ಈ ಐದು ಜನರು ಯಾವಾಗಲೂ ಮೂರ್ಖರಾಗಿಯೇ ಇರ್ತಾರೆ; ಇವರ ಜೊತೆ ಹುಷಾರ್ ಆಗಿರಿ ಎಂದ ಚಾಣಕ್ಯ ನೀತಿ
ಆರ್ಥಿಕ ತಜ್ಞರಾಗಿರುವ ಆಚಾರ್ಯ ಚಾಣಕ್ಯರು ಮನುಷ್ಯ ಹೇಗಿರಬೇಕು ಎಂಬ ವಿಷಯಗಳು ಸೇರಿದಂತೆ ಮಾನವಕುಲಕ್ಕೆ ತಿಳಿಹೇಳುವ ಎಲ್ಲದರ ಬಗ್ಗೆಯೂ ಹೇಳಿದ್ದಾರೆ. ಆಚಾರ್ಯ ಚಾಣಕ್ಯರು ಹೇಳಿದ ಸಲಹೆಗಳೇ ಇಂದು ಚಾಣಕ್ಯ ನೀತಿಗಳು ಎಂಬ ಹೆಸರಿನಲ್ಲಿ ಚಿರಪರಿಚಿತವಾಗಿವೆ. ಚಾಣಕ್ಯ ನೀತಿ ಪ್ರಕಾರ, ಈ ಐದು ವರ್ಗದ ಜನರು ಜೀವನದಲ್ಲಿ ಸದಾ ಮೂರ್ಖರು ಆಗಿರುತ್ತಾರೆ. ಹಾಗಾಗಿ ಈ ಮೂರ್ಖರ ಜೊತೆ ವ್ಯವಹರಿಸುವಾಗ ತುಂಬಾನೇ ಎಚ್ಚರಿಕೆಯಿಂದಿರಬೇಕು ಎಂದು ಸಲಹೆ ನೀಡಿದ್ದಾರೆ. ಚಾಣಕ್ಯ ಹೇಳಿರುವ ಆ ಐದು ಮೂರ್ಖರು. . .
1. ಸ್ವಯಂಘೋಷಿತ ಬುದ್ಧಿವಂತರು: ಈ ಜನರು ತಮ್ಮನ್ನು ಬುದ್ಧಿವಂತರು ಎಂದು ತಾವೇ ಘೋಷಿಸಿಕೊಂಡಿರುತ್ತಾರೆ. ಆದರೆ ಇವರೇ ಅತಿದೊಡ್ಡ ಮೂರ್ಖರಾಗಿರುತ್ತಾರೆ. ಇವರು ಯಾರ ಮಾತು ಅಥವಾ ಸಲಹೆಗಳನ್ನು ಕೇಳಲು ಸಿದ್ಧರಾಗಿರುವದಿಲ್ಲ. ಹಾಗಾಗಿ ಈ ರೀತಿಯ ಜನರಿಂದ ಯಾವುದೇ ಕಾರಣಕ್ಕೂ ಸಲಹೆ ಪಡೆದುಕೊಳ್ಳಬಾರದು. ಸಲಹೆ ಅಥವಾ ಸಹಾಯ ಕೇಳಲು ಹೋದ್ರೆ ನಿಮ್ಮನ್ನು ಅವಮಾನಿಸುವ ಗುಣ ಹೊಂದಿರುತ್ತಾರೆ.
2.ಮತ್ತೊಬ್ಬರನ್ನು ಅವಮಾನಿಸುವ ವ್ಯಕ್ತಿ: ಸಣ್ಣ ಸಣ್ಣ ವಿಷಯಗಳಿಗೂ ತಮ್ಮ ಸುತ್ತಲಿನ ಜನರನ್ನು ಪದೇ ಪದೇ ಅವಮಾನಿಸುವ ವ್ಯಕ್ತಿಯೂ ಮೂರ್ಖನಾಗಿರುತ್ತಾನೆ. ಇವರ ಜೊತೆಯಲ್ಲಿದ್ದು ಅವಮಾನಕ್ಕೆ ಒಳಗಾಗೋದಕ್ಕಿಂತ ದೂರವಿರೋದು ಒಳ್ಳೆಯದು ಎಂದು ಚಾಣಕ್ಯರು ಹೇಳುತ್ತಾರೆ. ಇಂತಹವರನ್ನು ಸಮಾಜ ಎಂದಿಗೂ ಗೌರವಿಸುವದಿಲ್ಲ.
3.ತಮ್ಮನ್ನು ಹೊಗಳಿಕೊಳ್ಳುವ ವ್ಯಕ್ತಿಗಳು: ಚಾಣಕ್ಯ ನೀತಿ ಪ್ರಕಾರ, ಕೆಲವರು ಎಲ್ಲರ ಮುಂದೆ ತಮ್ಮ ಬಗ್ಗೆ ತಾವೇ ಗುಣಗಾನ ಮಾಡಿಕೊಳ್ಳುತ್ತಿರುತ್ತಾರೆ. ಇಂತಹವರನ್ನು ಸಹ ಚಾಣಕ್ಯರು ಮೂರ್ಖ ಎಂದು ಕರೆದಿದ್ದಾರೆ. ಇಂತಹವರು ತಮ್ಮ ಮುಂದೆ ಬೇರೆಯವರ ಬಗ್ಗೆ ಹೊಗಳಿ ಮಾತಾಡೋದನ್ನು ಎಂದಿಗೂ ಸಹಿಸಿಕೊಳ್ಳುವುದಿಲ್ಲ ಹಾಗೂ ಯಾರ ಮಾತನ್ನ ಕೇಳಿಸಿಕೊಳ್ಳುವ ತಾಳ್ಮೆ ಇವರ ಬಳಿ ಇರಲ್ಲ.
4.ವಿವೇಚನಾರಹಿತವಾಗಿ ಕೆಲಸ ಮಾಡೋದು: ಸ್ವಲ್ಪವೂ ಯೋಚಿಸದೇ ವಿವೇಚನಾರಹಿತವಾಗಿ ಕೆಲಸ ಮಾಡುವ ಜನರು ಮೂರ್ಖರಾಗಿರುತ್ತಾರೆ. ಇಂತಹ ಜನರು ತಮ್ಮ ನಿರ್ಧಾರಗಳಿಂದಲೇ ನಷ್ಟ ಮತ್ತು ಸಂಕಷ್ಟದಲ್ಲಿ ಸಿಲುಕಿಕೊಳ್ಳುತ್ತಾರೆ. ಕೆಲಸ ಮಾಡುವ ಮುನ್ನ ಅದರ ಪರಿಣಾಮಗಳ ಬಗ್ಗೆ ಇವರು ಯೋಚಿಸಲ್ಲ.
5.ಅನಾವಶ್ಯಕ ಸಲಹೆ ನೀಡುವವರು: ಕೆಲವರು ಅವಶ್ಯಕತೆ ಇಲ್ಲದಿದ್ದರೂ ಸಲಹೆ ನೀಡುತ್ತಿರುತ್ತಾರೆ. ಯಾವಾಗಲೂ ತಮ್ಮ ಬುದ್ಧಿವಂತಿಕೆಯನ್ನು ಪ್ರದರ್ಶಿಸಲು ಪ್ರಯತ್ನಿಸುವ ವ್ಯಕ್ತಿಗಳು ಸಹ ಮೂರ್ಖರಾಗಿರುತ್ತಾರೆ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ.
Leave a Comment