ಬೆಂಗಳೂರಿನಲ್ಲಿ ಇಂದು ಬಿಸಿಲಿಗೆ ನಿಂತರೂ ನಿಮ್ಮ ನೆರಳು ಮೂಡುವುದೇ ಇಲ್ಲ..! – ಶೂನ್ಯ ನೆರಳು ಎಂದರೇನು? ಇದು ಸಂಭವಿಸುವುದು ಹೇಗೆ?
- ಕೌತುಕ-ವಿಜ್ಞಾನ
- August 18, 2023
- No Comment
- 117
ನ್ಯೂಸ್ ಆ್ಯರೋ : ಇಂದು(ಆಗಸ್ಟ್ 18) ಬೆಂಗಳೂರಿಗರು ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಲಿದ್ದಾರೆ. ಈ ವರ್ಷದ ಎಪ್ರಿಲ್ 25ರಂದು ಸಂಭವಿಸಿದ್ದ ಶೂನ್ಯ ನೆರಳು ಇಂದು ಕೂಡ ಬೆಂಗಳೂರಿನಲ್ಲಿ ನಡೆಯಲಿದೆ.
ಏನಿದು ಅಪರೂಪದ ವಿದ್ಯಮಾನ?
ಸಾಮಾನ್ಯವಾಗಿ ಬಿಸಿಲಿನಲ್ಲಿರುವ ವಸ್ತುಗಳು ಅಥವಾ ನಾವು ನಿಂತರೆ ನೆರಳು ಮೂಡುತ್ತದೆ. ಆದರೆ ಶೂನ್ಯ ನೆರಳಿನ ದಿನ ನೆರಳು ಮೂಡುವುದೇ ಇಲ್ಲ. +23.5 ಮತ್ತು -23.5 ಡಿಗ್ರಿ ಅಕ್ಷಾಂಶದ ನಡುವಿನ ಸ್ಥಳಗಳಲ್ಲಿ ವರ್ಷಕ್ಕೆ ಎರಡು ಬಾರಿ ಈ ಖಗೋಳ ವಿದ್ಯಾಮಾನ ನಡೆಯುತ್ತದೆ. ಈ ದಿನ ಸೂರ್ಯ ಸರಿಯಾಗಿ ನಮ್ಮ ತಲೆಯ ಮೇಲೆ ಇರುವುದರಿಂದ ನೆರಳು ನಿರ್ದಿಷ್ಟ ಸಮಯದಲ್ಲಿ ಮೂಡುವುದಿಲ್ಲ. ಸೂರ್ಯ ಆಕಾಶದಲ್ಲಿ ಅತ್ಯಧಿಕ ಎತ್ತರಕ್ಕೆ ತಲುಪುವುದರಿಂದ ಬೆಳಕು ನೇರವಾಗಿ ಬೀಳುವುದು ನೆರಳು ಕಾಣಿಸದಿರಲು ಕಾರಣ.
ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನ ಶೂನ್ಯ ನೆರಳು ಸಂಭವಿಸಲಿದೆ. ವಿಜ್ಞಾನ, ಖಗೋಳ ಕೇಂದ್ರಗಳಲ್ಲಿ ಈ ರೀತಿಯ ವಿದ್ಯಮಾನಗಳನ್ನು ವೀಕ್ಷಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ.
ನಿಗದಿತ ಸಮಯದಂದು ಹೊರಗೆ ಬಂದು ಬಿಸಿಲಿನಲ್ಲಿ ನಿಂತರೂ ಈ ಅಚ್ಚರಿಯ ಅನುಭವ ನಿಮಗಾಗಲಿದೆ. ಯಾವುದಾದರೂ ವಸ್ತುವನ್ನು ಇಟ್ಟು ನೆರಳು ಕಾಣಿಸುತ್ತದೆಯೇ ಎಂದು ಪರೀಕ್ಷಿಸಬಹುದು. ಈ ಹಿಂದೆ ಹೈದರಾಬಾದ್, ಮುಂಬಯಿ, ಭುವನೇಶ್ವರ ಮುಂತಾದೆಡೆ ಈ ವಿದ್ಯಮಾನ ನಡೆದಿತ್ತು.