅದರ ವಿವರವಾದ ವರದಿಯನ್ನು ಪಡೆಯದೇ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಅಪಘಾತ ಕೇವಲ ಕೋರಮಂಡಲ್ ಎಕ್ಸಪ್ರೆಸ್ ಗಾಡಿಗೆ ಆಗಿದೆ. 3 ಗಾಡಿಗಳು ಡಿಕ್ಕಿ ಹೊಡೆದಿಲ್ಲ. ಒಂದೇ ಹಳಿಯ ಮೇಲೆ ಮೂರು ಗಾಡಿಗಳು ಬಂದಿರಲಿಲ್ಲ. ಕೇವಲ ಒಂದೇ ಗಾಡಿಯ ಅಪಘಾತವಾಗಿದೆ. ಅಪಘಾತದ ಬಳಿಕ ಅದು ಗೂಡ್ಸ್ ಗಾಡಿಗೆ ಡಿಕ್ಕಿ ಹೊಡೆದಿದೆ ಎಂದು ಅವರು ಹೇಳಿದ್ದಾರೆ.
ಕಬ್ಬಿಣ ತುಂಬಿದ್ದ ಗಾಡಿ
ಕೋರಮಂಡಲ ಗಾಡಿ ಎಲ್.ಎಚ್.ಬಿ. ರೈಲು ಗಾಡಿಯಾಗಿದೆ. ಇದು ಅತ್ಯಧಿಕ ಸುರಕ್ಷಿತವಾಗಿರುವ ರೈಲು ಎಂದು ಕರೆಯಿಸಿಕೊಳ್ಳುತ್ತದೆ. ಇಂತಹ ಗಾಡಿಗಳು ಅತ್ಯಂತ ವೇಗವಾಗಿದ್ದರೂ ಮತ್ತು ಅಪಘಾತವಾದರೂ ಯಾತ್ರಿಕರಿಗೆ ಅಧಿಕ ಗಾಯಗಳಾಗುವುದಿಲ್ಲ. ಆದರೆ ಈಗಿನ ಅಪಘಾತದಲ್ಲಿ ಗೂಡ್ಸ್ ಗಾಡಿಯಲ್ಲಿ ಕಬ್ಬಿಣ ತುಂಬಿತ್ತು. ಡಿಕ್ಕಿ ಹೊಡೆದಿರುವ ಗೂಡ್ಸ್ ಗಾಡಿಗೆ ಹೆಚ್ಚಿನ ಹಾನಿಯಾಗಿಲ್ಲ. ಆದರೆ ಕೋರಮಂಡಲ ಗಾಡಿಯ ಕೆಲವು ಬೋಗಿಗಳು ಹಳಿ ತಪ್ಪಿತು. ಅದೇ ಸಮಯಕ್ಕೆ ಬಂದ ಯಶವಂತಪುರ ಎಕ್ಸಪ್ರೆಸ್ ಗೆ ತಾಗಿ ಕೊನೆಯ 2 ಬೋಗಿಗಳು ಹಳಿ ಬಿಟ್ಟು ಸರಿದವು ಎಂದು ಜಯಾ ಸಿನ್ಹಾ ಹೇಳಿದ್ದಾರೆ.