ಅನ್ನಭಾಗ್ಯ ಯೋಜನೆಗೆ ಇಂದೇ ಚಾಲನೆ, ಖಾತೆಗೆ ಹಣ ಜಮಾ – ಗಮನಿಸಿ ಇಂತಹ ಪಡಿತರ ಚೀಟಿದಾರರ ಖಾತೆಗೆ ಹಣ ಜಮೆ ಆಗುವುದಿಲ್ಲ..!
- ಸರ್ಕಾರಿ ಸೇವೆಗಳು
- July 10, 2023
- No Comment
- 309
ನ್ಯೂಸ್ ಆ್ಯರೋ : ರಾಜ್ಯ ಸರಕಾರದ ಬಹು ನಿರೀಕ್ಷಿತ ಅನ್ನಭಾಗ್ಯ ಯೋಜನೆಗೆ ಇಂದು ಚಾಲನೆ ನೀಡಲಾಗಿದೆ. ವಾಗ್ದಾನ ನೀಡಿದ 10 ಕೆಜಿ ಅಕ್ಕಿ ಬದಲು 5 ಕೆಜಿಗೆ ಹಣ ನೀಡಲು ಸಿದ್ದರಾಮಯ್ಯ ನೇತೃತ್ವದ ಸರಕಾರ ನಿರ್ಧರಿಸಿದೆ. ಪಡಿತರ ಪಡೆದವರ ಖಾತೆಗೆ ಮಾತ್ರ ಹಣ ಜಮೆ ಮಾಡಲಾಗುತ್ತದೆ.
ಷರತ್ತು ಅನ್ವಯ
ಆಹಾರ ಇಲಾಖೆಯಲ್ಲಿ ಲಭ್ಯವಿರುವ ಮಾಹಿತಿ ಆಧರಿಸಿ ಫಲಾನುಭವಿಗಳ ಖಾತೆಗೆ ನೇರ ಹಣ ಹಾಕಲಾಗುತ್ತದೆ. ಅನ್ನಭಾಗ್ಯ ಯೋಜನೆಯಡಿ ಹಣ ಪಡೆಯಲು ಫಲಾನುಭವಿಗಳು ಮೂರು ತಿಂಗಳಲ್ಲಿ ಒಮ್ಮೆಯಾದರೂ ಪಡಿತರ ಆಹಾರ ಧಾನ್ಯ ಪಡೆದಿರಬೇಕು ಎನ್ನುವ ಷರತ್ತು ವಿಧಿಸಲಾಗಿದೆ.
ಪಡಿತರ ಚೀಟಿಯ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾಗಿದ್ದು, ಚಾಲ್ತಿಯಲ್ಲಿದ್ದರೆ ಇಂದಿನಿಂದ ಹಣ ವರ್ಗಾವಣೆ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಪ್ರತ್ಯೇಕ ಬ್ಯಾಂಕ್ ಖಾತೆ ವಿವರ ಅಗತ್ಯವಿಲ್ಲ
ಇದಕ್ಕಾಗಿ ಪಡಿತರ ಚೀಟಿದಾರರು ಪ್ರತ್ಯೇಕ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಇಲಾಖೆಗೆ ನೀಡಬೇಕಿಲ್ಲ. ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರನ್ನು ಹೊಂದಿರದ ಅಥವಾ ಒಂದಕ್ಕಿಂತ ಹೆಚ್ಚಿನ ಮುಖ್ಯಸ್ಥರನ್ನು ಹೊಂದಿರುವ ಪಡಿತರ ಚೀಟಿಗಳ ಕುಟುಂಬಗಳು ಹಣ ಪಡೆಯಲು ಅರ್ಹವಾಗಿರುವುದಿಲ್ಲ. ಅಂತಹ ಕುಟುಂಬಗಳು ಆಹಾರ ಇಲಾಖೆ ಅಧಿಕಾರಿಗಳನ್ನು ಭೇಟಿಯಾಗಬೇಕು ಎಂದು ತಿಳಿಸಲಾಗಿದೆ.