ನಟ ನಾಗಭೂಷಣ್ ಹಿಟ್ ಆ್ಯಂಡ್ ರನ್ ಪ್ರಕರಣ – ಕೊನೆಗೂ ಘಟನೆ ಬಗ್ಗೆ ಮೌನ ಮುರಿದ ನಟ ಹೇಳಿದ್ದೇನು?
- ಮನರಂಜನೆ
- October 10, 2023
- No Comment
- 79
ನ್ಯೂಸ್ ಆ್ಯರೋ : ಕಾರು ಅಪಘಾತದಿಂದ ಮೃತಪಟ್ಟವರ ಕುಟುಂಬಕ್ಕೆ ಆದ ನೋವಿನ ಅರಿವು ನನಗೆ ಇದೆ. ಅವರ ಕುಟುಂಬದ ಹತ್ತಿರದವರ ಜೊತೆ ಮಾತನಾಡಿದ್ದೇವೆ. ಆ ಕುಟುಂಬಕ್ಕೆ ಏನೇ ಸಹಾಯ ಬೇಕಿದ್ದರೂ ಮಾಡುವುದಾಗಿ ನಟ ನಾಗಭೂಷಣ್ ಹೇಳಿದ್ದಾರೆ.
ಕಾರು ಅಪಘಾತದ ಬಳಿಕ ಮೊದಲ ಬಾರಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಟ್ ಅಂಡ್ ರನ್ ಅಂತ ಹೇಳಬೇಡಿ. ಅಪಘಾತ ಬಳಿಕ ನಾನೇ ಅವರನ್ನು ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದ್ದೇನೆ ಎಂದು ಹೇಳುವಾಗ ಭಾವುಕರಾದರು.
ಆ ಘಟನೆಯನ್ನು ಅರಗಿಸಿಕೊಳ್ಳಲು ನನಗೆ ಇನ್ನೂ ಸಮಯ ಬೇಕು. ಕೋಣನಕುಂಟೆ ಕ್ರಾಸ್ ಬಳಿ ನಡೆದ ಘಟನೆ ಬಳಿಕ ನಾನೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದೆ ಎಂದು ಹೇಳಿದರು.
ಪೊಲೀಸರು ಗಾಯಾಳುಗಳ ಮುಂದೆಯೇ ನನ್ನ ಆಲ್ಕೋಹಾಲ್ ಹಾಗೂ ರಕ್ತ ಪರೀಕ್ಷೆ ಮಾಡಿಸಿದರು. ಅನಂತರ ನಾನು ಆಸ್ಪತ್ರೆಯಿಂದ ನೇರ ಪೊಲೀಸ್ ಠಾಣೆಗೆ ಹೋಗಿ ಜಾಮೀನು ಪಡೆದು ಹೊರಬಂದೆ ಎಂದು ಘಟನೆ ಬಗ್ಗೆ ವಿವರಿಸಿದರು.
ನನ್ನ ತಂದೆ ಕೂಡ ಹಿಟ್ ಅಂಡ್ ರನ್ ಪ್ರಕರಣದಲ್ಲಿ ನಿಧನರಾಗಿದ್ದರು ಎಂದು ನೆನಪಿಸಿಕೊಂಡ ಅವರು, ತಂದೆಯನ್ನು ಸಾಯಿಸಿದ್ದು ಯಾರು ಎಂಬುದು ಇವತ್ತಿಗೂ ಗೊತ್ತಿಲ್ಲ. ಮೃತರ ಕುಟುಂಬದ ಜೊತೆ ನಾನು ಸಂಪರ್ಕದಲ್ಲಿದ್ದು ಯಾವ ಸಹಾಯ ಮಾಡಲು ಸಾಧ್ಯವೋ ಅದನ್ನು ಖಂಡಿತ ಮಾಡುತ್ತೇನೆ. ಈ ಸಮಯದಲ್ಲಿ ಇನ್ನೇನು ಮಾಡಲು ಸಾಧ್ಯ ಎಂದು ಹೇಳಿದರು.
ದಯವಿಟ್ಟು ಅಪಘಾತ ಮಾಡಿದರೆ ಯಾರು ಓಡಿ ಹೋಗಬೇಡಿ ಎಂದು ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ನಾಗಭೂಷಣ್ ಜೊತೆ ಅವರ ವಕೀಲರಾದ ದಿಲೀಪ್ ಉಪಸ್ಥಿತರಿದ್ದರು.