Mangalore : ಬೆಳ್ಳಾಯೂರು ಮನೆಗೆ ನುಗ್ಗಿ ದರೋಡೆ ಪ್ರಕರಣದ ಖದೀಮರು ಅಂದರ್ – ಬೈಕ್ ಕದ್ದ ಪ್ರಕರಣ ಭೇದಿಸಿದ ಪೋಲಿಸರಿಗೆ ಸಿಕ್ತು ದರೋಡೆಕೋರರ ಜಾಲ..!!
- ಕರಾವಳಿ
- October 4, 2023
- No Comment
- 97
ನ್ಯೂಸ್ ಆ್ಯರೋ : ಬೆಳ್ಳಾಯೂರು ಗ್ರಾಮದ ಕೊಳ್ನಾಡಿನಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಐದು ಮಂದಿಯನ್ನು ಬಂಧಿಸಲಾಗಿದ್ದು, ಇಬ್ಬರನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.
ದಾವಣಗೆರೆ ಮೂಲದ ರಘು ಎಸ್. (30), ಪ್ರಮೋದ್ ವಿ. (23), ಹೆಚ್. ರವಿಕಿರಣ್ (23), ದಾವಲ ಸಾಬ್ ಹೆಚ್. (25), ಮಂಜುನಾಥ (29) ಬಂಧಿತರು.
ಕಳೆದ ಸೆಪ್ಟೆಂಬರ್ 12ರಂದು ಕೊಲ್ನಾಡಿನ ವಸಂತಿ ಶೆಟ್ಟಿ ಅವರು ಮನೆಯಲ್ಲಿ ಇದ್ದಾಗ ನಾಲ್ಕು ಮಂದಿ ಅಪರಿಚಿತರು ಅವರ 40 ಗ್ರಾಂ ತೂಕದ ಕರಿಮಣಿ ಸರವನ್ನು ದೋಚಿ ಪರಾರಿಯಾಗಿದ್ದರು.
ಅದೇ ದಿನ ಚಂದ್ರಮೌಳೀಶ್ವರ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಸೂರ್ಯಪ್ರಕಾಶ್ ಅವರ ಬೈಕ್ ಕಳವಾಗಿತ್ತು. ಈ ಎರಡೂ ಪ್ರಕರಣಗಳನ್ನು ದಾಖಲಿಸಿಕೊಂಡ ಮೂಲ್ಕಿ ಠಾಣೆಯಲ್ಲಿ ಪೊಲೀಸರು ದರೋಡೆಕೋರರಿಗಾಗಿ ತನಿಖೆ ಪ್ರಾರಂಭಿಸಿದ್ದರು.
ಸೆಪ್ಟೆಂಬರ್ 23 ರಂದು ಮೂಲ್ಕಿ ಠಾಣೆಯ ಪಿ.ಎಸ್.ಐ. ಮಾರುತಿ ಪಿ. ಅವರು ಪುನರೂರು ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಕಳವಾಗಿದ್ದ ಸೂರ್ಯಪ್ರಕಾಶ್ ಅವರ ಬೈಕ್ ನೊಂದಿಗೆ ಆರೋಪಿ ರಘು ಎಸ್. ನನ್ನು ಬಂಧಿಸಿದ್ದು, ಆತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.
ಅಕ್ಟೋಬರ್ 3ರಂದು ಪೊಲೀಸ್ ನಿರೀಕ್ಷಕ ವಿದ್ಯಾಧರ್ ಡಿ. ಬಯ್ಕೆರಿಕರ್ ಪುನರೂರು ಬಳಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಸಂಶಯಾಸ್ಪದವಾಗಿ ಕಂಡು ಬಂದ ಎರಡು ಬೈಕ್ ಹಾಗೂ ಒಂದು ಕಾರನ್ನು ವಿಚಾರಣೆಗೆ ಒಳಪಡಿಸಿದಾಗ ಮೇಲಿನ ಪ್ರಕರಣಕ್ಕೆ ಸಂಬಂಧಿಸಿದ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ಎರಡು ಬೈಕ್, ಒಂದು ಕಾರು, 39.670 ಗ್ರಾಂ ತೂಕದ ತುಂಡಾದ ಕರಿಮಣಿ ಸರ ಸೇರಿದಂತೆ ಒಟ್ಟು 7,63,000 ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ಇಬ್ಬರನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.