‘ಜವಾನ್’ ಚಿತ್ರತಂಡದ ವಿರುದ್ದವೇ ದುರು ದಾಖಲಿಸಿದ್ರಾ ಶಾರುಖ್ ಖಾನ್? – ಏನಿದು ಹೊಸ ಬೆಳವಣಿಗೆ?
- ಮನರಂಜನೆ
- August 14, 2023
- No Comment
- 134
ನ್ಯೂಸ್ ಆ್ಯರೋ : ಸತತ ಸೋಲಿಗೆ ಸಿಲುಕಿದ್ದ ಬಾಲಿವುಡ್ ಬಾದ್ ಷಾ ಇದೀಗ ಮೈಕೊಡವಿ ಭರ್ಜರಿ ಗೆಲುವಿನೊಂದಿಗೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ವರ್ಷರಂಭದಲ್ಲಿ ತೆರೆಕಂಡ ‘ಪಠಾಣ್’ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಗಳಿಕೆ ಮಾಡಿದ್ದು ಅದೇ ಜೋಶ್ ಅವರ ಮುಂದಿನ ಜವಾನ್ ಚಿತ್ರಕ್ಕೂ ಮುಂದುವರಿಯುವ ಲಕ್ಷಣ ಇದೆ. ಕಾಲಿವುಡ್ ನ ಜನಪ್ರಿಯ ನಿರ್ದೇಶಕ ಅಟ್ಲಿ ಆ್ಯಕ್ಷನ್ ಕಟ್ ಹೇಳಿರುವ ಚಿತ್ರ ಆರಂಭದಲ್ಲೇ ಗಮನ ಸೆಳೆದಿತ್ತು. ಇದೀಗ ಪೋಸ್ಟರ್, ಪ್ರಿವ್ಯೂ ವೀಡಿಯೋ ಮೂಲಕ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ.
ಕ್ರಮಕ್ಕೆ ಮುಂದಾದ ಶಾರುಖ್
‘ಜವಾನ್’ ಸಿನಿಮಾ ಸೆಪ್ಟಂಬರ್ 7ರಂದು ವಿಶ್ವಾದ್ಯಂತ ತೆರೆ ಕಾಣಲಿದೆ. ಈ ಮಧ್ಯೆ ಸಿನಿಮಾ ಮೇಲಿನ ನಿರೀಕ್ಷೆ ಬೆಟ್ಟದಷ್ಟು ಇರುವ ಕಾರಣ ಚಿತ್ರದ ಕ್ಲಿಪ್ ಅನ್ನು ಕೆಲವರು ಹರಿಯ ಬಿಟ್ಟಿರುವುದು ಶಾರುಖ್ ಚಿಂತೆಗೆ ಕಾರಣವಾಗಿದೆ. ಹೀಗಾಗಿಯೇ ಅವರು ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಮುಂದಾಗಿದ್ದಾರೆ.
ಪೊಲೀಸರಿಗೆ ದೂರು
ರೆಡ್ ಚಿಲ್ಲೀಸ್ ಬ್ಯಾನರ್ ಅಡಿಯಲ್ಲಿ ‘ಜವಾನ್’ ಚಿತ್ರವನ್ನು ಶಾರುಖ್ ಪತ್ನಿ ಗೌರಿ ಖಾನ್ ನಿರ್ಮಿಸಿದ್ದಾರೆ. ಹೀಗಾಗಿ ಆಗಸ್ಟ್ 10ರಂದು ಮುಂಬಯಿಯ ಸಾಂತಾಕ್ರ್ಯೂಜ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಶಾರುಖ್, ಕ್ಲಿಪ್ ಲೀಕ್ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರಂತೆ. ಸಿನಿಮಾದ ಕ್ಲಿಪ್ ಚಿತ್ರತಂಡದವರಿಗೆ ಅಲ್ಲದೆ ಮತ್ಯಾರಿಗೂ ಸಿಗುವುದಿಲ್ಲ. ಹೀಗಾಗಿ ಶಾರುಖ್ ತಂಡದವರ ವಿರುದ್ದವೇ ದೂರು ದಾಖಲಿಸಿದಂತಾಗಿದೆ.
‘ಜವಾನ್’ ಶೂಟಿಂಗ್ ಆರಂಭವಾದಾಗಿನಿಂದಲೂ ಕ್ಲಿಪ್ ಲೀಕ್ ಆಗುವ ಸಮಸ್ಯೆ ಕಂಡು ಬಂದಿತ್ತು. ಶೂಟಿಂಗ್ ಸಂದರ್ಭದ ದೃಶ್ಯ ಹೊರಹೋಗದಂತೆ ಮೊಬೈಲ್ ಫೋನ್ ನಿಷೇಧಿಸಲಾಗಿತ್ತು. ಇಷ್ಟೆಲ್ಲಾ ಕ್ರಮ ಕೈಗೊಂಡರೂ ದೃಶ್ಯ ಸೋರಿಕೆಯಾಗುತ್ತಿರುವುದು ಚಿತ್ರತಂಡಕ್ಕೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
‘ಜವಾನ್’ ಚಿತ್ರದ ಮೂಲಕ ಲೇಡಿ ಸೂಪರ್ ಸ್ಟಾರ್ ನಯನತಾರಾ ಬಾಲಿವುಡ್ ಪ್ರವೇಶಿಸುತ್ತಿದ್ದಾರೆ. ತಮಿಳಿನಿನ ಜನಪ್ರಿಯ ನಟ ವಿಜಯ್ ಸೇತುಪತಿ ಈ ಸಿನಿಮಾ ಮೂಲಕ ಮೊದಲ ಬಾರಿ ಶಾರುಖ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಕನ್ನಡತಿ ಪ್ರಿಯಾಮಣಿ ಕೂಡ ಮುಖ್ಯ ಪಾತ್ರದಲ್ಲಿದ್ದಾರೆ. ದೀಪಿಕಾ ಪಡುಕೋಣೆ ಅತಿಥಿ ಪಾತ್ರ ನಿರ್ವಹಿಸಿದ್ದು, ಅಭಿಮಾನಿಗಳು ಚಿತ್ರ ಬಿಡುಗಡೆಯನ್ನೇ ಎದುರು ನೋಡುತ್ತಿದ್ದಾರೆ.