ಪುತ್ತೂರು : ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣ – ಮೂರನೇ ಆರೋಪಿ ಪೋಲಿಸರಿಗೆ ಶರಣು, ಕೊಲೆ ಸುತ್ತ ಹತ್ತು ಹಲವು ಅನುಮಾನ..!
- ಕರಾವಳಿ
- November 7, 2023
- No Comment
- 300
ನ್ಯೂಸ್ ಆ್ಯರೋ : ಪುತ್ತೂರಿನಲ್ಲಿ ಹುಲಿವೇಷಕ್ಕೆ ಸ್ಟಾರ್ ಗಿರಿ ಕೊಡಿಸಿದ್ದ ಅಕ್ಷಯ್ ಕಲ್ಲೇಗ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳು ಈ ಮೊದಲೇ ಪೊಲೀಸರಿಗೆ ಶರಣಾಗಿದ್ದು, ಸದ್ಯ ಮೂರನೇ ಆರೋಪಿ ಪೋಲಿಸರಿಗೆ ಶರಣಾದ ಮಾಹಿತಿ ಲಭ್ಯವಾಗಿದೆ.
ಪುತ್ತೂರು ಸಮೀಪದ ಬನ್ನೂರಿನ ಜೈನರ ಗುರಿ ನಿವಾಸಿಯಾದ ಚೇತು ಅಲಿಯಾಸ್ ಚೇತನ್, ಪಡೀಲು ಬಳಿಯ ಮನೀಶ್ ಮಣಿಯಾಣಿ ಈ ಮೊದಲು ಪೋಲಿಸರಿಗೆ ಶರಣಾಗಿದ್ದರೆ, ಮತ್ತೊಬ್ಬ ಜೈನರ ಗುರಿ ನಿವಾಸಿ ಮಂಜು ಅಲಿಯಾಸ್ ಮಂಜುನಾಥ್ ಇಂದು ಪೋಲಿಸರಿಗೆ ಶರಣಾಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊಬ್ಬ ಆರೋಪಿ ಕೇಶವ ಶೀಘ್ರವಾಗಿ ಶರಣಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಚಿಕ್ಕಮುಡ್ನೂರು ಗ್ರಾಮದ ವಿಖ್ಯಾತ್ ಬಿ. (27) ನೀಡಿದ ದೂರಿನಂತೆ ಪುತ್ತೂರು ನಗರ ಪೋಲಿಸ್ ಠಾಣೆಯಲ್ಲಿ ಮೊ.ಸಂ. 106-2023 ರಂತೆ ಐಪಿಸಿ ಸೆಕ್ಷನ್ 341, 504, 506, 307, 302 ಮತ್ತು 34 ರಡಿ ಪ್ರಕರಣ ದಾಖಲಾಗಿದೆ.
ದೂರಿನಲ್ಲಿ ಏನಿದೆ?
ಕಳೆದ ರಾತ್ರಿ ಪುತ್ತೂರು ನೆಹರೂ ನಗರದಲ್ಲಿ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಷಯ ಕಲ್ಲೇಗರವರಿಗೆ ಹಾಗೂ ಮನೀಶ್ ಮತ್ತು ಚೇತನ್ ಎಂಬವರೊಂದಿಗೆ ದೂರವಾಣಿ ಕರೆಯ ಮೂಲಕ ಮಾತಿನ ಚಕಮಕಿ ನಡೆದಿತ್ತು. ಈ ಪ್ರಕರಣ ಮುಂದುವರಿದು ಸ್ವಲ್ಪ ಸಮಯದ ಬಳಿಕ ಅಕ್ಷಯ್ ಕಲ್ಲೇಗ ಮತ್ತು ವಿಖ್ಯಾತ್ ನೆಹರೂನಗರದ ಬಳಿಯಿರುವ ಎಟಿಎಂ ಪಕ್ಕದಲ್ಲಿ ನಿಂತುಕೊಂಡಿದ್ದ ವೇಳೆ ಕಾರಿನಲ್ಲಿ ಬಂದ ಚೇತನ್, ಮನೀಶ್, ಮಂಜ ಮತ್ತು ಕೇಶವ ಎಂಬುವರು ಅಕ್ಷಯ್ ಕಲ್ಲೇಗ ಅವರೊಂದಿಗೆ ದೂರವಾಣಿ ಕರೆಯ ಮೂಲಕ ನಡೆದಿದ್ದ ಮಾತಿನ ಚಕಮಕಿಯ ವಿಚಾರದಲ್ಲಿ ತಕರಾರು ತೆಗೆದು ಅವಾಚ್ಯವಾಗಿ ಬೈದು ತಾವುಗಳು ತಂದಿದ್ದ 2 ತಲವಾರಿನಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ವಿಖ್ಯಾತ್ ಓಡಿ ತಪ್ಪಿಸಿಕೊಂಡಿದ್ದು ಅಕ್ಷಯ್ ಕಲ್ಲೇಗ ಅವರನ್ನು ಚೇತನ್, ಮನೀಶ್, ಮಂಜ ಮತ್ತು ಕೇಶವ ಸೇರಿಕೊಂಡು ಕೊಲೆ ಮಾಡಿರುವುದಾಗಿ ದೂರು ನೀಡಲಾಗಿದೆ.
ಘಟನೆಯ ಹಿನ್ನೆಲೆ :
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ನೆಹರೂ ನಗರದಲ್ಲಿ ಕಳೆದ ತಡ ರಾತ್ರಿ ಈ ದುಷ್ಕರ್ಮಿಗಳ ತಂಡ ಪುತ್ತೂರಿನ ಪ್ರಖ್ಯಾತ ಹುಲಿ ವೇಷ ಕುಣಿತ ತಂಡ ಟೈಗರ್ಸ್ ಕಲ್ಲೇಗ ತಂಡದ ಸಾರಥ್ಯ ವಹಿಸಿದ್ದ ಅಕ್ಷಯ್ ಕಲ್ಲೇಗನನ್ನು ತಲವಾರಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದರು.
ಕಳೆದ ತಡರಾತ್ರಿ ಅಕ್ಷಯ್ ಕಲ್ಲೇಗನನ್ನು ಮೂವರು ದುಷ್ಕರ್ಮಿಗಳು ಅಟ್ಟಾಡಿಕೊಂಡು ಬಂದು ತಲವಾರಿನಿಂದ ದಾಳಿ ನಡೆಸಿದ್ದಾರೆ. ಅಕ್ಷಯ್ ಮೃತದೇಹ ವಿವೇಕಾನಂದ ಕಾಲೇಜಿಗೆ ಹೋಗುವ ರಸ್ತೆಯ ವಿರುದ್ದ ದಿಕ್ಕಿನಲ್ಲಿ ಹೆದ್ದಾರಿಯ ಅಂಚಿನಲ್ಲಿರುವ ಗಿಡಗಂಟಿಗಳಿಂದ ಅವೃತ್ತವಾದ ಹಡೀಲು ಬಿದ್ದ ಜಾಗದಲ್ಲಿ ಬಿದ್ದುಕೊಂಡಿತ್ತು.
ಕಳೆದ ರಾತ್ರಿ ದ್ವಿಚಕ್ರ ವಾಹನಗಳ ನಡುವೆ ನಡೆದ ಅಪಘಾತ ವಿಚಾರದಲ್ಲಿ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಆದರೆ ಕೊಲೆಗೆ ಹಿಂದಿನ ದ್ವೇಷವೇ ಕಾರಣ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅದರಲ್ಲೂ ಹುಲಿ ವೇಷ ತಂಡದಿಂದಲೇ ಪ್ರಸಿದ್ಧಿಯಾಗಿದ್ದ ಅಕ್ಷಯ್ ನನ್ನು ಪ್ರಿ ಪ್ಲ್ಯಾನ್ ಮಾಡಿಯೇ ಕೊಲೆ ಮಾಡಲಾಗಿದೆಯೇ ಎಂಬ ಶಂಕೆ ಮೂಡಿದೆ.
ಅನುಮಾನ ಏಕೆ?
- ಅಪಘಾತ ವಿಷಯದಲ್ಲಿ ಆದ ಜಗಳ ಘಟನೆ ನಡೆದ ದರ್ಬೆಯ ಬಳಿಯೇ ಮುಗಿದಿದ್ದರೂ ಆರೋಪಿಗಳು ಅಕ್ಷಯ್ ನನ್ನು ಹುಡುಕಿ ನೆಹರೂ ನಗರಕ್ಕೆ ಬಂದಿದ್ದು ಯಾಕೆ?
- ಮಾತುಕತೆಗೆಂದು ಬಂದವರು ಕೊಲೆ ಮಾಡುವುದಾಗಿದ್ದರೆ ಹಂತಕರಿಗೆ ಅಷ್ಟು ಬೇಗ ತಲವಾರು ಸಿಕ್ಕಿದ್ದು ಎಲ್ಲಿ ಮತ್ತು ಹೇಗೆ?
- ತಲವಾರು ಈ ಮೊದಲೇ ಸಿದ್ಧವಾಗಿ ಇಟ್ಟುಕೊಂಡಿದ್ದರೆ ಅದು ಎಲ್ಲಿತ್ತು?
- ಮೊದಲೇ ಪೂರ್ವ ದ್ವೇಷವಿದ್ರೆ ಅದಕ್ಕೆ ಕಾರಣ ಏನು?
- ಬೇರೆ ಯಾರದ್ದಾದರೂ ಕುಮ್ಮಕ್ಕು ಇತ್ತಾ? ಇದ್ದರೆ ಅದಕ್ಕೆ ಕಾರಣ ಏನು?
- ಅಕ್ಷಯ್ ಗೆ ಇತರ ಯಾರದ್ದಾದರೂ ವೈಯಕ್ತಿಕ ದ್ವೇಷ ಇತ್ತಾ? ಹಾಗಿದ್ದರೆ ಅದು ಯಾರು?
- ಹಂತಕರ ಪೈಕಿ ಒಬ್ಬಾತ ಸದ್ಯ ಕಲ್ಲೇಗ ಟೈಗರ್ಸ್ ಹುಲಿ ವೇಷ ತಂಡದಲ್ಲಿದ್ದ ಎನ್ನಲಾಗುತ್ತಿದ್ದು, ಮತ್ತೊಬ್ಬ ತಂಡ ಬಿಟ್ಟು ಬೇರಾಗಿದ್ದ ಎಂಬ ಚರ್ಚೆಯೂ ಇದೆ. ಈ ಹಿನ್ನೆಲೆಯಲ್ಲೂ ಪೋಲಿಸರ ತನಿಖೆ ಮಾಡಬೇಕಿದೆ.
ಇನ್ನೂ ಹತ್ತು ಹಲವು ಅನುಮಾನಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗಳಾಗುತ್ತಿದ್ದು, ಆರೋಪಿಗಳನ್ನು ಪೋಲಿಸರು ಟ್ರೀಟ್ ಮೆಂಟ್ ನಲ್ಲಿ ಬಾಯಿ ಬಿಡಿಸಿದರೆ ಅಸಲಿ ಸತ್ಯ ಗೊತ್ತಾಗಬಹುದು…!!