
ಹ್ಯಾಕರ್ ಗಳ ಆಟದಿಂದ ಸೌದಿ ಜೈಲು ಸೇರಿದ್ದ ಕಡಬ ನಿವಾಸಿ ಸ್ವದೇಶಕ್ಕೆ ವಾಪಾಸ್ – 11 ತಿಂಗಳ ಜೈಲುವಾಸಕ್ಕೆ ಕೊನೆಗೂ ಮುಕ್ತಿ
- ಕರಾವಳಿ
- November 20, 2023
- No Comment
- 37
ನ್ಯೂಸ್ ಆ್ಯರೋ : ಸೌದಿ ಅರೇಬಿಯಾದ ರಿಯಾದ್ ನ ಜೈಲಿನಲ್ಲಿ ಕಳೆದ 11 ತಿಂಗಳಿನಿಂದ ಬಂಧಿತನಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಐವತ್ತೂರು ಗ್ರಾಮದ ಮೂಜೂರು ನಿವಾಸಿ ಚಂದ್ರಶೇಖರ್ ನವೆಂಬರ್ 20 ರಂದು ಬಿಡುಗಡೆಯಾಗಿ ಸ್ವದೇಶಕ್ಕೆ ಮರಳಲಿದ್ದಾರೆ. ನವೆಂಬರ್ 20ರ ಸೋಮವಾರ ರಿಯಾದ್ ನ ಪೊಲೀಸರು ಚಂದ್ರಶೇಖರ್ ಅವರನ್ನು ವಿಮಾನದ ಮೂಲಕ ಮುಂಬಯಿಗೆ ಕಳುಹಿಸಿ ಕೊಡಲಿದ್ದಾರೆ. ಸಂಜೆಯ ಹೊತ್ತಿಗೆ ಅವರು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಹಾಗಿದ್ದರೆ ಚಂದ್ರಶೇಖರ್ ಹ್ಯಾಕರ್ ಗಳ ಮೋಸದ ಬಲೆಗೆ ಬಿದ್ದಿದ್ದು ಹೇಗೆ?, 11 ತಿಂಗಳ ಹಿಂದೆ ಅಲ್ಲಿ ನಿಜಕ್ಕೂ ನಡೆದಿದ್ದೇನು? ಇಲ್ಲಿದೆ ಡೀಟೈಲ್ಸ್.
OTP ತಿಳಿಸಿ ಜೈಲು ಸೇರಿದ ಚಂದ್ರಶೇಖರ್!
2022 ರಲ್ಲಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಚಂದ್ರಶೇಖರ್ ಬಳಿಕ ಅದೇ ಕಂಪೆನಿಯ ಮೂಲಕ ಸೌದಿ ಅರೇಬಿಯಾದಕ್ಕೆ ತೆರಳಿದರು. ಅಲ್ಲಿ ಅಲ್ಪಾನರ್ ಸೆರಾಮಿಕ್ಸ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಅವರು 2022ರ ನವೆಂಬರ್ನಲ್ಲಿ ಮೊಬೈಲ್ ಹಾಗೂ ಸಿಮ್ ಖರೀದಿ ಮಾಡಲು ಮೊಬೈಲ್ ಶಾಪ್ ಗೆ ಭೇಟಿ ನೀಡಿ, ಅಲ್ಲಿ ಅರ್ಜಿಯೊಂದಕ್ಕೆ ಎರಡು ಬಾರಿ ಹೆಬ್ಬೆಟ್ಟು ನೀಡಿದ್ದರು.ಇದಾದ ವಾರದ ಬಳಿಕ ಅರೇಬಿಕ್ ಭಾಷೆಯಲ್ಲಿ ಹೊಸ ಮೊಬೈಲ್ ಸಂಖ್ಯೆಗೆ ಸಂದೇಶ ಬಂದಿತ್ತು. ಚಂದ್ರಶೇಖರ್ ಆ ಸಂದೇಶವನ್ನು ತೆರೆದಿದ್ದು, 2 ದಿನಗಳ ಬಳಿಕ ಕರೆ ಬಂದು ಸಿಮ್ ಬಗ್ಗೆ ಮಾಹಿತಿ ಕೇಳಲಾಗಿತ್ತು. ಕರೆಗೆ ಪೂರಕವಾಗಿ OTP ತಿಳಿಸಿದ್ದ ಚಂದ್ರಶೇಖರ್ ಅವರನ್ನು ಅಲ್ಲಿನ ಪೊಲೀಸರು ವಾರದ ಬಳಿಕ ಬಂಧಿಸಿದ್ದರು.
ಹ್ಯಾಕರ್ ಗಳ ಕೈಚಳಕ!
ಚಂದ್ರಶೇಖರ್ ಅವರನ್ನು ಮೋಸದ ಬಲೆಗೆ ಬೀಳಿಸಿದ್ದ ಹ್ಯಾಕರ್ ಗಳು ಅವರದೇ ಹೆಸರಿನಲ್ಲಿ ಬ್ಯಾಂಕೊಂದರಲ್ಲಿ ಖಾತೆ ತೆರೆದಿದ್ದರು. ಬಳಿಕ ಅಲ್ಲಿನ ಮಹಿಳೆಯೊಬ್ಬರ ಖಾತೆಯಿಂದ ಚಂದ್ರಶೇಖರ್ ಖಾತೆಗೆ 22 ಸಾವಿರ ರಿಯಲ್ ಜಮೆ ಮಾಡಲಾಗಿತ್ತು. ಇದನ್ನು ಗಮನಿಸಿದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಚಂದ್ರಶೇಖರ್ ಬಂಧನವಾಗಿತ್ತು. ಈ ವಿಚಾರವನ್ನು ಚಂದ್ರಶೇಖರ್ ಗೆಳೆಯರು ಅವರ ಮನೆಯವರಿಗೆ ತಿಳಿಸಿದ್ದರು. ಜೈಲಿನಲ್ಲಿದ್ದಾಗ ಕೇವಲ 2 ನಿಮಿಷ ಮಾತ್ರ ಚಂದ್ರಶೇಖರ್ ಅವರುಗೆ ದೂರವಾಣಿ ಕರೆಗೆ ಅವಕಾಶವಿತ್ತು. ಯಾರನ್ನೂ ಕೂಡ ಭೇಟಿಯಾಗಲು ಅವರಿಗೆ ಅವಕಾಶ ಇರಲಿಲ್ಲ.
ಲಕ್ಷ ಲಕ್ಷ ಹಣಕ್ಕೂ ಬಗ್ಗಿಲ್ಲ ಸೌದಿ ಸರ್ಕಾರ!
ಚಂದ್ರಶೇಖರ್ ಅವರ ಬಿಡುಗಡೆಗಾಗಿ ಅವರ ಗೆಳೆಯರು ಹರಸಾಹಸ ಪಟ್ಟಿದ್ದರು. ಸುಮಾರು 10 ಲಕ್ಷ ಹಣವನ್ನು ವಕೀಲರಿಗೆ ನೀಡಿದ್ದರು. 6 ಲಕ್ಷ ಹಣವನ್ನು ಹಣ ಕಳೆದುಕೊಂಡ ಮಹಿಳೆಗೆ ನೀಡಿದ್ದರು. ಆದರೂ ಬಿಡುಗಡೆ ಸಾಧ್ಯವಾಗಿರಲಿಲ್ಲ. ಅಂತಿಮವಾಗಿ ಈ ವಿಚಾರ ಮಾಧ್ಯಮಗಳಲ್ಲಿ ಬಿತ್ತರವಾದಾಗ ಚಂದ್ರಶೇಖರ್ ಕೆಲಸ ಮಾಡುತ್ತಿದ್ದ ಕಂಪೆನಿ ಎಚ್ಚೆತ್ತಯಕೊಂಡಿತು. ಚಂದ್ರಶೇಖರ್ ಬಿಡುಗಡೆ ಮಾಡಲು ಕಷ್ಟ ಪಡುತ್ತಿದ್ದ ಮಂಗಳೂರಿನ ಕಬೀರ್ ಹಾಗೂ ಮಡಿಕೇರಿಯ ವರುಣ್ ಅವರೊಂದಿಗೆ ಕಂಪೆನಿ ಕೈ ಜೋಡಿಸಿತ್ತು.
ಮದುವೆ ಹೊಸ್ತಿಲಲ್ಲಿದ್ದ ಚಂದ್ರಶೇಖರ್ ಜೈಲು ಪಾಲು!
ಕಡಬ ತಾಲೂಕಿನ ಐವತ್ತೂರು ಗ್ರಾಮದ ಮುಜೂರು ನಿವಾಸಿಯಾಗಿದ್ದ ಚಂದ್ರಶೇಖರ್ ದಿ.ಕೆಂಚಪ್ಪ ಗೌಡ ಹಾಗೂ ಹೇಮಾವತಿ ದಂಪತಿಯ ಕೊನೆಯ ಪುತ್ರ. ಚಂದ್ರಶೇಖರ್ ಅವರಿಗೆ ಊರಿನಲ್ಲಿ ಮದುವೆ ನಿಶ್ಚಿತಾರ್ಥದ ಸಿದ್ಧತೆ ನಡೆಯುತ್ತಿದ್ದಾಗಲೇ ಅವರು ಹ್ಯಾಕರ್ ಗಳ ಬಲೆಗೆ ಬಿದ್ದು ಜೈಲು ಪಾಲಾದರು. ಅಂತಿಮವಾಗಿ ಇದೀಗ ನಿರಪರಾಧಿ ಚಂದ್ರಶೇಖರ್ ಸ್ವದೇಶಕ್ಕೆ ಮರಳುತ್ತಿದ್ದಾರೆ.