ರಾಜ್ಯದಲ್ಲಿ ಮದ್ರಾಸ್ ಐ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಳ – ಮಾರ್ಗದ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ
- ಆರೋಗ್ಯವೇ ಭಾಗ್ಯ
- August 1, 2023
- No Comment
- 149
ನ್ಯೂಸ್ ಆ್ಯರೋ : ಕೋವಿಡ್ 19 ಸಾಂಕ್ರಾಮಿಕದ ಬಳಿಕ ಮತ್ತೊಂದು ಆರೋಗ್ಯ ಸಮಸ್ಯೆ ದೇಶದಲ್ಲಿ ಆತಂಕಕ್ಕೆ ಕಾರಣವಾಗಿದೆ. ದೇಶದ ಮೂಲೆ ಮೂಲೆಯಲ್ಲಿಯೂ ಜನರಲ್ಲಿ ಮದ್ರಾಸ್ ಐ ಅಥವಾ ಕಣ್ಣಿನ ಸೋಂಕು ಕಾಣಿಸಿಕೊಳ್ಳುತ್ತಿದೆ.
ಸತತವಾಗಿ ನೀರು ಹರಿಯುವುದು, ಕಿರಿಕಿರಿ, ತುರಿಕೆ, ಕಣ್ಣು ರೆಪ್ಪೆಗಳು ಬಾತುಕೊಳ್ಳುವುದು, ಕೆಂಪಾಗುವುದು ಮತ್ತು ಕಣ್ಣುಗಳಲ್ಲಿ ವಿಪರೀತ ನೋವು- ಇದು ಇತ್ತೀಚಿನ ಕೆಲವು ದಿನಗಳಲ್ಲಿ ಕಂಡುಬರುತ್ತಿರುವ ಸಾಮಾನ್ಯ ಸಮಸ್ಯೆಗಳು. ಮುಖ್ಯವಾಗಿ ಉತ್ತರ ಭಾರತದ ಅನೇಕ ಭಾಗಗಳಲ್ಲಿ ಜನರು ಕಣ್ಣಿನ ಕ್ಲಿನಿಕ್ ಮತ್ತು ಆಸ್ಪತ್ರೆಗಳಿಗೆ ದಾಂಗುಡಿ ಇರಿಸುತ್ತಿದ್ದಾರೆ. ಕರ್ನಾಟಕದಲ್ಲಿಯೂ ಸಾಮೂಹಿಕ ‘ಮದ್ರಾಸ್ ಐ’ ಪ್ರಕರಣಗಳು ವರದಿಯಾಗುತ್ತಿವೆ.
ಅಲ್ಲದೇ ವಿಪರೀತ ಮಳೆ ಹಾಗೂ ಥಂಡಿ ವಾತಾವರಣದ ಸನ್ನಿವೇಶವೇ ಕಣ್ಣಿನ ಸೋಂಕು ಸಮಸ್ಯೆಗೆ ಕಾರಣ ಎನ್ನುತ್ತಾರೆ ವೈದ್ಯರು. ಮುಂದಿನ ಕೆಲವು ದಿನಗಳಲ್ಲಿ, ಪ್ರಾಯಶಃ ಮುಂದಿನ ಒಂದು ವಾರದಲ್ಲಿ ಇದು ವಿಕೋಪಕ್ಕೆ ಹೋಗುವ ಸಾಧ್ಯತೆ ಇದೆ. ಹೀಗಾಗಿ ಕಣ್ಣುಗಳ ಸೋಂಕಿನ ಏರಿಕೆಯನ್ನು ವೈದ್ಯರು ‘ಸಾಂಕ್ರಾಮಿಕ’ ಎಂದು ಕರೆದಿದ್ದಾರೆ.
ಸದ್ಯ ದೇಶಾದ್ಯಂತ ಮದ್ರಾಸ್ ಐ ಪ್ರಕರಣಗಳು ಹೆಚ್ಚುತ್ತಿದ್ದು, ಇದೀಗ ಕರ್ನಾಟಕದಲ್ಲೂ ಮದ್ರಾಸ್ ಐ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಮುನ್ನೆಚ್ಚರಿಕೆ ವಹಿಸಲು ಆರೋಗ್ಯ ಇಲಾಖೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಕಂಜಕ್ಟಿವೈಟಿಸ್ ಎಂದು ಕರೆಯಲಾಗುವ ಮದ್ರಾಸ್ ಐ ಅಥವಾ ವೈರಾಣುಗಳಿಂದ ಹರಡುವ ಕಣ್ಣಿನ ಸಮಸ್ಯೆ ವಾತಾವರಣದಲ್ಲಿ ತೇವಾಂಶ ಹೆಚ್ಚಾದಾಗ ಅಥವಾ ಚಳಿ ವಾತಾವರಣದಲ್ಲಿ ಹುಟ್ಟಿಕೊಳ್ಳುವ ವೈರಾಣುಗಳು ನೇರವಾಗಿ ಕಣ್ಣಿನ ಮೇಲೆ ಪರಿಣಾಮ ಉಂಟುಮಾಡುತ್ತದೆ. ಇದರ ನಡೆಗಟ್ಟುವಿಕೆಗೆ ಆರೋಗ್ಯ ಇಲಾಖೆ ಮಾರ್ಗಸೂಚಿಗಳನ್ನು ನೀಡಿದೆ.
ರೋಗ ಲಕ್ಷಣಗಳು:
ಕಣ್ಣು ಕೆಂಪಾಗುವುದು, ನೀರು ಸೋರುವಿಕೆ, ಅತಿಯಾದ ಕಣ್ಣೀರು, ಕಣ್ಣಿನಲ್ಲಿ ತುರಿಕೆ, ಸತತ ಕಣ್ಣು ನೋವು ಮತ್ತು ಚುಚ್ಚುವಿಕೆ, ಬೆಳಕನ್ನು ನೋಡಲು ಸಾಧ್ಯವಾಗದೇ ಇರುವುದು, ದೃಷ್ಟಿ ಮಂಜಾಗುವುದು, ಕಣ್ಣಿನ ಎರಡು ರೆಪ್ಪೆಗಳು ಕೀವು ಮಿಶ್ರಿತದಿಂದ ಕೂಡಿರುವುದು ಇವು ರೋಗ ಲಕ್ಷಣಗಳಾಗಿದೆ. ಈ ಬಗ್ಗೆ ಎಚ್ಚರವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಮುಂಜಾಗ್ರತಾ ಕ್ರಮ:
- ಸ್ವಚ್ಛತೆಗೆ ಆದ್ಯತೆ ಕೊಡಿ
- ಸೋಂಕಿತರ ಕಣ್ಣಿನ ನೇರ ಸಂಪರ್ಕದಿಂದ ದೂರ ಇರುವುದು
- ಸೋಂಕಿತರು ಬಳಸಿದ ಕರವಸ್ತ್ರ ಮತ್ತು ಇತರ ವಸ್ತುಗಳನ್ನು ಬಳಸಬಾರದು
- ಆಗಾಗ್ಗೆ ಸೋಪು ನೀರಿನಿಂದ ಕೈಗಳನ್ನ ತೊಳೆಯಬೇಕು
- ಸೋಂಕಿತರಿಗೆ ಶೀತ, ಜ್ವರ, ಕೆಮ್ಮು ಇದ್ದಲ್ಲಿ ಕೂಡಲೇ ಚಿಕಿತ್ಸೆ ಪಡೆಯಬೇಕು
- ತೀವ್ರ ಸೋಂಕು ಉಂಟಾದರೆ ತಕ್ಷಣವೇ ನೇತ್ರ ತಜ್ಞರನ್ನ ಭೇಟಿ ಮಾಡಬೇಕು